ಮಂಗಳೂರು ಏರ್‌ಪೋರ್ಟ್ ನಿರ್ವಹಣೆ‌ ಅದಾನಿಗೆ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ!

ಕರ್ನಾಟಕದ ಮಂಗಳೂರು ಏರ್‌ಪೋರ್ಟ್‌ಅನ್ನು ಖಾಸಗೀ ಕಂಪನಿಯಾದ ಅದಾನಿ ಗ್ರೂಪ್‌ಗೆ ಗುತ್ತಿಗೆ ನೀಡಿರುವುದಕ್ಕೆ ಸಂಬಂಧಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ನೀಡಿದೆ.

ಕೇಂದ್ರ ಸರ್ಕಾರವು ಈ ಹಿಂದೆ 12 ವಿಮಾನ ನಿಲ್ದಾಣಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಿಕೊಡಲು ನಿರ್ಧರಿಸಿತ್ತು. ಈ ಬಗ್ಗೆ ಅದಾನಿ ಸಂಸ್ಥೆಯೊಂದಿಗೆ 2020 ರ ಫೆಬ್ರವರಿಯಲ್ಲಿ ಒಪ್ಪಂದ ನಡೆದಿತ್ತು. ಅದಾದ ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ 06 ಏರ್‌ಪೋರ್ಟ್‌ಗಳನ್ನು ಅಂದಾನಿ ಗ್ರೂಪ್‌ ಕಂಪನಿಗೆ ನೀಡಲಾಗಿದೆ.

ಸರ್ಕಾರದ ನಡೆಯನ್ನು ಪ್ರಶ್ನಿಸಿ ಮತ್ತು ಏರ್‌ಪೋರ್ಟ್‌ಗಳನ್ನು ಖಾಸಗೀಕರಣ ಗೊಳಿಸುವ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಒಕ್ಕೂಟ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ವಿಭಾಗೀಯ ಪೀಠ ಕೇಂದ್ರಕ್ಕೆ ನೋಟಿಸ್ ನೀಡಿದೆ.

ಆರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಮುನ್ನಡೆಸಲು ಕೇಂದ್ರ ಸಚಿವ ಸಂಪುಟ 2018 ರ ನವೆಂಬರ್ 8 ರಂದು ತಾತ್ವಿಕವಾಗಿ ಅನುಮೋದನೆ ನೀಡಿತ್ತು. ಆ ಕ್ಯಾಬಿನೆಟ್ ನಿರ್ಧಾರದ ಮೇಲೆ ಖಾಸಗೀಕರಣಕ್ಕಾಗಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯನ್ನು ‘ಕಾನೂನುಬಾಹಿರ, ಅನಿಯಂತ್ರಿತ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆಯ ವ್ಯಾಪ್ತಿಗೆ ಮೀರಿದೆ’ ಎಂದು ಘೋಷಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

ಇದನ್ನೂ ಓದಿ: ಕೃಷಿ ಕಾನೂನುಗಳು ಅದಾನಿ ಪರವಾಗಿವೆ; ದಾಖಲೆ ಬಿಡುಗಡೆ ಮಾಡಿದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

ಖಾಸಗೀಕರಣಕ್ಕೆ ಬಿಡ್ ಮುಖಾಂತರ ಟೆಂಡರ್‌ ಸರ್ಕಾರ ಆಹ್ವಾನಿಸಿತ್ತು. ಸುಮಾರು ಕಂಪನಿಗಳು ಬಿಡ್‌ ಸಲ್ಲಿಸಿದ್ದವು. ಅವುಗಳಲ್ಲಿ ಅತ್ಯಂತ ಕಡಿಮೆ ಮೊತ್ತದ ಬಿಡ್‌ ಸಲ್ಲಿಸಿದ್ದ ಗುಜರಾತ್‌ ಮೂಲದ ಅದಾನಿ ಇನ್‌ಫ್ರಾ ಗ್ರೂಪ್‌ಗೆ ಬಿಡ್‌ ನೀಡಲಾಗಿದ್ದು, ಮುಂದಿನ 50 ವರ್ಷಗಳ ಕಾಲ ಈ ಆರು ವಿಮಾನಗಳ ನಿರ್ವಹಣೆಯನ್ನು ವಹಿಸಲಾಗಿದೆ.

ಅವುಗಳಲ್ಲಿ, ಅಹಮದಾಬಾದ್‌, ಲಖನೌ, ಮಂಗಳೂರು, ಜೈಪುರ, ಗುವಾಗಟಿ ಹಾಗೂ ತಿರುವನಂತಪುರಂ ಏರ್‌ಪೋರ್ಟ್‌ಗಳ ನಿರ್ವಹಣೆಯನ್ನು ಅದಾನಿ ಗ್ರೂಪ್‌ಗೆ ವಹಿಸಲಾಗಿದೆ.

ಒಂದು ಬಿಡ್ಡಿಂಗ್‌ ಕಂಪನಿಗೆ ಎರಡಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ನೀಡಬಾರದು ಎಂದು ನಿಯಮವಿದೆ. ಆದರೆ, ಈ ನಿಯಮವನ್ನು ಪಾಲಿಸದೆ ಒಂದೇ ಕಂಪನಿಗೆ 06 ಏರ್‌ಪೋರ್ಟ್‌ಗಳನ್ನು ನೀಡಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೆ, ಬಿಡ್‌ ಪಡೆದುಕೊಂಡಿರುವ ಸಂಸ್ಥೆಯಲ್ಲಿ ಯೋಜನೆಯನ್ನು ಪೂರೈಸಲು ಬೇಕಾದ ತಂತ್ರಜ್ಞಾನಗಳಿಲ್ಲ. ಅಲ್ಲದೇ ಗುಣಮಟ್ಟದ ಸೇವೆಯನ್ನು ನೀಡಲು ಕಂಪನಿಗೆ ಸಾಧ್ಯವಿಲ್ಲ ಎಂದು ನೀತಿ ಆಯೋಗ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈಗಾಗಲೇ ಇದೇ ಕಂಪನಿಗೆ ಕಳೆದ ವರ್ಷ ಮುಂಬೈ ಏರ್‌ಪೋರ್ಟ್‌ಅನ್ನು ಕೂಡ ವಹಿಸಲಾಗಿದ್ದು,  ಒಟ್ಟ ಏಳು ಏರ್‌‌ಪೋರ್ಟ್‌ಗಳ ನಿರ್ವಹಣೆಯನ್ನು ಅದಾನಿ ಗ್ರೂಪ್‌ ಪಡೆದುಕೊಂಡಿದೆ. ಇದು ನಿಯಮಗಳ ಉಲ್ಲಂಘನೆ ಎಂದು ಯೋಜನಾ ಆರೋಗ ಹೇಳಿದೆ.

ವಿಮಾನ ನಿಲ್ದಾಣಗಳನ್ನು ಖಾಸಗಿ ಸುಪರ್ದಿಗೆ ನೀಡುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೂ, ಏರ್‌ಪೋರ್ಟ್‌ಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ.

ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ ನಿರ್ವಹಣೆ ಅದಾನಿಗೆ; ಕೇಂದ್ರದ ನಡೆಗೆ ಕೇಂದ್ರ ಇಲಾಖೆಗಳೇ ಆಕ್ಷೇಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights