ಮೋದಿ ಆಡಳಿತ: 519 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!

ಕಳೆದ ಒಂದು ದಶಕದಲ್ಲಿ 2010ರಿಂದ 2020ರ ವೇಳೆಗೆ ರಾಜಕಾರಣಿಗಳು ಮತ್ತು ಸರ್ಕಾರಗಳ ವಿರುದ್ದ ಟೀಕೆ ಮಾಡಿರುವುದಕ್ಕಾಗಿ 797 ಭಾರತೀಯರ ವಿರುದ್ದ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 519 ಪ್ರಕರಣಗಳು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದಾಖಲಾಗಿವೆ.

ಕಾನೂನು ಸುದ್ದಿ ವೆಬ್‌ಸೈಟ್ ಆಗಿರುವ ’ಆರ್ಟಿಕಲ್ 14’ ಜನವರಿ 1, 2010 ರಿಂದ 2020 ರ ಡಿಸೆಂಬರ್ 31 ರವರೆಗೆ ದಾಖಲಾಗಿರುವ ಎಲ್ಲಾ ದೇಶದ್ರೋಹ ಪ್ರಕರಣಗಳನ್ನು ಕಲೆಹಾಕದೆ. ಇವುಗಳಲ್ಲಿ, ಪ್ರಧಾನಿ ಮೋದಿಯವರ ವಿರುದ್ಧ ‘ಅನುಚಿತ’ ಅಥವಾ ‘ಅವಮಾನಕರ’ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಸುಮಾರು 149 ಜನರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದಕ್ಕಾಗಿ 144 ಪ್ರಕರಣಗಳು ದಾಖಲಾಗಿದೆ.

ವಿಪರ್ಯಾಸವೆಂದರೆ ಸರ್ಕಾರದ ವಿರುದ್ದದ ಟೀಕೆಗಳು ದೇಶದ್ರೋಹ ಆಗುವುದಿಲ್ಲ ಎಂದು ಕೋರ್ಟುಗಳು ತೀರ್ಪಿತ್ತಿವೆ. ಆದರೂ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುವ ಪರಿಪಾಠ ಹೆಚ್ಚಾಗಿದೆ.

’ಆರ್ಟಿಕಲ್ 14’ ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಣೆಯು, “ಪೋಸ್ಟರ್‌ಗಳನ್ನು ಹಿಡಿದುಕೊಳ್ಳುವುದು, ಅಂಟಿಸುವುದು, ಘೋಷಣೆಗಳನ್ನು ಕೂಗುವುದು, ಸಾಮಾಜಿಕ ಜಾಲತಾಣದಲ್ಲಿ ಬರೆಯುವುದು ಮತ್ತು ಪರಸ್ಪರ ವೈಯಕ್ತಿಕ ಸಂಭಾಷಣೆಗಳನ್ನು ಸಹ ’ದೇಶದ್ರೋಹ’ ಎಂದು ಪರಿಣಿಸಲಾಗಿದೆ” ಎಂದು ಹೇಳಿದೆ.

ಯುಪಿಎಯ ಎರಡನೆ ಅವಧಿಗೆ ಹೋಲಿಸಿದರೆ ಎನ್‌ಡಿಎ ಆಡಳಿತದಲ್ಲಿ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುವುದು 28% ಹೆಚ್ಚಾಗಿದೆ. ಸಿಎಎ-ಎನ್‌ಆರ್‌ಸಿ ಆಂದೋಲನಗಳ ಸಂದರ್ಭದಲ್ಲಿ, ಹತ್ರಾಸ್ ಅತ್ಯಾಚಾರದ ನಂತರ ಹಲವಾರು ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ.

ಮೋದಿ ಸರ್ಕಾರದ ಮೊದಲ ಆರು ವರ್ಷಗಳಲ್ಲಿ 519 ದೇಶದ್ರೋಹ ಪ್ರಕರಣಗಳು ದಾಖಲಾಗಿದೆ. 2010 ರಿಂದ ಮೇ 2014 ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ 279 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದವು. ಈ 279 ಪ್ರಕರಣಗಳಲ್ಲಿ 39% ಪ್ರಕರಣಗಳು ತಮಿಳುನಾಡಿನ ಕೂಡಂಕುಲಂನ ಪರಮಾಣು ವಿದ್ಯುತ್ ಸ್ಥಾವರ ವಿರುದ್ಧ ನಡೆದ ಹೋರಾಟ ನಡೆದಾಗ ದಾಖಲಾದವುಗಳು ಮತ್ತು ಭಾರತದ ಕೆಲವು ಪ್ರದೇಶಗಳಲ್ಲಿ ಮಾವೋವಾದದ ಹೆಸರಲ್ಲಿ ದಾಖಲಾದ ಪ್ರಕರಣಗಳಾಗಿದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ-ಗಾಸಿಪ್: ಟ್ರಂಪ್-ಮೋದಿಯಂತಹ ಜನರು ಪ್ರಚಾರ ಪಡೆದುಕೊಂಡಿದ್ದು ಹೇಗೆ?

ಪ್ರಸ್ತುತ ಸಂಗ್ರಹಿಸಿದ ಮಾಹಿತಿಯಂತೆ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 6 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ಹತ್ರಾಸ್ ಅತ್ಯಾಚಾರದ ನಂತರ 22 ಪ್ರಕರಣಗಳು ಮತ್ತು ಸಿಎಎ-ಎನ್ಆರ್‌ಸಿ ಪ್ರತಿಭಟನೆಯ ಸಂದರ್ಭದಲ್ಲಿ 25 ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ. ಇವುಗಳು ಮಾತ್ರವಲ್ಲದೆ, ಪುಲ್ವಾಮಾ ದಾಳಿಯ ನಂತರ 27 ಪ್ರಕರಣಗಳು ದಾಖಲಾಗಿವೆ. ಸಿಎಎ-ಎನ್ಆರ್‌ಸಿ ವಿರುದ್ದ ಪ್ರತಿಭಟನೆ ನಡೆದಾಗ ದಾಖಲಾದ 25 ಪ್ರಕರಣಗಳಲ್ಲಿ 22 ಪ್ರಕರಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲೆ ದಾಖಲಾಗಿವೆ. ಪುಲ್ವಾಮಾ ದಾಳಿಯ ನಂತರ ದಾಖಲಾದ 27 ಪ್ರಕರಣಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ.

ಬಿಹಾರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ ಒಟ್ಟು ಐದು ರಾಜ್ಯಗಳಲ್ಲಿ ಕಳೆದ 10 ವರ್ಷಗಳಲ್ಲಿ 65% ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ರಾಜ್ಯಗಳು ಬಿಜೆಪಿ ತೆಕ್ಕೆಯಲ್ಲಿದೆ. ಇವುಗಳಲ್ಲಿ 30% ಪ್ರಕರಣಗಳು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ), ಸಾರ್ವಜನಿಕ ಆಸ್ತಿಗೆ ಹಾನಿ (ತಡೆಗಟ್ಟುವಿಕೆ) ಕಾಯ್ದೆ, ಮತ್ತು ರಾಷ್ಟ್ರೀಯ ಗೌರವ ಮತ್ತು ಹಿತಾಸಕ್ತಿಗೆ ಹಾನಿಯಾಗುವುದನ್ನು ತಡೆಗಟ್ಟುವ ಕಾಯಿದೆಗಳನ್ನು ದೇಶದ್ರೋಹದ ಆರೋಪದ ಜೊತೆಗೆ ದಾಖಲಿಸಲಾಗಿದೆ.

ದೇಶದ್ರೋಹ ಎಂಬುದು ತನ್ನ ವಿರುದ್ದ ಟೀಕೆ ಮತ್ತು ವಿರೋಧ ಮಾಡುವವರ ವಿರುದ್ದ ದಾಖಲಿಸಬಹುದಾದ ಸರ್ಕಾರಗಳಿಗೆ ಅತಿ ಪ್ರಿಯವಾದ ಒಂದು ಕಾನೂನಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಎರಡೂ ಆಡಳಿತದ ಅವಧಿಯಲ್ಲಿ ಇದು ಸಂಭವಿಸಿದೆ. ಅಸೀಮ್ ತ್ರಿವೇದಿ, ಅರುಂಧತಿ ರಾಯ್ ಯುಪಿಎ ಸರ್ಕಾರವು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಿದ ಕೆಲವು ವ್ಯಕ್ತಿಗಳಾಗಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆ ಮತ್ತು ಚುನಾವಣೆಗಳ ಭಯದಿಂದ ಸಿಎಎ ಜಾರಿಗೆ ಹಿಂದೆ ಸರಿಯುತ್ತಿದೆಯೇ ಬಿಜೆಪಿ?

ಗಣರಾಜ್ಯೋತ್ಸವದಂದು ಸಂಭವಿಸಿದ ಅಹಿತಕರ ಘಟನೆಯ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್, ಇಂಡಿಯಾ ಟುಡೇ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಮತ್ತು ನ್ಯಾಷನಲ್‌ ಹೆರಾಲ್ಡ್‌ನ ಹಿರಿಯ ಸಲಹಾ ಸಂಪಾದಕ ಮೃಣಾಲ್ ಪಾಂಡೆ ಮುಂತಾದವರ ಮೇಲೆ ದೇಶದ್ರೋಹದ ಪ್ರಕರಣಗಳು ದಾಖಲಾಗಿದೆ. ಇವರುಗಳ ಜೊತೆಗೆ, ನ್ಯಾಷನಲ್ ಹೆರಾಲ್ಡ್‌ನ ಸಂಪಾದಕ ಜಾಫರ್ ಆಗಾ, ದಿ ಕಾರವಾನ್‌ನ ಸಂಸ್ಥಾಪಕ ಮತ್ತು ಸಂಪಾದಕ ಪರೇಶ್ ನಾಥ್ ಮತ್ತು ಅನಂತ್ ನಾಥ್, ಮತ್ತು ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ ಜೋಸ್ ಅವರ ಮೇಲೆ ಕೂಡಾ ಸುಳ್ಳು ಸುದ್ದಿಗಳನ್ನು ವರದಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಬಿಹಾರ ಸಂಪುಟ ವಿಸ್ತರಣೆ; BJPಗೆ ಎಚ್ಚರಿಕೆ ಸಂದೇಶ ರವಾನಿಸಿದ ಸಿಎಂ ನಿತೀಶ್‌ ಕುಮಾರ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights