ಮತ್ತೆ ಉತ್ತರಖಂಡನಲ್ಲಿ ಹಿಮಪ್ರವಾಹ : ರಕ್ಷಣಾ ಕಾರ್ಯ ತಾತ್ಕಾಲಿಕ ಸ್ಥಗಿತ!
ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಹಿಮಪ್ರವಾಹ ಉಂಟಾಗಿ ನೂರೈವತ್ತಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಕಳೆದ 5 ದಿನಗಳಿಂದ ಕಾರ್ಮಿಕರ ಶೋಧ ಕಾರ್ಯ ಮಾಡಲಾಗುತ್ತಿದ್ದು ಇಂದು ಮತ್ತೆ ಧೌಲಿ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ. ಇದರಿಂದಾಗಿ ಸುರಕ್ಷತೆ ಕಾರಣಕ್ಕಾಗಿ ತಪೋವನ ಸುರಂಗದಲ್ಲಿ ರಕ್ಷಣಾ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಫೆ.7ರಂದು ಹಿಮನದಿ ಸ್ಫೋಟ ದುರಂತ ಸಂಭವಿಸಿದ ಬಳಿಕ ತಪೋವನದಲ್ಲಿ 25ರಿಂದ 35 ಮಂದಿ ನಾಲ್ಕು ದಿನಕ್ಕೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡಿದ್ದಾರೆ. ಸುರಂಗದ ಒಳಗೆ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಹೊರಗೆ ಬಂದಿದ್ದು, ಭಾರೀ ಯಂತ್ರಗಳ ಮೂಲಕ ಅವಶೇಷಗಳನ್ನು, ಕೆಸರುಗಳನ್ನು ತೆಗೆಯಲಾಗಿದೆ.
” ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ಧೌಲಿ ಗಂಗಾ ಅಲಕ್ನಂದ ನದಿಯ ಜೊತೆ ಸೇರ್ಪಡೆಯಾಗುತ್ತದೆ. ಕಳೆದ ಭಾನುವಾರ ಹಿಮನದಿ ಸ್ಫೋಟವುಂಟಾಗಿ ಚಮೊಲಿ ಜಿಲ್ಲೆಯ ಜೊಶಿಮಠ ಎಂಬಲ್ಲಿ ಹಿಮಪಾತವುಂಟಾಗಿ ತೀವ್ರ ಪ್ರವಾಹ ಉಂಟಾಯಿತು. ಪ್ರವಾಹದಲ್ಲಿ ಜನರು ಮತ್ತು ಜಲವಿದ್ಯುತ್ ಕೇಂದ್ರವೊಂದು ಕೊಚ್ಚಿ ಹೋಗಿದೆ” ಎಂದು ಚಮೊಲಿ ಜಿಲ್ಲಾಧಿಕಾರಿ ಸ್ವಾತಿ ಎಸ್ ಬದೌರಿಯಾ ತಿಳಿಸಿದ್ದಾರೆ.
ಇದುವರೆಗೆ ಹಿಮಪಾತದ ಪ್ರವಾಹದಲ್ಲಿ ಸಿಲುಕಿ 34 ಮಂದಿ ಮೃತಪಟ್ಟಿದ್ದಾರೆ. ಸುರಂಗದೊಳಗೆ 25ರಿಂದ 35 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು ಅವರನ್ನು ಪತ್ತೆಹಚ್ಚಿ ಹೊರತೆಗೆಯುವ ಕಾರ್ಯ ನಡೆಸಲಾಗುತ್ತಿತ್ತು.