‘ಬೆಂಗಳೂರಿನ ಮೇಲೆ ಈ ಮೂವರದ್ದೇ ಹಿಡಿತ’- ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಹೊಗೆ..!
ಸಿಎಂ ಯಡಿಯೂರಪ್ಪ ಒಂದು ಸಮಸ್ಯಯಿಂದ ಹೊರಬರುವುದರೊಳಗೆ ಇನ್ನೊಂದು ಸಮಸ್ಯೆ ಜೋರಾಗಿರುತ್ತದೆ. ಬಿಜೆಪಿಯಲ್ಲಿ ಎಲ್ಲವು ಸರಿ ಇಲ್ಲ ಅನ್ನುವುದು ಮತ್ತೊಮ್ಮೆ ಸಾಭಿತಾಗಿದೆ. ರಾಜ್ಯದ ವಾಣಿಜ್ಯಿಕ ಮತ್ತು ರಾಜಕೀಯ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನ ಪಾರುಪತ್ಯದ ವಿಚಾರವಾಗಿ ಬಿಜೆಪಿಯಲ್ಲಿ ತೀವ್ರ ಸ್ವರೂಪದ ಅಸಮಾಧಾನ ಸ್ಫೋಟಗೊಂಡಿದೆ. ಬೆಂಗಳೂರಿನ ಮೇಲೆ ಮೂವರು ಹಿಡಿತ ಸಾಧಿಸಿದ್ದಾರೆ. ಈ ಮೂವರು ನಾಯಕರು ಹೇಳಿದ್ದೇ ನಡೆಯುತ್ತೆ ಎಂದು ಉಳಿದ ಬಿಜೆಪಿ ಶಾಸಕರು ನೇರವಾಗಿ ಆರೋಪ ಮಾಡಿದ್ದಾರೆ. ಸಚಿವರಾದ ಅಶೋಕ ಮತ್ತು ಅಶ್ವತ್ಥ ನಾರಾಯಣ ಹಾಗೂ ಬಿಡಿಎ ಅಧ್ಯಕ್ಷ ವಿಶ್ವನಾಥ ಅವರ ಮೇಲೆ ಉಳಿದ ಬಿಜೆಪಿ ನಾಯಕರು ಕೆಂಡವಾಗಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಬೆಂಗಳೂರಿನ ವಿಚಾರಕ್ಕೆ ಬಂದರೇ ಈ ಮೂವರಿಗಷ್ಟೇ ಕಿವಿ ನೀಡುತ್ತಿರುವುದಕ್ಕೆ ಸಿಎಂ ಯಡಿಯೂರಪ್ಪ ಅವರ ಮೇಲೆಯೂ ಶಾಸಕರು ಗರಂ ಆಗಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಕರೆದಿದ್ದ ಸಭೆಯಲ್ಲಿ ಬೆಂಗಳೂರಿನ ಉಳಿದ ಶಾಸಕರು ಈ ಮೂವರ ಮೇಲೆ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿಯೇ ತೋಡಿಕೊಂಡರು ಎಂದು ಟೈಮ್ಸ್ ವರದಿ ತಿಳಿಸಿದೆ.
ಬೆಂಗಳೂರಿನ ಅಭಿವೃದ್ಧಿ ಸಂಬಂಧ ಯಾವುದೇ ಯೋಜನೆಗಳಿದ್ದರೂ ಅದು ಈ ಮೂವರು ಹೇಳಿದಂತೆಯೇ ನಡೆಯುವಂತಾಗಿದೆ. ಹೊಸ ಯೋಜನೆಗಳ ರೂಪುರೇಷೆ ಸಿದ್ಧ ಮಾಡುವ ವಿಚಾರದಲ್ಲಿಯೂ ಇವರೇ ಮುಖ್ಯರಾಗಿದ್ದಾರೆ ಎಂದು ಇತರ ಶಾಸಕರು ಕುದ್ದಿದ್ದಾರೆ.
ಬೆಂಗಳೂರಿನ ಉಸ್ತುವಾರಿಯನ್ನು ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದರೂ ಈ ಮೂವರಿಗೆ ಪರೋಕ್ಷವಾಗಿ ನಿಗಾ ಬಿಟ್ಟುಕೊಟ್ಟಂತಿದೆ ಎಂದು ಬಿಜೆಪಿಯ ರಾಜಧಾನಿ ಶಾಸಕರು ದೂರಿದ್ದಾರೆ ಎನ್ನಲಾಗಿದೆ.