ರೈತರ ಬೇಡಿಕೆಗಳು ಈಡೇರದಿದ್ದರೆ ಜ.26ರಂದು ಟ್ರಾಕ್ಟರ್ ಪೆರೇಡ್…!
ರೈತರ ಬೇಡಿಕೆಗಳು ಈಡೇರದಿದ್ದರೆ ಜನವರಿ 26 ರಂದು ದೆಹಲಿ ಕಡೆಗೆ ಟ್ರಾಕ್ಟರ್ ಪೆರೇಡ್ ಮಾಡಲು ರೈತ ಸಂಘಗಳು ಕರೆ ಕೊಟ್ಟಿವೆ.
ವಿವಾದಾತ್ಮಕ ಕೃಷಿ ಕಾನೂನಿನ ಕುರಿತು ಸರ್ಕಾರದೊಂದಿಗೆ ಮುಂದಿನ ಸುತ್ತಿನ ಮಾತುಕತೆಗೆ ಮುಂದಾಗಿರುವ ಪ್ರತಿಭಟನಾ ರೈತ ಸಂಘಗಳು ತಮ್ಮ ಸ್ಥಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಜನವರಿ 26 ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯ ಕಡೆಗೆ ಟ್ರ್ಯಾಕ್ಟರ್ ಪೆರೇಡ್ಗೆ ಹೊಸ ಕರೆ ನೀಡಿವೆ. ರೈತರು ಇದಕ್ಕೆ ‘ಕಿಸಾನ್’ ಎಂದು ಹೆಸರಿಟ್ಟಿದ್ದಾರೆ. ಸರ್ಕಾರ ಕೃಷಿ ವಿರೋಧಿ ಕಾನೂನನ್ನು ರದ್ದುಪಡಿಸುವವರೆಗೂ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಪಣ ತೊಟ್ಟ ರೈತ ಸಂಘಗಳು ತಿಳಿಸಿವೆ. ಮುಂದಿನ ಸುತ್ತಿನ ಮಾತುಕತೆ ಜನವರಿ 4 ರಂದು ನಡೆಯಲಿದೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಜನವರಿ 26 ರಂದು ರಾಜ್ಪಾತ್ನಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ದೆಹಲಿಯಲ್ಲಿ ಭಾಗವಹಿಸಲಿದ್ದಾರೆ.
“ನಾವು ಶಾಂತಿಯುತವಾಗಿದ್ದೇವು, ಶಾಂತಿಯುತವಾಗಿದ್ದೇವೆ ಮತ್ತು ಶಾಂತಿಯುತವಾಗಿರುತ್ತೇವೆ. ಆದರೆ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೆ ದೆಹಲಿ ಗಡಿಯಲ್ಲಿ ಉಳಿಯುತ್ತೇವೆ. ಜನವರಿ 26 ರಂದು ದೆಹಲಿ ಕಡೆಗೆ ಟ್ರ್ಯಾಕ್ಟರ್ ಪೆರೇಡ್ ಮಾಡಲು ನಾವು ಕರೆ ನೀಡಿದ್ದೇವೆ ” ಎಂದು ಪ್ರತಿಭಟನಾ ಸಂಘಗಳು ತಿಳಿಸಿವೆ.
ದೆಹಲಿಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ದರ್ಶನ್ ಪಾಲ್ ಸಿಂಗ್, ತಮ್ಮ ಉದ್ದೇಶಿತ ಮೆರವಣಿಗೆಯನ್ನು “ಕಿಸಾನ್ ಪೆರೇಡ್” ಎಂದು ಕರೆಯಲಾಗುವುದು. ಇದು ಗಣರಾಜ್ಯೋತ್ಸವದ ಮೆರವಣಿಗೆಯ ನಂತರ ನಡೆಯಲಿದೆ ಎಂದು ಹೇಳಿದರು. “ಜನವರಿ 26 ರಂದು ರಾಷ್ಟ್ರಧ್ವಜದೊಂದಿಗೆ ಟ್ರಾಕ್ಟರ್ ಪೆರೇಡ್ ಅನ್ನು” ಕಿಸಾನ್ ಪೆರೇಡ್ “ಎಂದು ಕರೆಯಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದುವರೆಗೆ ಹೆದ್ದಾರಿ ಬಂದ್, ಟೋಲ್, ಮುತ್ತಿಗೆ, ಮುಷ್ಕರ, ಉಪವಾಸ ಸತ್ಯಗ್ರಹ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ರೈತರು ಜನವರಿ 26ಕ್ಕೆ ಟ್ರಾಕ್ಟರ್ ಪೆರೇಡ್ ಗೆ ಕರೆ ಕೊಟ್ಟಿವೆ.