ರೈತ ಮುಖಂಡರ ಮೇಲೆ FIR: ರೈತರ ನೆರವಿಗೆ 70 ವಕೀಲರನ್ನು ನೇಮಿಸಿದ ಪಂಜಾಬ್ ಸರ್ಕಾರ!
ಗಣರಾಜ್ಯೋತ್ಸವದ ದಿನ ನಡೆದ ಅಹಿತರ ಘಟನೆಯ ನಂತರ, ಹಲವು ರೈತರನ್ನು ಬಂಧಿಸಿರುವ ದೆಹಲಿ ಪೊಲೀಸರು, ಹೋರಾಟ ನಿರತ ರೈತರು ಮತ್ತು ರೈತ ಮುಖಂಡರ ವಿರುದ್ಧ FIR ದಾಖಲಿಸಿದ್ದಾರೆ. ಹೀಗಾಗಿ ರೈತರಿಗೆ ಕಾನೂನು ನೆರವು ನೀಡುವ ಉದ್ದೇಶದಿಂದ ಪಂಜಾಬ್ ಸರ್ಕಾರ 70 ವಕೀಲರನ್ನು ನೇಮಿಸಿದೆ. ಅಲ್ಲದೆ, ಟ್ರಾಕ್ಟರ್ ಪರೇಡ್ ವೇಳೆ ಕಾಣೆಯಾಗಿರುವ ರೈತರ ಬಗ್ಗೆ ದೂರು ನೀಡಲು ಸಹಾಯವಾಣಿ ಸಂಖ್ಯೆ 112 ಅನ್ನು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ತೆರೆದಿದ್ದಾರೆ.
“ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ ರೈತರಿಗೆ ತ್ವರಿತ ಕಾನೂನು ನೆರವು ನೀಡುವಂತೆ ಪಂಜಾಬ್ ಸರ್ಕಾರ ಈಗಾಗಲೇ 70 ವಕೀಲರ ತಂಡವನ್ನು ದೆಹಲಿಯಲ್ಲಿ ನೇಮಿಸಿದೆ. ಅಲ್ಲದೆ ಕಾಣೆಯಾದ ರೈತರ ಸಮಸ್ಯೆ ಬಗ್ಗೆ ನಾನು ವೈಯಕ್ತಿಕವಾಗಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಮಾತನಾಡುತ್ತೇನೆ. ಆ ವ್ಯಕ್ತಿಗಳು ಸುರಕ್ಷಿತವಾಗಿ ಮನೆಗೆ ತಲುಪುವಂತೆ ನೋಡಿಕೊಳ್ಳುತ್ತೇನೆ. ಸಹಾಯಕ್ಕಾಗಿ 112 ಗೆ ಕರೆ ಮಾಡಿ” ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಪಂಜಾಬ್ ಕ್ಯಾಬಿನೆಟ್ ಸಹೋದ್ಯೋಗಿಗಳು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಸೋಮವಾರ ಭೇಟಿಯಾದರು ಎಂದು ಮುಖ್ಯಮಂತ್ರಿಯ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಜೊತೆಗೆ ವರದಿಯಲ್ಲಿ ಕಾಂಗ್ರೆಸ್ನ ಎರಡು ತಂಡಗಳು ಈ ವಿಷಯವಾಗಿ ಗೃಹ ಸಚಿವರನ್ನು ಭೇಟಿಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಬಜೆಟ್ 2021ರ ಮೂಲಕ ರೈತ ವಿರೋಧಿ ಕೃಷಿ ಕಾಯಿದೆಗಳ ಜಾರಿ! ಪಡಿತರಕ್ಕೆ ಕತ್ತರಿ!
ಇವರ ಮನವಿಗೆ ಸ್ಪಂದಿಸಿರುವ ಅಮಿತ್ ಷಾ, ಕೇಳಿದ ಕೂಡಲೇ ಪೊಲೀಸರು ವಶಕ್ಕೆ ಪಡೆದ ಎಲ್ಲರ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಪೊಲೀಸ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ಪಂಜಾಬ್ ಸಚಿವ ಸುಖೀಂದರ್ ಸಿಂಗ್ ರಾಂಧವ ತಿಳಿಸಿದ್ದಾರೆ. “ನಾವು ಹಿಂದಿರುಗುವ ಹೊತ್ತಿಗೆ, 119 ರ ಪಟ್ಟಿಯನ್ನು ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.
Punjab Government has already arranged a team of 70 lawyers in Delhi to ensure quick legal recourse to farmers booked by the Delhi police. I will personally take up the issue of missing farmers with MHA & ensure these persons reach home safely. For assistance call 112.
— Capt.Amarinder Singh (@capt_amarinder) February 1, 2021
ಪಂಜಾಬ್ ಸರ್ಕಾರದಿಂದ ನೇಮಕಗೊಂಡ ವಕೀಲರು ಬಂಧಿತ ವ್ಯಕ್ತಿಗಳು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡುತ್ತಾರೆ ಮತ್ತು ಈ ವ್ಯಕ್ತಿಗಳಿಗೆ ಉಚಿತವಾಗಿ ನ್ಯಾಯ ಒದಗಿಸಿ ಕಾನೂನು ಹೋರಾಟ ನಡೆಸುತ್ತಾರೆ. ಬಂಧಿತ ವ್ಯಕ್ತಿಗಳ ಬಗ್ಗೆ ಮೃದುವಾಗಿ ನಡೆದುಕೊಳ್ಳಬೇಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಎಂದು ರಾಂಧವ ಹೇಳಿದ್ದಾರೆ.
119 ಪಟ್ಟಿ
119 ಜನರ ಪಟ್ಟಿಯಲ್ಲಿ ಇರುವ ಎಫ್ಐಆರ್ ಸಂಖ್ಯೆ 31/21 ಅಡಿಯಲ್ಲಿ 9 ಮಂದಿಯನ್ನು ದೆಹಲಿ ಪೊಲೀಸರು ಮುಖರ್ಜಿ ನಗರದಲ್ಲಿ ಬಂಧಿಸಿದ್ದಾರೆ. ಬಂಧಿತರಾದವರು ಹರಿಯಾಣದ ಪಟಿಯಾಲ, ಫಿರೋಜ್ಪುರ, ಮಾನ್ಸಾ, ಹೋಶಿಯಾರ್ಪುರ್, ಖಮ್ನೋ, ಬರ್ನಾಲಾ ಮತ್ತು ಯಮುನಾ ನಗರ ಮೂಲದವರು. ಏಳು ಮಂದಿ ನಂಗ್ಲೋಯಿ ಪೊಲೀಸ್ ಠಾಣೆ ಬಂಧನದಲ್ಲಿದ್ದು, ಈ ಬಂಧಿತರೆಲ್ಲರೂ ಹರಿಯಾಣ ಮೂಲದವರು. ಹರಿಯಾಣ ಮತ್ತು ಪಂಜಾಬ್ನ 31 ವ್ಯಕ್ತಿಗಳ ಮತ್ತೊಂದು ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು, ಅವರನ್ನು ನಂಗ್ಲೋಯಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳು: ಗೆದ್ದು ಸೋಲುತ್ತಿರುವ ಮೋದಿ; ಸೋತು ಗೆಲ್ಲುತ್ತಿದ್ದಾರೆ ರೈತರು!