ಲಾಕ್ಡೌನ್ಗೆ ಒಂದು ವರ್ಷ: ನಿರುದ್ಯೋಗದ ಹೊಡೆತದಿಂದ ಹೊರಬರಲಾರದ ಭಾರತ!
ಕೊರೊನಾ ವೈರಸ್ನ ಕಾರಣಕ್ಕಾಗಿ ದೇಶಾದ್ಯಂತ ಲಾಕ್ಡೌನ್ ಹೇರಲ್ಪಟ್ಟು ಇಂದಿಗೆ ಒಂದು ವರ್ಷ ಕಳೆದಿವೆ. ಆದರೆ, ಲಾಕ್ಡೌನ್ನಿಂದಾಗಿ ದೇಶವು ಹಲವಾರು ಸಂಕಷ್ಟಗಳು, ನಷ್ಟಗಳನ್ನು ಅನುಭವಿಸಿತು. ಆರ್ಥಿಕ ಮತ್ತು ವಾಣಿಜ್ಯ ಚಟುವಟಿಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದರಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಆ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಬೃಹತ್ ವಲಸೆ, ಸಾವು-ನೋವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಲಾಕ್ಡೌನ್ ಹೇರಿ ಒಂದು ವರ್ಷ ಕಳೆದರೂ ಉದ್ಯೋಗ ಸೃಷ್ಟಿಯಲ್ಲಿ ಚೇತರಿಕೆ ಕಂಡುಬಂದಿಲ್ಲ. ಇಂದಿಗೂ ದೇಶದ ಯುವಜನರು ನಿರುದ್ಯೋಗದಿಂದಾಗಿ ಬಳಲುತ್ತಿದ್ದಾರೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಅಂಕಿಅಂಶಗಳ ಪ್ರಕಾರ, 2021 ರ ಫೆಬ್ರವರಿಯಲ್ಲಿ ನಿರುದ್ಯೋಗ ದರವು ಶೇಕಡಾ 6.9ರಲ್ಲಿತ್ತು. ಇದು ಕಳೆದ ವರ್ಷ ಇದೇ ತಿಂಗಳಲ್ಲಿ (ಮಾರ್ಚ್) ಶೇಕಡಾ 7.8ಕ್ಕೆ ಏರಿತ್ತು. ಅಲ್ಲದೆ, ಲಾಕ್ಡೌನ್ ಹೇರಿದ ನಂತರ ಅದೇ ಮಾರ್ಚ್ನಲ್ಲಿ ನಿರುದ್ಯೋಗ ದರವು 8.8%ಗೆ ಏರಿಕೆಯಾಯಿತು.
ಅಲ್ಲದೆ, ಏಪ್ರಿಲ್ನಲ್ಲಿ ನಿರುದ್ಯೋಗ ದರವು ಶೇಕಡಾ 23.5 ಕ್ಕೆ ಏರಿತು ಮತ್ತು ಮೇ ತಿಂಗಳಲ್ಲಿ ಶೇಕಡಾ 21.7 ಕ್ಕೆ ಜಿಗಿಯಿತು ಎಂದು ಡೇಟಾ ಹೇಳಿದೆ.
ಲಾಕ್ಡೌನ್ ಸಡಿಲಗೊಂಡ ನಂತರ, ಜೂನ್ ತಿಂಗಳಲ್ಲಿ ಶೇಕಡಾ 10.2 ರಷ್ಟು ದಾಖಲಾಗಿದೆ ಮತ್ತು ಜುಲೈನಲ್ಲಿ ಶೇಕಡಾ 7.4 ಕ್ಕೆ ಇಳಿದಿದ್ದು ಸ್ವಲ್ಪ ಸುಧಾರಿಸಿತು. ಆದಾಗ್ಯೂ, ನಿರುದ್ಯೋಗ ದರವು ಆಗಸ್ಟ್ನಲ್ಲಿ ಮತ್ತೆ 8.3 ಕ್ಕೆ ಏರಿತು ಮತ್ತು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಶೇಕಡಾ 6.7 ಕ್ಕೆ ಇಳಿಯಿತು ಎಂದು ಸಿಎಮ್ಐಇ ಅಂಕಿಅಂಶಗಳು ತಿಳಿಸಿವೆ.
ಅಕ್ಟೋಬರ್ನಲ್ಲಿ, ನಿರುದ್ಯೋಗವು ಮತ್ತೆ ಶೇಕಡಾ 7 ಕ್ಕೆ ಏರಿತು ಮತ್ತು ನಂತರ ಕಳೆದ ನವೆಂಬರ್ನಲ್ಲಿ ಶೇಕಡಾ 6.5 ಕ್ಕೆ ಇಳಿದಿದೆ. 2020 ರ ಡಿಸೆಂಬರ್ನಲ್ಲಿ ನಿರುದ್ಯೋಗ ದರವು ಶೇಕಡಾ 9.1 ಕ್ಕೆ ಏರಿದೆ ಮತ್ತು ಜನವರಿಯಲ್ಲಿ ಶೇ 6.5 ಕ್ಕೆ ಇಳಿದಿದೆ ಎಂದು ಸಿಎಮ್ಐಇ ಡೇಟಾ ತೋರಿಸಿದೆ.
ಇದನ್ನೂ ಓದಿ: ನಿರುದ್ಯೋಗ ಸಮಸ್ಯೆಗೆ ಮೋದಿ ಸರ್ಕಾರ ಎಚ್ಚರಗೊಳ್ಳುತ್ತದೆಯೇ? ಯೋಜನೆ ಫಲಿಸುತ್ತದೆಯೆ?
ಸಿಎಮ್ಐಇ ದತ್ತಾಂಶವು ಜುಲೈನಿಂದ ನಿರುದ್ಯೋಗ ಸಮಸ್ಯೆಯಲ್ಲಿ ಸುಧಾರಣೆಯನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಂಫೂರ್ಣವಾಗಿ ತೆರೆದುಕೊಳ್ಳುವ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳವ ಅವಶ್ಯಕತೆಯಿದೆ.
ಕೃಷಿ ಕ್ಷೇತ್ರದಲ್ಲಿ ದೇಶದ ಜನಸಂಖ್ಯೆಯ ಶೇಕಡಾ 55 ಕ್ಕಿಂತ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. ಆದರೆ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಹೆಚ್ಚಿಸುವ ಮತ್ತು ಹೆಚ್ಚು ಉದ್ಯೋಗಿಗಳನ್ನು ನೇಮಿಸುವ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಮಿಕ ಸಚಿವಾಲಯದ ಮಾಹಿತಿಯ ಪ್ರಕಾರ, 2021 ರ ಮಾರ್ಚ್ 9 ರವರೆಗೆ ಕೊರೊನಾ ಸಂದರ್ಭದಲ್ಲಿ ಉದ್ಯೋಗಗಳ ಹೆಚ್ಚಳಕ್ಕಾಗಿ ಅಕ್ಟೋಬರ್ನಲ್ಲಿ ಪ್ರಾರಂಭಿಸಲಾದ ಆತ್ಮನಿರ್ಭರ್ ಭಾರತ್ ರೊಜ್ಗಾರ್ ಯೋಜನೆ(ಎಬಿಆರ್ವೈ)ಯಿಂದ ಸುಮಾರು 16.5 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮೂಲಕ ಜಾರಿಗೆ ತರಲಾದ ಈ ಯೋಜನೆಯು ವಿವಿಧ ವಲಯ / ಕೈಗಾರಿಕೆಗಳ ಉದ್ಯೋಗದಾತರ ಆರ್ಥಿಕ ಹೊರೆ ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಎಬಿಆರ್ವೈ ಅಡಿಯಲ್ಲಿ, ಭಾರತ ಸರ್ಕಾರವು ಎರಡು ವರ್ಷಗಳ ಅವಧಿಗೆ ನೌಕರರ ಪಾಲು (ಶೇಕಡಾ 12 ರಷ್ಟು ವೇತನ) ಮತ್ತು ಉದ್ಯೋಗದಾತರ ಪಾಲು (ಶೇ 12 ರಷ್ಟು ವೇತನ) ಪಾವತಿಸಬೇಕಾಗುತ್ತದೆ.
ಎಬಿಆರ್ವೈ ಅಡಿಯಲ್ಲಿ, ಅಕ್ಟೋಬರ್ 1, 2020 ರಿಂದ ಸುಮಾರು 16.5 ಲಕ್ಷ ಫಲಾನುಭವಿಗಳು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು ಇದರಲ್ಲಿ, ಸುಮಾರು 13.64 ಲಕ್ಷ ಜನರು ಯುಎಎನ್ (ಯುನಿವರ್ಸಲ್ ಅಕೌಂಟ್ ಸಂಖ್ಯೆ) ಯೊಂದಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಉಳಿದ ಅಂದಾಜು 2.86 ಲಕ್ಷ ಜನರು ಮಾರ್ಚ್ 1, 2020 ರಿಂದ ಸೆಪ್ಟೆಂಬರ್ 30, 2020 ರವರೆಗೆ ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗವಿಲ್ಲದೆ ಮರು-ಸೇರ್ಪಡೆಗೊಂಡವರು ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ರಾಜ್ಯದಲ್ಲಿ 2.5 ಲಕ್ಷ ಯುವಜನರಿಗೆ ನಿರುದ್ಯೋಗ ಭತ್ಯೆ ನೀಡಲಾಗಿದೆ: ರಾಜಸ್ಥಾನ ಸರ್ಕಾರ
ಎರಡು ವರ್ಷಗಳ ಅವಧಿಯಲ್ಲಿ ಎಬಿಆರ್ವೈ ಮೂಲಕ 50 ಲಕ್ಷದಿಂದ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಅಪೇಕ್ಷಿತ ಉದ್ದೇಶವನ್ನು ಸಾಧಿಸಲು ಇದಕ್ಕೆ ನಿಕಟ ಮೇಲ್ವಿಚಾರಣೆ ಮತ್ತು ಯೋಜಿತ ಅನುಷ್ಠಾನದ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಮತ್ತು ನೌಕರರ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಭಾರತ ಸರ್ಕಾರವು ಶೇಕಡಾ 12 ರಷ್ಟು ಉದ್ಯೋಗದಾತರ ವೇತನ ಪಾಲು ಮತ್ತು ಶೇಕಡಾ 12 ರಷ್ಟು ನೌಕರರ ವೇತನ ಪಾಲನ್ನು ಕೊಡುಗೆಯಾಗಿ ನೀಡಿದೆ. 2020ರ ಮಾರ್ಚ್ ನಿಂದ ಆಗಸ್ಟ್ ವರೆಗೆ ವೇತನ ತಿಂಗಳ ಒಟ್ಟು ವೇತನದ 24% ವೇತನವನ್ನು ಸರ್ಕಾರ ನೀಡಿದೆ ಎಂದು ಹೇಳಿಕೊಂಡಿದೆ. ಇಂತಹ 100ಕ್ಕಿಂತಹ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ 90 ಪ್ರತಿಶತದಷ್ಟು ಉದ್ಯೋಗಿಗಳು 15,000 ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ.
ಪಿಎಂಜಿಕೆವೈ ಯೋಜನೆಯಡಿ 2,567.66 ಕೋಟಿ ರೂಗಳನ್ನು 38.82 ಲಕ್ಷ ಅರ್ಹ ಉದ್ಯೋಗಿಗಳ ಇಪಿಎಫ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇತ್ತೀಚೆಗೆ ಬಿಡುಗಡೆಯಾದ ಇಪಿಎಫ್ಒ ವೇತನದಾರರ ದತ್ತಾಂಶವು ನಿವೃತ್ತಿ ನಿಧಿಯೊಂದಿಗಿನ ನಿವ್ವಳ ಹೊಸ ದಾಖಲಾತಿಗಳು 2020 ರಲ್ಲಿ ಇದೇ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಶೇ 28 ರಷ್ಟು ಹೆಚ್ಚಳವಾಗಿದೆ. ಇದು 13.36 ಲಕ್ಷಕ್ಕೆ ತಲುಪಿದೆ ಎಂದು ತೋರಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ 2021 ರ ಜನವರಿಯಲ್ಲಿ ಶೇಕಡಾ 24 ರಷ್ಟು ಬೆಳವಣಿಗೆಯನ್ನು ಡೇಟಾ ಪ್ರತಿಬಿಂಬಿಸಿದೆ. ಪ್ರಸ್ತುತ ಆರ್ಥಿಕ ವರ್ಷದ ಮೊದಲ ಹತ್ತು ತಿಂಗಳಲ್ಲಿ ಇಪಿಎಫ್ಒ ಸುಮಾರು 62.49 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಡೇಟಾ ತೋರಿಸಿದೆ.
ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: 2020ರಲ್ಲಿ ದಾಖಲೆಯ ನಿರುದ್ಯೋಗ ಹಂತಕ್ಕೆ ಭಾರತ; ಮೋದಿ ಸರ್ಕಾರವೆಷ್ಟು ಕಾರಣ?