ರೈತ ಹೋರಾಟಕ್ಕೆ 100 ದಿನ: ಸರ್ಕಾರದ ದಮನ vs ಪುಟಿದೇಳುತ್ತಿರುವ ರೈತರು!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ 100 ದಿನಗಳನ್ನು ಪೂರೈಸಿದೆ. ಆದರೆ, ಸರ್ಕಾರ ಮಾತ್ರ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ವಿಚಾರದಲ್ಲಿ ಪಟ್ಟು ಹಿಡಿದು ಕುಳಿತಿದೆ. ಸದ್ಯದಲ್ಲೇ, ರೈತರು ಸಂಸತ್‌ ಚಲೋ ಹೋರಾಟವನ್ನು ನಡೆಸುವುದಾಗಿ ಘೋಷಿಸಿದ್ದಾರೆ.

ಲಾಕ್‌ಡೌನ್‌ ಸಮಯವನ್ನು ಬಳಸಿಕೊಂಡು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಆ ಸಂದರ್ಭದಲ್ಲಿನ ಕೊರೊನಾ ಭಯ ಮತ್ತು ಸಾಮಾಜಿಕ ಅಂತರದ ಕಾರಣಗಳಿಂದಾಗಿ ರೈತರು ಕಾಯ್ದೆಗಳ ವಿರುದ್ದ ರಸ್ತೆಗಳಿದು ಹೋರಾಟ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ನಾವು ಗೆದ್ದಿದ್ದೇವೆ ಎಂದು ಮೋದಿ ಸರ್ಕಾರ ಭಾವಿಸಿತ್ತು.

ಆದರೆ, ಲಾಕ್‌ಡೌನ್‌ ತೆರವುಗೊಂಡು, ಕೊರೊನಾ ಭಯ ಕಡಿಮೆಯಾಗುತ್ತಿದ್ದಂತೆ ರೈತರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಗುಡುಗುತ್ತಿದ್ದಾರೆ. ಶಾಂತಿಯುತವಾಗಿ ಪ್ರಾರಂಭವಾಗಿದ್ದ ಪ್ರತಿಭಟನೆಯನ್ನು ಹಿಮ್ಮೆಟ್ಟಿಸುವಂತೆ ಮಾಡಲು ಹರಿಯಾಣ ಸರ್ಕಾರ ರೈತರೊಂದಿಗೆ ಕ್ರೂರವಾಗಿ ನಡೆದುಕೊಂಡಿತು. ಆಶ್ರುವಾಯು, ಜಲಪಿರಂಗಿಯನ್ನು ಭಾರೀ ದೌರ್ಜನ್ಯ ಎಸಗಿತ್ತು. ಇದು ರಾಷ್ಟ್ರದಾದ್ಯಂತ ತೀವ್ರ ಆಕ್ರೋಶ ಹುಟ್ಟು ಹಾಕಿದ್ದು ಹರಿಯಾಣ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಅಲ್ಲದೆ,  ದೇಶಕ್ಕೆ ಅನ್ನ ನೀಡುವ ರೈತರನ್ನೇ ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ಕೇಂದ್ರ ಸರ್ಕಾರ-ಮಾಧ್ಯಮಗಳು ಬಿಂಬಿಸಲು ಆರಂಭಿಸಿದ್ದವು. ಆದರೆ, ಇದಾವ ಅಸ್ತ್ರವೂ ರೈತರನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ರೈತ ವಿರೋಧಿ ಧೋರಣೆ ತಳೆದ ಸುವರ್ಣ ನ್ಯೂಸ್‌; ರೈತ ಹೋರಾಟದ ಬಗ್ಗೆ ಜನರ ದಿಕ್ಕು ತಪ್ಪಿಸಿದ್ದು ಹೀಗೆ!

