ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜನತೆಯ ತುರ್ತು ಆಗ್ರಹ ಪತ್ರ..!
ಕೊರೊನಾ ತಡೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು ಜನಾಗ್ರಹ ಆಂದೋಲದನದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜನತೆಯ ತುರ್ತು ಆಗ್ರಹ ಪತ್ರ ಬರೆಯಲಾಗಿದೆ. ರಾಜ್ಯದ ಜನತೆಯ ಪರವಾಗಿ ಕೆಲ ಬೇಡಿಕೆಗಳನ್ನು ಸಿಎಂ ಮುಂದಿರಿಸಿ ಈ ಪತ್ರ ಬರೆಯಲಾಗಿದೆ.
ಪತ್ರ ಹೀಗಿದೆ…
ಮಾನ್ಯ ಮುಖ್ಯಮಂತ್ರಿಗಳೇ,
ತೀವ್ರವಾದ ದುಃಖ, ನೋವು ಮತ್ತು ಸಂಕಟದ ಜೊತೆ ನಾವು ಈ ಪತ್ರವನ್ನು ತಮಗೆ ಬರಿಯುತ್ತಿದ್ದೇವೆ. ಇದನ್ನು ಕರ್ನಾಟದ ಪ್ರತಿ ಮನಸ್ಸಿನ ಮನದಾಳದ ಪತ್ರವಾಗಿ ಪರಿಗಣಿಸಬೇಕಾಗಿ ಮನವಿ.
ಕೋವಿಡ್ ರೋಗದ ಈ ಎರಡನೇ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅನಾರೋಗ್ಯ, ಆಸ್ಪತ್ರೆ, ಸಾವು, ಸಾಲ, ದಿನಸಿ, ಬಾಡಿಗೆ…ಹೀಗೆ ಒಂದಲ್ಲಾ ಒಂದು ರೂಪದ ದುಃಖ ಮತ್ತು ಚಿಂತೆ ಪ್ರತಿ ಕುಟುಂಬವನ್ನೂ ಮುತ್ತಿಕೊಂಡಿದೆ. ಮಾಧ್ಯಮಗಳಂತೂ ಜನರನ್ನು ಭಯಭೀತಗೊಳಿಸಿಬಿಟ್ಟಿವೆ. ಅಲ್ಲದೆ ಈ ಸಮೂಹ ಭೀತಿಗೆ ಸರ್ಕಾವೂ ನೇರ ಹೊಣೆಯಾಗಿದೆ. ಕೋರೋನಾ ರೋಗದ ಭಯ ಜನರಿಗೆ ಇದೆಯಾದರೂ. ಅದಕ್ಕಿಂತಲೂ ಹೆಚ್ಚಾಗಿ ಕೋರೋನಾ ಬಂದರೆ ತಮಗೆ ಬೆಡ್, ಆಕ್ಸಿಜನ್ ಮತ್ತು ಔಷಧಿ ದೊರಕಲಿಕ್ಕಿಲ್ಲ ಎಂಬ ಭಯ ಜನರನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದೆ. ಈ ಆತಂಕ ಹುಸಿಯಾದದ್ದಲ್ಲ, ಕ್ರೂರ ವಾಸ್ತವವೇ ಹಾಗಿದೆ. ಒಂದೇ ದಿನದಲ್ಲಿ 24 ಜನರನ್ನು ಬಲಿತೆಗೆದುಕೊಂಡ ಚಾಮರಾಜ ನಗರದ ಅನುಭವ ಇದಕ್ಕೊಂದು ಮೈನಡುಗಿಸುವ ಉದಾಹರಣೆಯಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಬೆಡ್ ಮತ್ತು ಆಕ್ಸಿಜನ್ನಿಗಾಗಿ ಬದುಕಿನ ಘನತೆ ಬಿಟ್ಟು ಕಂಡಕಂಡವರಲ್ಲಿ ಗೋಗರೆಯುತ್ತಿದ್ದಾರೆ. ಮಿಕ್ಕವರು ನಮ್ಮದೇನು ಗತಿ ಎಂದು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ.
