ಸಿಡಿ ಶೂರರ ಬೇಟೆ : ತಲೆಮರಿಸಿಕೊಂಡ ಪತ್ರಕರ್ತನೇ ಸಿಡಿ ‘ಕಿಂಗ್’ಪಿನ್ನಾ..?
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಗ್ಗೆ ತನಿಖೆ ಈಗಾಗಲೇ ಶುರುವಾಗಿದ್ದು ಮೊದಲ ದಿನವೇ ಎಸ್ಐಟಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ಓರ್ವ ಪತ್ರಕರ್ತ ಭಾಗಿಯಾಗಿದ್ದಾನೆ ಎನ್ನಲಾಗುತ್ತಿದ್ದು ಈತನೇ ಸಿಡಿ ‘ಕಿಂಗ್’ಪಿನ್ ಆಗಿರಬಹುದು ಎನ್ನಲಾಗುತ್ತಿದೆ.
ವೀಡಿಯೋ ರಷ್ಯಾದಿಂದ ಅಪ್ಲೋಡ್ ಆಗಿಲ್ಲ ಬದಲಿಗೆ ಬೆಂಗಳೂರಿನಲ್ಲೇ ಕುಳಿತು ಸಿಡಿ ಗ್ಯಾಂಗ್ ಅಪ್ಲೋಡ್ ಮಾಡಿದೆ ಎನ್ನುವ ಮಾಹಿತಿ ಕಲೆ ಹಾಕಿದ ಎಸ್ಐಟಿ ಸಿಡಿ ಗ್ಯಾಂಗ್ ಶೋಧ ಕಾರ್ಯ ಮುಂದುವರೆಸಿದೆ. ವಶಕ್ಕೆ ಪಡೆದವರ ಪೈಕಿ ರಾಮನಗರದ ಓರ್ವ ಯುವತಿ ಸೇರಿದ್ದಾಳೆ. ಈ ಐವರು ಬೇರೆ ಬೇರೆ ಜಿಲ್ಲೆಯವರಾಗಿದ್ದಾರೆ ಎನ್ನಲಾಗುತ್ತಿದೆ. ಇವರಲ್ಲಿ ಇಬ್ಬರು ಮಾತ್ರ ಬೆಂಗಳೂರಿನವರಾಗಿದ್ದು ಓರ್ವ ಚಾಮರಾಜಪೇಟೆ ಹಾಗೂ ಇನ್ನೋರ್ವ ವಿಜಯನಗರದಲ್ಲಿ ವಾಸವಾಗಿದ್ದಾನೆ ಎನ್ನಲಾಗುತ್ತಿದೆ.
ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರಿಸಿಕೊಂಡಿದ್ದಾರೆನ್ನಲಾಗುತ್ತಿದೆ. ಇವರಲ್ಲಿ ಒಬ್ಬರು ತುಮಕೂರಿನ ಪತ್ರಕರ್ತ ಎನ್ನಲಾಗುತ್ತಿದ್ದು, ಸದ್ಯ ಎಸ್ಐಟಿ ತಲೆಮರಿಸಿಕೊಂಡ ಪತ್ರಕರ್ತನ ಶೋಧಕಾರ್ಯದಲ್ಲಿ ತೊಡಗಿದೆ. ಆದರೆ ಆತನ ಬಗ್ಗೆ ಈವರೆಗೂ ಗುಟ್ಟುಬಿಟ್ಟುಕೊಡದ ಎಸ್ಐಟಿ ಗುಪ್ತವಾಗಿ ಮಾಹಿತಿ ಕಲೆ ಹಾಕುತ್ತಿದೆ.
ಮಾತ್ರವಲ್ಲದೇ ಸಿಡಿ ಗ್ಯಾಂಗ್ ನಲ್ಲಿದ್ದ ವ್ಯಕ್ತಿ ಯಾವ ಗಣ್ಯರೊಂದಿಗೆ ಇದ್ದ ಹಾಗೂ ಆತ ಯಾವ ಯಾವ ಗಣ್ಯರೊಂದಿಗೆ ಸಂಭಾಷಣೆಯಲ್ಲಿದ್ದ? ಹಾಗೂ ಆತ ಯಾವ ಗಣ್ಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾನೆ? ಇಂತೆಲ್ಲಾ ಆಯಾಮಗಳಿಂದ ತನಿಖೆ ಮಾಡುವ ಮೂಲಕ ಎಸ್ಐಟಿ ಸಿಡಿ ಶೂರರ ಬೇಟೆಗೆ ಮುಂದಾಗಿದೆ.
ಒಟ್ಟಿನಲ್ಲಿ ‘ಸಿಡಿ’ ಗೇಡಿಗಳು ಬಹುಬೇಗ ಪತ್ತೆಹಚ್ಚೋ ಕಾರ್ಯ ಚುರುಕಾಗೇ ನಡೆಯುತ್ತಿದ್ದು, ಜಾರಕಿಹೊಳಿ ಬ್ರದರ್ಸ್ ಹೇಳಿದಂತೆ ಹೊಸ ಬಾಂಬ್ ಬೀಳುವ ಸಾದ್ಯತೆ ಹೆಚ್ಚಾಗಿದೆ.