ಸರ್ಕಾರ ಮತ್ತು ರೈತರ ನಡುವಿನ 11 ಸುತ್ತುಗಳ ಮಾತುಕತೆಗಳು ವಿಫಲವಾಗಿವೆ. ಅಹಂಕಾರ ಮೆರೆಯುತ್ತಿರುವ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಲು ನಿರಾಕರಿಸುತ್ತಿದೆ. ಕಾಯ್ದೆಗಳು ರದ್ದಾಗುವವರೆಗೂ ಹೋರಾಟ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತರ ಹೋರಾಟವನ್ನು ಅಣಿಯಲು, ರೈತರನ್ನು ಒಡೆಯಲು ಸರ್ಕಾರ ಭಾರೀ ಕಸರತ್ತು ನಡೆಸುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಜನವರಿ 26 ರಂದು ಗಣರಾಜ್ಯೋತ್ಸವದ ದಿನ ಟ್ರಾಕ್ಟರ್‌ ಪರೇಡ್‌ ನಡೆಸಲು ರೈತರು ನಿರ್ಧರಿಸಿದ ನಂತರ, ಅದೇ ಪರೇಡ್‌ನಲ್ಲಿ ರೈತರನ್ನು ಮಣಿಸಲು ಸರ್ಕಾರ ಮತ್ತು ದೆಹಲಿ ಪೊಲೀಸರು ಸಂಚು ನಡೆಸಿದ್ದರು. ಹಾಗಾಗಿಯೇ, ರೈತರ ಮಧ್ಯೆ ಬಿಜೆಪಿ ಬೆಂಬಲಿಗರನ್ನು ಕಳಿಸಿತ್ತು. ಬಿಜೆಪಿ ಬೆಂಬಲಿಗನಾದ ಪಂಜಾಬ್‌ ನಟ ದೀಪ್‌ ಸಿಧು, ರೈತರ ಒಂದು ಗುಂಪನ್ನು ದಿಕ್ಕು ತಪ್ಪಿಸಿ ಕೆಂಪುಕೋಟೆಯತ್ತ ಹೋಗಲು ಪ್ರಚೋದಿಸಿದ್ದ. ಅಲ್ಲದೆ, ಕೆಂಪುಕೋಟೆಯಲ್ಲಿ ಸಿಖ್‌ ಧ್ವಜವನ್ನು ಹಾರಿಸಲು ಪ್ರಚೋದನೆ ನೀಡದ್ದ ಎಂದು ಹೋರಾಟ ನಿರತ ರೈತರು ತಿಳಿಸಿದ್ದಾರೆ.

ಟ್ರಾಕ್ಟರ್‌ ಪರೇಡ್‌ ಸಂದರ್ಭದಲ್ಲಿ ಕೆಲವು ಭಾಗದಲ್ಲಿ ನಡೆದ ಹಿಂಸೆಯ ಘಟನೆಯನ್ನೇ ಬಂಡವಾಳವಾಗಿ ಮಾಡಿಕೊಂಡ ಸರ್ಕಾರ, ಹಿಂಸಾಚಾರದ ನೆಪವೊಡ್ಡಿ ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲು ಭಾರೀ ಸಂಚು ನಡೆಸಿತು. ಸ್ಥಳೀಯರ ಹೆಸರಿನಲ್ಲಿ ಜನರ ಗುಂಪೊಂದನ್ನು ಕಳಿಸಿ ರೈತರು ಸ್ಥಳದಿಂದ ಹೋಗಬೇಕು ಎಂದು ಪ್ರತಿಭಟನೆ ನಡೆಸಿತು. ಆದರೆ, ಅವರು ಸ್ಥಳೀಯರಲ್ಲ, ಅಲ್ಲಿನ ಜನರು ರೈತರ ಜೊತೆಗಿದ್ದಾರೆ ಎಂದು ಕೆಲವೇ ಸಮಯದಲ್ಲಿ ತಿಳಿಯಿತು. ಅಲ್ಲಿ ರೈತರು ಗೆದ್ದರು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇದನ್ನೂ ಓದಿ: ಹಿಂಸಾಚಾರಕ್ಕೆ ಅಮಿತ್‌ ಶಾ ಹೊಣೆ; ರೈತರು ಒಂದಿಂಚೂ ಕದಲಬೇಡಿ – ನಿಮ್ಮೊಂದಿಗೆ ನಾವಿದ್ದೇವೆ: ರಾಹುಲ್‌ಗಾಂಧಿ

ಕಡಿಮೆ ರೈತರಿದ್ದ ಗಾಝೀಪುರ ಗಡಿಯಲ್ಲಿ ರೈತರನ್ನು ತೆರವುಗೊಳಿಸಲು ಅಲ್ಲಿನ ಡಿಎಂ (ಜಿಲ್ಲಾಧಿಕಾರಿ) ಆದೇಶಿಸಿದರು. ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್‌ ನಡೆಸಿದರು. ಗಡಿಭಾಗದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರು. ಮೊಬೈಲ್‌ ಶೌಚಾಲಯಗಳನ್ನು ಹೊತ್ತೊಯ್ದರು. ನೀರು ಸರಬರಾಜು ಕಡಿತಗೊಳಿಸಿದರು ಎಂದು ರೈತರು ಹೇಳಿದ್ದಾರೆ.

ಪೊಲೀಸರ ಲಾಠಿ ಚಾರ್ಜ್‌, ಸ್ಥಳೀಯರ ಹೆಸರಿನಲ್ಲಿ ಬಿಜೆಪಿ, ಸಂಘದ ಗೂಂಡಾಗಳು ನಡೆಸಿದ ಹಲ್ಲೆಗಳಿಂದಾಗಿ ಗಾಜಿಪುರ ಗಡಿಯ ರೈತರು ಪ್ರತಿಭಟನಾ ಸ್ಥಳದಿಂದ ಹೊರಡುವ ಹಾದಿಯಲ್ಲಿದ್ದರು. ಆದರೆ, ಬಿಜೆಪಿ ಬೆಂಬಲಿಗರ ಪುಂಡಾಟದಿಂದ ಬೇಸತ್ತ ರೈತ ಮುಖಂಡ ಕಿಶೋರ್‌ ಟಿಕಾಯತ್‌ ಅವರು ರೈತರ ಮೇಲೆ ದಾಳಿ ನಡೆದರೆ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಅವರ ಭಾವನಾತ್ಮಕ ಭಾಷಣವು ರೈತರಲ್ಲಿ ಮತ್ತಷ್ಟು ಕಿಚ್ಚನ್ನು ಹೊತ್ತಿಸಿತು.

