ದೆಹಲಿ ಹಿಂಸಾಚಾರ ಭಾಷಣ: ಅಗತ್ಯ ಬಿದ್ದರೆ ಈಗಲೂ ಹಾಗೇ ಮಾಡುತ್ತೇವೆ: ಬಿಜೆಪಿ ನಾಯಕ ಕಪಿಲ್ ಮಿಶ್ರಾ
ಕಳೆದ ವರ್ಷ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ನಡೆದು ಒಂದು ವರ್ಷ ಕಳೆದಿದೆ. ಹಿಂಸಾಚಾರಕ್ಕೆ ಕಾರಣವಾಗಿದ್ದ ಭಾಷಣ ಮಾಡಿದ್ದಕ್ಕಾಗಿ ತಮಗೆ ವಿಷಾಧವಿಲ್ಲ. ಅಗತ್ಯ ಬಿದ್ದರೆ ಈ ಬಾರಿಯೂ ಹಾಗೇಯೇ ಮಾಡುತ್ತೇವೆ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಸಂವಿಧಾನ ಕ್ಲಬ್ನಲ್ಲಿ ‘ಡೆಲ್ಲಿ ರಯಟ್ಸ್ 2020: ದಿ ಅನ್ಟೋಲ್ಡ್ ಸ್ಟೋರಿ’ ಕೃತಿ ಬಿಡುಗಡೆ ಮಾಡಿ ಮಾತಾಡಿದ ಅವರು, ದೆಹಲಿ ಘಟನೆ ನಡೆದು ಒಂದು ವರ್ಷವಾಯಿತು. ಹಾಗಾಗಿ ನಾನು ಈ ಮಾತನ್ನು ಮತ್ತೆ ಹೇಳಲು ಬಯಸುತ್ತೇನೆ. ಫೆಬ್ರವರಿ 23 ರಂದು ನಾನು ಮಾಡಿದ್ದನ್ನು ಈಗ ಅಗತ್ಯ ಬಿದ್ದರೆ ಮತ್ತೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 23ರಿಂದ 26ರ ತನಕ ಸಿಎಎ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿತ್ತು. ಇದರಲ್ಲಿ “ದಿನೇಶ್ ಖತಿಕ್, ಅಂಕಿತ್ ಶರ್ಮ ಮತ್ತಿತರ ಹಲವರ ಜೀವ ಉಳಿಸಲಾಗಲಿಲ್ಲ ಎಂಬುದರ ಹೊರತಾಗಿ ನನಗೆ ಬೇರೆ ಯಾವುದೇ ವಿಷಾದವಿಲ್ಲ” ಎಂದು ಅವರು ಹೇಳಿದ್ದಾರೆ.
2020ರ ಫೆಬ್ರವರಿ 23ರಂದು ಮಿಶ್ರಾ ಅವರು ಮಾಡಿದ್ದ ಭಾಷಣದಲ್ಲಿ ದಿಲ್ಲಿಯ ಜಾಫ್ರಾಬಾದ್ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವ ಸ್ಥಳವನ್ನು ತೆರವುಗೊಳಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಮ್ಮುಖದಲ್ಲಿಯೇ ಹೇಳಿದ್ದರು. ಮೂರು ದಿನಗಳೊಳಗೆ ಕ್ರಮ ಕೈಗೊಳ್ಳದೇ ಇದ್ದರೆ ಹಿಂಸೆಯ ಬೆದರಿಕೆಯನ್ನೂ ಒಡ್ಡಿದ್ದರು. ಅವರ ಈ ಭಾಷಣ ಉದ್ವಿಗ್ನತೆಗೆ ಕಾರಣವಾಗಿತ್ತು. ಅಲ್ಲದೆ, ಫೆ.23 ರಂದೇ ಮಧ್ಯಾಹ್ನದ ವೇಳೆಗೆ ಹಿಂಸಾತ್ಮಕ ಘಟನೆಗಳು ಅರಂಭವಾಗಿದ್ದವು.
ಇದನ್ನೂ ಓದಿ: ಗುಜರಾತ್ ಚುನಾವಣೆ: ಹೆಚ್ಚು ಸ್ಥಾನಗಳಲ್ಲಿ BJP ಮುನ್ನಡೆ; ಕಾಂಗ್ರೆಸ್ಗೆ ಆರಂಭಿಕ ಹಿನ್ನಡೆ!