ರಮೇಶ್ ಸಿಡಿ ಪ್ರಕರಣ : ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಗ್ಗೆ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದು ಆಶ್ಚರ್ಯ ಮೂಡಿಸಿದ್ದಾರೆ.
ಹೌದು… ದೂರು ಕೊಟ್ಟು ಮೌನಕ್ಕೆ ಶರಣಾಗಿದ್ದ ದಿನೇಶ್ ಇಂದು ಹೊರಬಂದು ದೂರು ವಾಪಸ್ಸು ಪಡೆದಿದ್ದಾರೆ. ರಮೇಶ್ ಜಾರಕಿಹೊಳಿಯಿಂದ ಮಹಿಳೆಗೆ ಮೋಸವಾಗಿದೆ. ಇದರ ಸತ್ಯಾಸತ್ಯತೆ ತನಿಖೆಯಾಗಿ ಬಯಲಾಗಬೇಕು ಎಂದು ದೂರು ನೀಡಿದ್ದ ದಿನೇಶ್ ಸದ್ಯ ಯೂಟರ್ನ್ ಆಗಿದ್ದಾರೆ. ದೂರಿನ ಬಳಿಕ ಕಳೆದ ಎರಡು ಮೂರು ದಿನಗಳಿಂದ ಸೈಲೆಂಟಾಗಿ ಮನೆ ಸೇರಿದ್ದ ದಿನೇಶ್ ಅದೇನಾಯ್ತೋ ಏನೋ ದೂರು ವಾಪಸ್ ಪಡೆದುಕೊಂಡಿದ್ದಾರೆ. ಸ್ವತ: ತಾವೇ ಪೋಲೀಸ್ ಠಾಣೆಗೆ ಹೋಗಿ ದೂರು ವಾಪಸ್ ಪಡೆದು ಆಶ್ಚರ್ಯ ಮೂಡಿಸಿದ್ದಾರೆ.
ಈ ವೇಳೆ ಮಾದ್ಯಮದ ಮುಂದೆ ಮಾತನಾಡಿದ ಅವರು ದೂರು ವಾಪಸ್ ಪಡೆಯುವುದಕ್ಕೆ ಹಲವಾರು ಕಾರಣಗಳಿವೆ ಎಂದು ಹೇಳಿದ್ದಾರೆ. ದೂರು ಹಿಂಪಡೆಯಲು ಕಾರಣಗಳನ್ನು ಸುದೀರ್ಘವಾಗಿ ಐದು ಪುಟಗಳವರೆಗೆ ಬರೆದುಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ವಕೀಲರು ಹೇಳಿದಂತೆ ದೂರು ವಾಪಸ್ಸು ಪಡೆದಿದ್ದೇನೆ. ಕೆಲವರು ತೆವಲಿಗೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಹಾಗೆ ಮಾತನಾಡುವವರಿಗೆ ಕಿವಿ ಮಾತು ನಾನು ತಪ್ಪು ಮಾಡಿದ್ದರೆ ಸಾಬೀತು ಪಡಿಸಲಿ. ಇದರಿಂದ ನನ್ನ ಘನತೆಗೆ ದಕ್ಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಹಲವಾರು ಜನ ನಾನಾ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ನಾನು ಪ್ರಕರಣದಿಂದ ದೂರ ಸರಿದ್ದಿದ್ದೇನೆ. ಗುರುತರ ಆರೋಪಗಳಿಂದ ನಾನು ಮುಕ್ತ ಆಗಬೇಕು ಎಂದು ಹೇಳಿದ್ದಾರೆ. ದೂರಿನ ಬಳಿಕ ಮುಂದಾಗುವ ಬೆಳವಣಿಗಳ ಬಗ್ಗೆ ಅರಿವಿರುವುದಾಗಿ ಮಾದ್ಯಮದ ಮುಂದೆ ಹೇಳಿಕೊಳ್ಳುತ್ತಿದ್ದ ರಮೇಶ್ ಸದ್ಯ ಏಕಾಏಕಿ ದೂರು ವಾಪಸ್ ಪಡೆದಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.