ಸಾಲದೆಂಬಂತೆ ಲಾಕ್ ಡೌನ್ ಲಕ್ಷಾಂತರ ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಂಡಿದೆ. ಕಳೆದ ಕೋವಿಡ್ ಅಲೆಯಲ್ಲೇ ಜನ ಇದ್ದುದ್ದನ್ನೆಲ್ಲಾ ಕಳೆದುಕೊಂಡು ಸಾಲಗಾರರಾಗಿದ್ದರು. ಈಗ ಮತ್ತೊಂದು ಹೊಡೆತ. ಈ ಬಾರಿ ಮನೆಯಲ್ಲೂ ಕಾಸಿಲ್ಲ, ಸಾಲ ನೀಡುವವರೂ ಗತಿ ಇಲ್ಲ. ಮನೆ ನಡೆಸುವುದು ಹೇಗೆ? ಬಾಡಿಗೆ ಕಟ್ಟುವುದು ಹೇಗೆ? ಚಿಕಿತ್ಸೆಗೆ ಹಣ ಹೊಂದಿಸುವುದು ಹೇಗೆ? ಸಾಲ ತೀರಿಸುವುದು ಹೇಗೆ? ಎಂಬ ಚಿಂತೆ ಸಾಮಾನ್ಯರನ್ನು ನಿತ್ಯವೂ ಕಿತ್ತು ತಿನ್ನುತ್ತಿದೆ.
ಕೋರಾನಾದಂತಹ ಎರಡನೇ ಅಲೆ ಬರುವುದೆಂಬ ವಿಚಾರ ಎಲ್ಲರಿಗೂ ಗೊತ್ತಿತ್ತು. ತಮಗೆ ಗೊತ್ತಿರಲಿಲ್ಲ ಎಂದುಕೊಳ್ಳಲು ಸಾಧ್ಯವೇ ಇಲ್ಲ. ಆದರೆ ನಿಮ್ಮ ಸರ್ಕಾರ ರಾಜ್ಯದ ವೈದ್ಯಕೀಯ ವ್ಯವಸ್ಥೆಯನ್ನು ಅದಕ್ಕಾಗಿ ಸಜ್ಜುಗೊಳಿಸಲೇ ಇಲ್ಲ. ಬದಲಿಗೆ ಇದ್ದ ವ್ಯವಸ್ಥೆಯನ್ನು ರದ್ದುಗೊಳಿಸಿ ರಾಜ್ಯವನ್ನು ನಿರಾಯುಧಗೊಳಿಸಿಬಿಟ್ಟಿರಿ. ಇಂದಿನ ಈ ಸ್ಥಿತಿಗೆ ಸರ್ಕಾರದ ಈ ಅಕ್ಷಮ್ಯ ನಿರ್ಲಕ್ಷ್ಯವೇ ಮೂಲ ಕಾರಣವಾಗಿದೆ.
