ರೈತರ ಕರೆಗೆ ಬಂಬಲ: ಶನಿವಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ!
ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಗಾಂಧಿ ಹುತಾತ್ಮ ದಿನದಂದು (ಜ.30) ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಕರೆಗೆ ಬೆಂಬಲ ನೀಡಿರುವ ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ನಾಳೆ (ಶನಿವಾರ) ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.
ರೈತರು ಮತ್ತು ಸರ್ಕಾರದ ನಡುವೆ ಹಲವು ಸುತ್ತಿನ ಮಾತುಗಳು ನಡೆದ ನಂತರವೂ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳದೇ ಇರುವುದು ದುರದೃಷ್ಟ ಎಂದು ಹೇಳಿದರು ಹಜಾರೆ, ತಮ್ಮ ಹುಟ್ಟೂರಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ.
“ನಾನು ನನ್ನ ಹುಟ್ಟೂರು ರಲೇಗಾನ್ ಸಿದ್ದಿಯಲ್ಲಿರುವ ಯಾದವ್ ಬಾಬಾ ದೇವಸ್ಥಾನದಲ್ಲಿ ನಾಳೆಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇನೆ. ಕೋವಿಡ್ ಕಾರಣದಿಂದಾಗಿ ನನ್ನ ಬೆಂಬಲಿಗರು ಊರಿಗೆ ಬಾರದೇ, ನೀವಿರುವಯೇ ಉಪವಾಸ ಮಾಡುವ ಮೂಲಕ ಬೆಂಬಲ ನೀಡಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಣ್ಣಾ ಹಜಾರೆ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಪ್ರಧಾನಿ ಮೋದಿ ಮತ್ತು ಕೃಷಿ ಸಚಿವರಿಗೆ ಐದು ಬಾರಿ ಪತ್ರ ಬರೆದಿದ್ದೇನೆ. ಆದರೂ ಸರ್ಕಾರ ತನ್ನ ನಿಲುವನ್ನು ಬದಲಿಸಿಲ್ಲ ಎಂದು ಹಜಾರೆ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಗಿರೀಶ್ ಮಹಾಜನ್ ರಲೇಗಾನ್ ಅವರು ಹಝಾರೆ ನಿವಾಸಕ್ಕೆ ಭೇಟಿ ನೀಡಿದ್ದು, ಉಪವಾಸ ಸತ್ಯಾಗ್ರಹ ನಡೆಸದಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಕೈಲಾಶ್ ಚೌಧರಿ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಶುಕ್ರವಾರ ಅಣ್ಣಾ ಹಝಾರೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
Read Also: ಬಿಹಾರದಲ್ಲಿ BJP-JDU ನಡುವೆ ಬಿರುಕು? ಕೇಸರಿ ನಾಯಕರನ್ನು ಭೇಟಿಯಾಗಲು ನಿರಾಕರಿಸಿದ ನಿತೀಶ್!