ತಮಿಳು, ಬಂಗಾಳ ಚುನಾವಣೆಯ ನಂತರ ಕಾಂಗ್ರೆಸ್ಗೆ ಚುನಾಯಿತ ಅಧ್ಯಕ್ಷರು ಖಚಿತ: ವೇಣುಗೋಪಾಲ್
ಮುಂಬರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳ ನಂತರ ಜೂನ್ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರು ನೇಮಕವಾಗಲಿದ್ದಾರೆ ಎಂದು ಪಕ್ಷದ ನಾಯಕ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದ್ದು ಶೀಘ್ರದಲ್ಲಿಯೇ ಹೊಸ ಅಧ್ಯಕ್ಷರನ್ನು ಪಡೆಯಲಿದ್ದೇವೆ ಎಂದಿದ್ದಾರೆ.
ಸಿಡಬ್ಲ್ಯುಸಿ ಸಭೆಯಲ್ಲಿ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಪಿ ಚಿದಂಬರಂ ಅವರು ತಕ್ಷಣದ ಸಾಂಸ್ಥಿಕ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಬೇಕು ಎಂದು ಗಾಂಧಿ ಕುಟುಂಬಕ್ಕೆ ಹತ್ತಿರರಾದ ಅಶೋಕ್ ಗೆಹ್ಲೋಟ್, ಅಮರಿಂದರ್ ಸಿಂಗ್, ಎ.ಕೆ ಆಂಟನಿ, ತಾರಿಕ್ ಅನ್ವರ್ ಮತ್ತು ಉಮ್ಮನ್ ಚಾಂಡಿ ಹೇಳಿದ್ದಾರೆ. ಮೊದಲ ಆದ್ಯತೆ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ಸಂಘಟನಾ ಚುನಾವಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: BJPಯಲ್ಲಿ ಹಿರಿಯರು – ಕಿರಿಯರ ನಡುವೆ ಘರ್ಷಣೆ; ಬಿಜೆಪಿ ಕಚೇರಿ ದ್ವಂಸ
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನಪ್ಪಿದಾಗ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಅಂದಿನಿಂದ ಸೋನಿಯಾಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ.
ಸೋನಿಯಾಗಾಂಧಿ ಬಹಳ ದಿನ ಅಧ್ಯಕ್ಷರಾಗಿ ಮುಂದುವರೆಯಲು ಸಾಧ್ಯವಿಲ್ಲ. ಹೊಸ ಅಧ್ಯಕ್ಷರು ಬೇಕು ಎಂಬ ಚರ್ಚೆ ಹಲವು ತಿಂಗಳಿನಿಂದ ಚಾಲ್ತಿಯಲ್ಲಿದೆ. ತಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಮತ್ತು ಗಾಂಧಿ ಕುಟುಂಬದ ಹೊರತಾದವರು ಅಧ್ಯಕ್ಷರಾಗಬೇಕೆಂದು ರಾಹುಲ್ ಉಚ್ಚರಿಸಿದ್ದಾರೆ.
ಇದನ್ನೂ ಓದಿ: ಇತಿಹಾಸವನ್ನು ಬಳಿಸಿಕೊಂಡು ಹೈದರಾಬಾದ್ನಲ್ಲಿ ಲಾಭ ಗಳಿಸಿದ BJP: ಕೇಸರಿ ಪಡೆ ಹೇಳಿದ್ದು ಎಷ್ಟು ಸತ್ಯ?