ಬಿಹಾರ ನಿತೀಶ್ ಸರ್ಕಾರಕ್ಕೆ ಸಂಕಷ್ಟ: 17 JDU ಶಾಸಕರು ಸಂಪರ್ಕದಲ್ಲಿದ್ದಾರೆ RJD ನಾಯಕ!
ಅರುಣಾಚಲ ಪ್ರದೇಶದಲ್ಲಿ ಮಿತ್ರ ಪಕ್ಷ ಬಿಜೆಪಿಯೇ ತನ್ನ ಶಾಸಕನ್ನು ಆಪರೇಷನ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿರುವ ಮುಖಭಂಗವನ್ನು ಅನುಭವಿಸುತ್ತಿರುವ ಜೆಡಿಯುಗೆ ಮತ್ತೊಂದು ಶಾಕ್ ಎದುರಾಗಿದೆ. ಬಿಹಾರದಲ್ಲಿ ಆಡಳಿತಾರೂಢ ಪಕ್ಷ ಜೆಡಿಯುನ 17 ಶಾಸಕರು ಆರ್ಜೆಡಿ ಸಂಪರ್ಕದಲ್ಲಿದ್ದಾರೆ ಎಂದು ಆರ್ಜೆಡಿ ಮುಖಂಡ ಶಯಂ ರಾಜಕ್ ಹೇಳಿದ್ದಾರೆ.
“ಜೆಡಿಯು ಪಕ್ಷದೊಳಗೆ ಮತ್ತು ಪಕ್ಷದ ವ್ಯವಹಾರಗಳ ಹಿಡಿತದಲ್ಲಿ ನಿತೀಶ್ ಕುಮಾರ್ ಅವರ ನಿರಂಕುಶಾಧಿಕಾರಿ ವರ್ತನೆ ಅಲ್ಲಿನ ಬಹುಪಾಲು ಶಾಸಕರಿಗೆ ಕಿರಿಕಿರಿಯನ್ನುಂಟು ಮಾಡಿದೆ. ನಿತೀಶ್ ಕುಮಾರ್ ತಮ್ಮ ರಾಜಕೀಯ ಚಿತ್ರಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ” ಎಂದು ವಿಧಾನಸಭಾ ಚುನಾವಣೆಗೆ ಮೊದಲು ನಿತೀಶ್ ಕುಮಾರ್ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಶಯಂ ರಾಜಕ್ ಆರೋಪಿಸಿದ್ದಾರೆ.
“ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಶೀಘ್ರದಲ್ಲೇ ಬೀಳಲಿದೆ. ಮಿತ್ರಪಕ್ಷಗಳ ನಡುವೆ ಅಸಮಾಧಾನ ಹೆಚ್ಚುತ್ತಿದೆ. ಆಡಳಿತದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಮತ್ತು ಜೆಡಿಯು ನಡುವೆ ಹೆಚ್ಚುತ್ತಿರುವ ಹೋರಾಟದಿಂದಾಗಿ ಈಗ ಇದು ಅನಿವಾರ್ಯವಾಗುತ್ತಿದೆ” ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿದ್ದಾರೆ.
“ಜನವರಿ 14 ರ ನಂತರ ಜೆಡಿಯು ತನ್ನ 17 ಶಾಸಕರ ಮತ್ತೊಂದು ಪಕ್ಷಾಂತರವನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿತೀಶ್ ಕುಮಾರ್ ತಮ್ಮ ಪಕ್ಷವನ್ನು ಕಟ್ಟುವಲ್ಲಿ ವಿಫಲರಾಗಿದ್ದಾರೆ” ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಇತ್ತೀಚೆಗೆ ಬಿಜೆಪಿಗೆ ಪಕ್ಷಾಂತರವಾಗಿದ್ದರು. ಹಾಗಾಗಿ ಆರ್ಜೆಡಿ ಮುಖಂಡರ ಈ ಹೇಳಿಕೆ ನಿತೀಶ್ ಕುಮಾರ್ ಅವರಿಗೆ ಮತ್ತೊಂದು ಆಘಾತ ನೀಡಿದೆ.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಮುಖಭಂಗ: BJPಗೆ ರಾಜೀನಾಮೆ ನೀಡಿದ ಮಾಜಿ ಕೇಂದ್ರ ಸಚಿವ!