ಅಸ್ಸಾಂ BJPಯಲ್ಲಿ ಬಂಡಾಯ; ಸ್ವತಂತ್ರ ಸ್ಪರ್ಧೆಗೆ ಮುಂದಾದ BJP ಶಾಸಕರು!
ಅಸ್ಸಾಂನಲ್ಲಿ ಮಾರ್ಚ್ 27ರಿಂದ ವಿಧಾನಸಭಾ ಚುನಾವಣೆ ಆರಂಭವಾಗಲಿದೆ. ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಹಾಲಿ ಇರುವ 11 ಶಾಸರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅಲ್ಲದೆ, ಹಲವು ಟಿಕೆಟ್ ಆಕಾಂಕ್ಷಿಗಳಿಗೂ ಟಿಕೆಟ್ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಬಿಜೆಪಿ ಮುಖಂಡರು ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಟಿಕೆಟ್ ದೊರೆಯದ ಕಾರಣಕ್ಕೆ ಆಕ್ರೋಶಗೊಂಡಿರುವ 11 ಶಾಸಕರು ಮತ್ತು ಹಲವು ಆಕಾಂಕ್ಷಿಗಳು ಬಿಜೆಪಿ ನಾಯಕತ್ವದ ವಿರುದ್ದ ಸಿಟ್ಟಾಗಿದ್ದಾರೆ. ಹೀಗಾಗಿ ಆಡಳಿತಾರೂಢ ಸರ್ಕಾರದಲ್ಲಿ ಸಚಿವರಾಗಿದ್ದವರು ಮತ್ತು ಕೆಲವು ಶಾಸಕರು ಹಾಗೂ ಅವರ ಬೆಂಬಲಿಗರು ಸಾರ್ವಜನಿಕವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇತರ ಪಕ್ಷಗಳಿಂದ ಅಥವಾ ಸ್ವತಂತ್ರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಬಿಜೆಪಿ ಮುಖ್ಯಸ್ಥ ರಂಜಿತ್ ಕುಮಾರ್ ದಾಸ್, “ಈ ರೀತಿ ಪ್ರತಿ ಚುನಾವಣೆಗಳಲ್ಲೂ ನಡೆಯುತ್ತದೆ. ನಾನು ಪಕ್ಷದ ಹಿತಾಸಕ್ತಿ ಮತ್ತು ಒಟ್ಟಾರೆ ಚಿತ್ರವನ್ನು ಗಮನದಲ್ಲಿಟ್ಟಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸರ್ಕಾರವು ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಿದೆ. ನಾನು ಈ ಬಾರಿಯ ಚುನಾವಣೆಯಲ್ಲಿಯೂ ಗೆಲುವು ಸಾಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಅಸ್ಸಾಂನಲ್ಲಿ ಮಾರ್ಚ್ 27ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಬಿಜೆಪಿ, ಎಜಿಪಿ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮೈತ್ರಿಯಲ್ಲಿ ಚುನಾವಣೆಯನ್ನು ಎದುರಿಸುತ್ತಿವೆ. ಕಳೆದ ಸರ್ಕಾರದಲ್ಲಿ ಬಿಜೆಪಿ ಜೊತೆಗಿದ್ದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ನಮ್ಮ ಮೈತ್ರಿಯನ್ನು ತೊರೆದು ಕಾಂಗ್ರೆಸ್ ಜೊತೆ ಕೈಜೋಡಿಸಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 50% ಮೀಸಲಾತಿ: ಕಾಂಗ್ರೆಸ್ ಭರವಸೆ