ಮಾರ್ಚ್ 15ರಂದು ಪರಿಷತ್ ಉಪಚುನಾವಣೆ; ಅಂದೇ ಫಲಿತಾಂಶ ಪ್ರಕಟ!
ವಿಧಾನ ಪರಿಷತ್ನಲ್ಲಿ ಉಪಸಭಾಧ್ಯಕ್ಷರಾಗಿದ್ದ ಧರ್ಮೇಗೌಡರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದ್ದು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಚುನಾವಣೆಯ ಬಗ್ಗೆ ಅಧಿಸೂಚನೆ ಹೊರಡಿದ್ದಾರೆ.
ವಿಧಾನಸಭೆಯ ಸದಸ್ಯರಿಂದ ಪರಿಷತ್ಗೆ ಜೆಡಿಎಸ್ನ ಧರ್ಮೇಗೌಡರು ಆಯ್ಕೆ ಯಾಗಿದ್ದರು. ಅವರ ನಿಧನದಿಂದಾಗಿ ಒಂದು ಸ್ಥಾನ ತೆರವಾಗಿದ್ದು, ಇದೀಗ ವಿಧಾನಸಭೆಯಿಂದ ಪರಿಷತ್ಗೆ ಆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಅಧಿಸೂಚನೆಯ ಪ್ರಕಾರ, ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 04 ಕೊನೆಯ ದಿನಾಂಕವಾಗಿದ್ದು, ಮಾರ್ಚ್ 05 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಲ್ಲದೆ, ಮಾರ್ಚ್ 08ರ ಒಳಗೆ ನಾಮಪತ್ರವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ. ಮಾರ್ಚ್ 15ರಂದು ನಡೆಯುವ ಚುನಾವಣೆಯ ಫಲಿತಾಂಶವನ್ನು ಅಂದಿನ ಸಂಜೆಯೇ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸಭಾಧ್ಯಕ್ಷ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ಬಿಜೆಪಿ-ಜೆಡಿಎಸ್ ನಿಲುವಿನ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ನಂತರ ಉಪ ಸಭಾಪತಿಗಳಾಗಿದ್ದ ಎಸ್.ಎಲ್. ಧೆರ್ಮೇಗೌಡ ಅವರು ಅತ್ಮಹತ್ಯೆ ಮಾಡಿದ್ದರು. ಅವರ ಅಸಹಜ ಸಾವಿಗೆ ಪರಿಷತ್ನಲ್ಲಿ ನಡೆದ ಗಲಾಟೆಯೇ ಕಾರಣ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: 3 ಪಕ್ಷಗಳ ರಾಜಕೀಯಕ್ಕೆ ಬಲಿಯಾದ್ರಾ ಉಪಸಭಾಪತಿ; ಧರ್ಮೇಗೌಡರ ಆತ್ಮಹತ್ಯಾ ಪತ್ರದಲ್ಲಿ ಏನಿದೆ?