ಸಿಂಘು ಗಡಿಯಲ್ಲಿ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದರು. 200ಕ್ಕೂ ಹೆಚ್ಚು ಜನರ ಗುಂಪು ತಾವು ಸ್ಥಳೀಯರು ಎಂದು ಹೇಳಿಕೊಂಡು ದಾಂದಲೆ ನಡೆಸಿದ್ದಾರೆ. ರೈತರ ಟೆಂಟ್‌ಗಳ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ರೈತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮೂಲಕ ರೈತರು ಹೆದರುತ್ತಾರೆ ಎಂದು ಭಾವಿಸಿದ್ದರು. ಅದರೆ, ದಾಳಿ ನಡೆಸಿದವರು ಸ್ಥಳೀಯರಲ್ಲ ಹಿಂದೂ-ಸೇನಾ ಸಂಘಟನ್‌ನವರು ಆ ಪ್ರತಿಭಟನೆ ನಡೆಸಿದ್ದರು. ತಮ್ಮದೇ ಸಂಘಟನೆ ಪ್ರತಿಭಟನೆ ನಡೆಸಿದೆ ಎಂದು ಹಿಂದೂ-ಸೇನಾ ಸಂಘಟಣ್ ಅಧ್ಯಕ್ಷ ಅಲ್ಟ್ ನ್ಯೂಸ್ ಎದುರು ಒಪ್ಪಿಕೊಂಡಿದ್ದಾರೆ. ನಮ್ಮನ್ನು ಎದುರಿಸಲು ಸಾಧ್ಯವಿಲ್ಲ. ಈ ಹುನ್ನಾರಗಳಿಗೆ ನಾವು ಬಗ್ಗುವುದಿಲ್ಲ ಎಂದು ರೈತರು ಘೋಷಿಸಿದ್ದಾರೆ.

ಜನವರಿ 26ರ ಘಟನೆಯ ನಂತರ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಾದ್ಯಂತ ರೈತರ ಮಹಾ ಪಂಚಾಯತ್‌ಗಳು ನಡೆಯುತ್ತಿವೆ. ಈ ಹೋರಾಟದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಭಾಗಿಯಾಗುತ್ತಿದ್ದಾರೆ. ರೈತರಿಗೆ ಬೆಂಬಲದ ಮಹಾಪೂರು ದೇಶಾದ್ಯಂತ ಹರಿದು ಬರುತ್ತಿದೆ. ಕರ್ನಾಟಕದಲ್ಲಿಯೂ ಮಾರ್ಚ್‌ 05ರಿಂದ ಮಹಾ ಪಂಚಾಯತ್‌ಗಳನ್ನು ನಡೆಸಲು ರೈತರು ನಿರ್ಧರಿಸಿದ್ದಾರೆ. ರೈತರ ಹೋರಾಟ ಮತ್ತಷ್ಟು ಬಿರುಸು ಪಡೆದುಕೊಳ್ಳುತ್ತಿದೆ.

ಮಾಧ್ಯಮಗಳ ಮೂಲಕ ಹೋರಾಟದ ಬಗ್ಗೆ ಅಪಪ್ರಚಾರ ಮಾಡುವುದು, ರೈತರನ್ನು ದಿಕ್ಕುತಪ್ಪಿಸುವುದು, ಹಿಂಸೆಗೆ ಪ್ರಚೋದಿಸುವುದು, ದಾಳಿ ನಡೆಸುವುದು. ಪೊಲೀಸರ ಮೂಲಕ ಲಾಠಿ ಪ್ರಹಾರ ನಡೆಸುವ ಮೂಲಕ ನಮ್ಮನ್ನು ಮಣಿಸಿ ಗೆಲ್ಲುತ್ತೇವೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ. ಆದರೆ, ಅದು ಸಾಧ್ಯವಿಲ್ಲ, ಯಾವುದೇ ಆಕ್ರಮಣಕ್ಕೆ ನಾವು ಮಣಿಯುವುದಿಲ್ಲ. ಅವರು ನಮ್ಮನ್ನು ದಮನಿಸಿದಷ್ಟೂ ನಾವು ಗಟ್ಟಿಗೊಳ್ಳುತ್ತಿದ್ದೇವೆ. ನಾವು ಗೆಲ್ಲುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಡಿಗಳು ಯುದ್ಧದ ಗಡಿಗಳಾಗಿವೆ; ರೈತರು ಹೊಸ ಇತಿಹಾಸ ಬರೆಯುತ್ತಿದ್ದಾರೆ: ಸಿರಿಮನೆ ನಾಗರಾಜು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights