ಪೈಶಾಚಿಕ ಕೃತ್ಯ: ಮಾವಿನ ಹಣ್ಣು ಕದ್ದ ಆರೋಪ – ಬಾಲಕರಿಗೆ ಸಗಣಿ ತಿನ್ನಿಸಿದ ದುರುಳರು

ಮಾವಿನ ಹಣ್ಣು ಕದ್ದಿದ್ದಾರೆಂದು ಆರೋಪಿಸಿ, ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಬಲವಂತವಾಗಿ ಅವರ ಬಾಯಿಗೆ ಸಗಣಿ ತುರುಕಿರುವ ಘಟನೆ ತಲಂಗಾಣದ ಮೆಹಬೂಬಾದ್‌ನಲ್ಲಿ ನಡೆದಿದೆ.

ಈ ಘಟನೆಯನ್ನು ದುರುಳರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಬೂಬಾದ್ ಜಿಲ್ಲೆಯ ತೋರೂರ್ ಮಂಡಲದ ಹೊರವಲಯದಲ್ಲಿರುವ ಮಾವಿನ ತೋಟದಲ್ಲಿ 13 ಮತ್ತು 16 ವರ್ಷ ವಯಸ್ಸಿನ ಇಬ್ಬರು ಬಾಲಕರನ್ನು ಮಾವಿನ ಹಣ್ಣುಗಳನ್ನು ಕದ್ದ ಆರೋಪದ ಮೇಲೆ ತೋಟದ ಕಾವಲುಗಾರರು ಥಳಿಸಿದ್ದಾರೆ.

ತೋಟದ ಕಾವಲುಗಾರರರಾದ ಯಾಕೂಬ್ ಮತ್ತು ರಾಮು ಇಬ್ಬರು ಮಕ್ಕಳನ್ನು ಕಟ್ಟಿಹಾಕಿ, ಥಳಿಸಿ ಕ್ರೂರವಾಗಿ ವರ್ತಿಸಿದ್ದಾರೆ. ಕೈಗಳನ್ನು ನಿರ್ದಾಕ್ಷಿಣ್ಯವಾಗಿ ಕಟ್ಟಿ ಕಟ್ಟಿಗೆಗಳಿಂದ ಹೊಡೆದಿದ್ದಾರೆ. ದನಗಳ ಸಗಣಿಯನ್ನು ಬಲವಂತವಾಗಿ ಮಕ್ಕಳ ಬಾಯಿಗೆ ಸಗಣಿ ತುರುಕಿ ಪೈಶಾಚಿಕ ಆನಂದ ಪಟ್ಟಿದ್ದಾರೆ. ಮಕ್ಕಳು ಎಷ್ಟು ಬೇಡಿಕೊಂಡರು ಇಬ್ಬರು ಅವರನ್ನು ಬಿಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗಾಯಗೊಂಡ ಇಬ್ಬರು ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಕಾವಲುಗಾರರನ್ನು ಬಂಧಿಸಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರು ತಾವು ಮಾವಿನಹಣ್ಣನ್ನು ಕದ್ದಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಪ್ಪಿಸಿಕೊಂಡಿದ್ದ ತಮ್ಮ ನಾಯಿಯನ್ನು ಹುಡುಕಲು ಮಾತ್ರ ಹಣ್ಣಿನ ತೋಟಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.

ತೋರೂರಿನ ಇಬ್ಬರು ಅಪ್ರಾಪ್ತ ಮಕ್ಕಳು ಅಮ್ಮಾಪುರಂನಲ್ಲಿರುವ ತಮ್ಮ ಸಂಬಂಧಿಕರ ಬಳಿಗೆ ಹೋಗಿ ವಾಪಾಸ್ ಬರುವಾಗ ಮಾವಿನ ತೋಟಕ್ಕೆ ಹೋಗಿದ್ದಾರೆ. ತಕ್ಷಣ ಇದನ್ನು ನೋಡಿದ ಕಾವಲುಗಾರ ಯಾಕೋಬನು ಓಡಿ ಬಂದು ಮಕ್ಕಳ ಕೈಗಳನ್ನು ಕಟ್ಟಿ ಹಾಕಿದ್ದಾನೆ.

ಇದನ್ನೂ ಓದಿ: ಮರಾಠರನ್ನು ಆಕ್ರಮಕಾರರು ಎಂದ ಗೋವಾ ಟೂರಿಸಂ ಇಲಾಖೆ; ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights