ಲಾಕ್ಡೌನ್ಗೆ ಸಚಿವ-ಶಾಸಕರ ವಿರೋಧ; ಸರ್ವಪಕ್ಷಗಳ ಸಭೆ ಕರೆದ ರಾಜ್ಯಪಾಲರು!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಹೀಗಾಗಿ ನಗರದಲ್ಲಿ ಲಾಕ್ಡೌನ್ ಜಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವು ಸಚಿವರು ಸೇರಿದಂತೆ ವಿಪಕ್ಷಗಳ ಶಾಸಕರೂ ಲಾಕ್ಡೌನ್ ಜಾರಿಗೆ ವಿರೋಧ ವ್ಯಕ್ತೊಪಡಿಸಿದ್ದಾರೆ. ಸೋಮವಾರ ಸಿಎಂ ಬಿಎಸ್ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಸಮರ್ಥತೆಯ ಬಗ್ಗೆ ವಿಪಕ್ಷಗಳು ಕಿಡಿಕಾರಿವೆ. ಇದರಿಂದಾಗಿ ಸಭೆಯಲ್ಲಿ ಯಾವುದೇ ಕ್ರಮಗಳ ಬಗ್ಗೆ ನಿರ್ಣಯವಾಗಿಲ್ಲ. ಇದೀಗ ಇಂದು (ಮಂಗಳವಾರ) ರಾಜ್ಯಪಾಲರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯ ಬಳಿಕ ಕಠಿಣ ಕ್ರಮಗಳು ಜಾರಿಯಾಗುತ್ತವಾ ಅಥವಾ ಲಾಕ್ಡೌನ್ ಜಾರಿಯಾಗತ್ತದೆಯಾ ಎಂಬ ಬಗ್ಗೆ ಖಚಿತ ನಿರ್ಧಾರ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಲಾಕ್ಡೌನ್ ಜಾರಿ ಬೇಡವೇ ಬೇಡ. ಬದಲಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ. ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಪೊಲೀಸರಿಗೆ ಅಧಿಕಾರ ನೀಡಿ ಎಂದು ಸಲಹೆ ನೀಡಿದ್ದರು. ಅಲ್ಲದೆ, ಲಾಕ್ಡೌನ್ ಜಾರಿ ಮಾಡುವುದೇ ಆದರೆ, ಕುಟುಂಬದ ನಿರ್ವಹಣೆಗಾಗಿ ಪ್ರತಿ ಕುಟುಂಬಕ್ಕೆ 25,000 ರೂ ಪರಿಹಾರ ಹಣ ನೀಡಬೇಕೆಂದು ಒತ್ತಾಯಿಸಿದರು.
ಲಾಕ್ಡೌನ್ಗೆ ಕಾಂಗ್ರೆಸ್ ಸೇರಿದಂತೆ ಆಡಳಾತಾರೂಢ ಬಿಜೆಪಿ ಶಾಸಕರೂ ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆಯನ್ನು ನಡೆಸಿದ ಸಚಿವ ಆರ್ ಅಶೋಕ್ ಕೂಡ ಲಾಕ್ಡೌನ್ ವಿರುದ್ದವಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯಪಾಲ ವಿ.ಆರ್.ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಈ ವೇಳೆ ಬೆಂಗಳೂರು ಜನಪ್ರತಿನಿಧಿಗಳ ಸಭೆಯ ಅಭಿಪ್ರಾಯ, ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಯಲಿದೆ. ಅಂತಿಮವಾಗಿ ಯಾವ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧರಿಸುತ್ತಾರೆ. ಮಂಗಳವಾರ ಸಂಜೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಡೌನ್-ಡೌನ್: ವಿಧಾನ ಸೌಧದಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್!