ಇರಲಿ, ಇದು ದೂಷಾರೋಪಣೆ ಮಾಡುವ ಸಮಯವೂ ಅಲ್ಲ. ಸರಿತಪ್ಪುಗಳು ಏನೇ ಇದ್ದರೂ, ಈಗಲಾದರೂ ಒಟ್ಟಾಗಿ ಇದನ್ನು ಎದುರಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ನಾವು ನಮ್ಮ ಕೈಲಾದ್ದನ್ನು ಮಾಡುತ್ತಿದ್ದೇವೆ. ಹೆಲ್ಪ್ ಲೈನ್ ನಡೆಸಿ ಜನರಿಗೆ ವೈದ್ಯಕೀಯ ನೆರವು ಹಾಗೂ ಆಹಾರದ ಆಸರೆ ನೀಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೇವಲ ಇದರಿಂದ ಜನಸಾಮಾನ್ಯರೆಲ್ಲರ ಕಣ್ಣೀರನ್ನು ಅಳಿಸಲು ಸಾಧ್ಯವಿಲ್ಲ ಎಂಬ ಅರಿವು ನಮಗಿದೆ.. ಈ ಸವಾಲನ್ನು ನಿಭಾಯಿಸಬೇಕಾದ ಪ್ರಧಾನ ಹೊಣೆ ಸರ್ಕಾರದ ಮೇಲೆಯೇ ಇದೆ ಮತ್ತು ಅದರಿಂದ ಮಾತ್ರ ಸಾಧ್ಯವಿದೆ. ಜನರ ಜೀವ ಮತ್ತು ಜೀವನವನ್ನು ಉಳಿಸಲು ಸರ್ಕಾರ ಹಿಂದೆಂದೂ ಕಂಡರಿಯದ ಕ್ರಮಗಳಿಗೆ ಮುಂದಾದರೆ ಮಾತ್ರ ಈ ಸಂಕಟದ ಅವಧಿಯನ್ನು ಸಾಧ್ಯವಾದಷ್ಟು ಕಡಿಮೆ ನಷ್ಟದ ಜೊತೆ ದಾಟಲು ಸಾಧ್ಯವಾಗುತ್ತದೆ. ಹಾಗಾಗಿ ನೀವು ತಡಮಾಡದೇ ಈ ಕೆಳಕಂಡ ದಿಟ್ಟ ಕ್ರಮಗಳನ್ನು ಯುದ್ದೋಪಾದಿಯಾಗಿ ಕೈಗೆತ್ತಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ ಮತ್ತು ಒತ್ತಾಯಿಸುತ್ತಿದ್ದೇವೆ.
ಸರ್ಕಾರ ತುರ್ತಾಗಿ ಕೈಗೆತ್ತಿಕೊಳ್ಳಲೇಬೇಕಾದ ಪಂಚ ಕ್ರಮಗಳು: ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ ಹಾಗೂ ಆರ್ಥಿಕ ನೆರವು.
ಇದರ ಭಾಗವಾಗಿ…
- ರಾಜ್ಯದ ಎಲ್ಲಾ ಊರುಗಳಲ್ಲಿ ಕೊರೋನಾ ಕೇರ್ ಸೆಂಟರ್ ಮತ್ತು ಆಕ್ಸಿಜನ್ ಸಹಿತ ಬೆಡ್ ಗಳ ಸಂಖ್ಯೆಯನ್ನು ತೀವ್ರಗತಿಯಲ್ಲಿ ಪ್ರತಿನಿತ್ಯ ಹೆಚ್ಚಿಸಬೇಕು ಮತ್ತು ನಿತ್ಯವೂ ಇದರ ಮಾಹಿತಿಯನ್ನು ಜನರಿಗೆ ನೀಡಬೇಕು.
- ಎಲ್ಲಾ ವಯಸ್ಸಿನ ಜನರಿಗೂ ವ್ಯಾಕ್ಸಿನ್ ಅನ್ನು ಸರ್ಕಾರವೇ ಉಚಿತವಾಗಿ ವ್ಯವಸ್ಥೆ ಮಾಡಬೇಕು ಮತ್ತು ತಡಮಾಡದೆ ನೀಡಬೇಕು.
- ರಾಜ್ಯದ ಎಲ್ಲಾ ಕುಟುಂಬಗಳಿಗೂ ಸರ್ಕಾರವೇ ಸಮಗ್ರ ಪಡಿತರ ಕಿಟ್ ಅನ್ನು ಉಚಿತವಾಗಿ ವಿತರಿಸಬೇಕು.
- ಕೆಲಸ ಕಳೆದುಕೊಂಡಿರುವ ಅಸಂಘಟಿತ ಕಾರ್ಮಿಕ, ಆಟೋ – ಟ್ಯಾಕ್ಸಿ ಚಾಲಕ, ನೇಕಾರ ಕಾರ್ಮಿಕ, ಕೃಷಿ ಕಾರ್ಮಿಕ, ಸಣ್ಣ ವ್ಯಾಪಾರಿ, ಸ್ವಯಂ ಉದ್ಯೋಗಿ ಮುಂತಾದ ಶ್ರಮಿಕ ವರ್ಗದ ಜನರಿಗೆ [ದೆಹಲಿ ಸರ್ಕಾರದ ಮಾದರಿಯಲ್ಲಿ] ಮಾಸಿಕ ಕನಿಷ್ಟ 5 ಸಾವಿರ ರೂಗಳ ಆರ್ಥಿಕ ನೆರವನ್ನು ನೀಡಲೇಬೇಕು. ಕಛೇರಿಗಳ ಸುತ್ತ ಅಲೆದಾಡಿಸದೆ ಅದನ್ನು ಕೂಡಲೇ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು.
- ಕೋರಾನಾದಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಕನಿಷ್ಟ 5 ಲಕ್ಷದ ಪರಿಹಾರ ದನವನ್ನು ನೀಡಬೇಕು.
ಮೇಲ್ಕಂಡ ಈ ಐದು ತೀರ್ಮಾನಗಳನ್ನು ಸರ್ಕಾರ ಈ ಕೂಡಲೇ ತೆಗೆದುಕೊಳ್ಳಲೇಬೇಕು. ಇದನ್ನು ಮಾಡಲು ಹಣವನ್ನು ಹೊಂದಿಸುವುದು ಹೇಗೆ? ಎಂಬುದು ತಮ್ಮ ಮನದಲ್ಲೂ ಬರುವ ತತ್ ಕ್ಷಣದ ಪ್ರಶ್ನೆ ಎಂಬುದು ನಮಗೆ ಗೊತ್ತು. ಅದಕ್ಕಾಗಿ ನಾವು ಕೆಳಕಂಡ ಮೂರು ಮೂಲಗಳನ್ನು ಸೂಚಿಸುತ್ತಿದ್ದೇವೆ. ನೀವು ಈ ಸಂದರ್ಭದಲ್ಲಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಹಣ ಹೊಂದಿಸುವುದು ದೊಡ್ಡ ವಿಚಾರವೇ ಅಲ್ಲ. [ಇದನ್ನು ಅಂಕಿ ಅಂಶಗಳ ಸಮೇತ ಪ್ರಸ್ತಾಪವನ್ನು ಮುಂದಿಡಲು ನಾವು ಸಿದ್ಧರಿದ್ದೇವೆ.]
- ಕರ್ನಾಟಕದಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ವಹಿವಾಟಿನ ಮೇಲೆ ಶೇ. 2ರ ಕೋರೋನಾ ಸೆಸ್ ನಿಗದಿ ಮಾಡಿ. ಹಾಗೇ ಕರ್ನಾಟಕದ ಎಲ್ಲಾ ಕೋಟ್ಯಾಧಿಪತಿ ಉದ್ದಿಮೆಪತಿಗಳು ಮತ್ತು ರಾಜಕಾರಣಿಗಳ ವಾರ್ಷಿಕ ಆದಾಯದ ಶೇ. 5ನ್ನು ಸುಂಕವಾಗಿ ಸಂಗ್ರಹಿಸಿ. ಕೂಡಲೇ ಈ ಹಣವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸುಗ್ರೀವಾಜ್ಞೆ ಹೊರಡಿಸಿ
- ಮೆಟ್ರೋ ವಿಸ್ತರಣೆ, ರಸ್ತೆ ವಿಸ್ತರಣೆ, ಸರ್ಕಾರಿ ಸೌಧಗಳ ನಿರ್ಮಾಣ, ಮಠಗಳಿಗೆ ಅನುದಾನ ಮುಂತಾದ ಬಹುತೇಕ ತುರ್ತಲ್ಲದ ಯೋಜನೆಗಳಿಗೆ ಮಂಜೂರು ಮಾಡಿರುವ ಹಣವನ್ನು ಕೋವಿಡ್ ನಿಭಾವಣೆಗೆ ಡೈವರ್ಟ್ ಮಾಡಿ.
- ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬರ ಪರಿಹಾರದ, ನೆರೆ ಪರಿಹಾರದ, ಜಿ ಎಸ್ ಟಿ ಬಾಬ್ತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ. ‘ಸೆಂಟ್ರಲ್ ವಿಸ್ಟಾ’ [20 ಸಾವಿರ ಕೋಟಿ ಮೌಲ್ಯದ ಮೋದಿ ಮಹಲ್] ನಂತಹ ಐಶಾರಾಮಿ ದುಂದು ವೆಚ್ಚಗಳನ್ನು ರದ್ದುಗೊಳಿಸಿ ರಾಜ್ಯಗಳಿಗೆ ಕೋವಿಡ್ ನೆರವು ನೀಡಲು ಮುಂದಾಗಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿ
ಮಾನ್ಯರೇ,
ಕೊನೆ ಮಾತನ್ನು ಹೇಳಿ ಈ ಪತ್ರವನ್ನು ಮುಗಿಸುತ್ತಿದ್ದೇವೆ. ನಾವು ಈ ಪತ್ರವನ್ನು ಔಪಚಾರಿಕವಾಗಿ ತಮಗೆ ಬರಿಯುತ್ತಿಲ್ಲ. ಬದಲಿಗೆ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡು, ರಾಜ್ಯದ ಜನರು ಉಳಿಯಬೇಕಾದರೆ ಸರ್ಕಾರ ಇದನ್ನು ಮಾಡಲೇಬೇಕು ಎಂಬ ಒತ್ತಾಸೆಯೊಂದಿಗೆ ಬರಿಯುತ್ತಿದ್ದೇವೆ. ನೀವು ಈ ಪತ್ರವನ್ನು ಮತ್ತು ಇದರಲ್ಲಿನ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು ಆಶಿಸುತ್ತೇವೆ. ಮುಖ್ಯಮಂತ್ರಿಗಳಾಗಿ ನೀವು ದಿಟ್ಟ ಕ್ರಮಗಳ ಮೂಲಕ ಜನರ ನೆರವಿಗೆ ಧಾವಿಸದಿದ್ದರೆ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ಪ್ರತಿಭಟಿಸುವ ಮತ್ತು “ನಿಮ್ಮ ಬಳಿಗೂ ಬರುವ” ಅನಿವಾರ್ಯ ನಿರ್ಧಾರಗಳನ್ನು ನಾವೂ ಮಾಡಲೇಬೇಕಾಗುತ್ತದೆ. ಏಕೆಂದರೆ ನಮ್ಮ ಜೀವಕ್ಕಿಂತಲೂ ಜನರ ಜೀವನ ಮುಖ್ಯವಿದೆ. ಅದರ ಪತನವನ್ನು ನೋಡುತ್ತಾ ಕೈ ಕಟ್ಟಿ ಕೂರಲಂತೂ ನಮಗೆ ಸಾಧ್ಯವಿಲ್ಲ.
ತಮ್ಮ ಉತ್ತರದ ಮತ್ತು ಅಗತ್ಯ ಕ್ರಮದ ನಿರೀಕ್ಷೆಯಲ್ಲಿ,
- ಶ್ರೀ. ಹೆಚ್.ಎಸ್.ದೊರೆಸ್ವಾಮಿ, ಬೆಂಗಳೂರು.
- ಶ್ರೀ. ಪಂಡಿತಾರಾಧ್ಯ ಸ್ವಾಮೀಜಿಗಳು, ಸಾಣೆಹಳ್ಳಿ
- ಡಾ.ಬರಗೂರು ರಾಮಚಂದ್ರಪ್ಪ, ಬೆಂಗಳೂರು.
- ಸಸಿಕಾಂತ್ ಸೆಂದಿಲ್, ಬೆಂಗಳೂರು
- ಮಾವಳ್ಳಿ ಶಂಕರ್, ಬೆಂಗಳೂರು.
- ಚೇತನ್, ಚಿತ್ರನಟರು, ಬೆಂಗಳೂರು
- ಬಿ.ಟಿ.ಲಲಿತಾನಾಯ್ಕ್, ಬೆಂಗಳೂರು.
- ಡಾ. ಗಣೇಶ್ ದೇವಿ, ಧಾರವಾಡ
- ಡಾ. ವಿಜಯಾ, ಬೆಂಗಳೂರು
- ಡಾ.ಸಿ.ಎಸ್.ದ್ವಾರಕನಾಥ್, ಬೆಂಗಳೂರು.
- ಡಾ.ಪ್ರಕಾಶ್ ಕಮ್ಮರಡಿ, ಬೆಂಗಳೂರು.
- ಡಾ.ಭೂಮಿಗೌಡ, ಮಂಗಳೂರು.
- ಕೆ.ನೀಲಾ, ಕಲಬುರ್ಗಿ
- ಯಾಸಿನ್ ಮಲ್ಪೆ, ಉಡುಪಿ
- ಕೆ.ಎಲ್. ಅಶೋಕ್, ಶಿವಮೊಗ್ಗ.
- ಬಿ.ಸುರೇಶ್, ಬೆಂಗಳೂರು.
- ಬಡಗಲಪುರ ನಾಗೇಂದ್ರ, ಮೈಸೂರು.
- ಸ್ವರ್ಣ ಭಟ್, ರಾಯಚೂರು.
- ಕಡಿದಾಳ್ ಶಾಮಣ್ಣ, ಶಿವಮೊಗ್ಗ.
- ಡಾ.ಎಚ್.ಎಸ್.ಅನುಪಮಾ, ಹೊನ್ನಾವರ, ಉತ್ತರ ಕನ್ನಡ
- ನೂರ್ ಶ್ರೀಧರ್,ಬೆಂಗಳೂರು.
- ಎಚ್.ಆರ್.ಬಸವರಾಜಪ್ಪ, ಶಿವಮೊಗ್ಗ.
- ಪೀರ್ ಬಾಷಾ, ಕೊಪ್ಪಳ.
- ಹೆಚ್.ಎಂ.ರಾಮಚಂದ್ರ, ಕೋಲಾರ.
- ಗುರುಪ್ರಸಾದ್ ಕೆರಗೋಡು, ಮಂಡ್ಯ.
- ಯಾಸರ್ ಹುಸೇನ್, ಮಂಗಳೂರು.
- ವಿಠ್ಠಪ್ಪ ಗೋರಂಟ್ಲಿ, ಕೊಪ್ಪಳ.
- ಎಸ್.ಮಾರಪ್ಪ, ರಾಯಚೂರು.
- ಲಾಲಪ್ಪ, ರಾಯಚೂರು.
- ಚೇತನ್, ಬೆಂಗಳೂರು.
- ಅರ್.ಜಿ.ಹಳ್ಳಿ. ನಾಗರಾಜ್, ಬೆಂಗಳೂರು.
- ಸಿರಿಮನೆ ನಾಗರಾಜ್, ಬೆಂಗಳೂರು.
- ಸಿದಗೌಡ ಮೋದಗಿ, ಬೆಳಗಾವಿ.
- ಕರಿಯಪ್ಪ ಗುಡಿಮನಿ, ಬಳ್ಳಾರಿ.
- ರವಿ ಕೃಷ್ಣಾರೆಡ್ಡಿ, ಬೆಂಗಳೂರು.
- ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಕೋಲಾರ.
- ಡಾ.ಶ್ರೀಕಂಠ ಕೂಡಿಗೆ, ಶಿವಮೊಗ್ಗ.
- ದಿನೇಶ್ ಅಮೀನ್ಮಟ್ಟು, ಬೆಂಗಳೂರು.
- ಪ್ರೊ.ಎ.ಎಸ್.ಪ್ರಭಾಕರ್, ಹೊಸಪೇಟೆ.
- ಬಿ.ಎಂ.ಬಷೀರ್, ಮಂಗಳೂರು.
- ಯು. ಹೆಚ್. ಉಮರ್.
- ಯೂಸೂಫ್ ಕನ್ನಿ, ಬೆಂಗಳೂರು.
- ಡಿ.ಹೆಚ್.ಪೂಜಾರ್, ಕೊಪ್ಪಳ.
- ಎನ್.ವೆಂಕಟೇಶ್, ಚಿಂತಾಮಣಿ.
- ವಿ.ನಾಗರಾಜ್, ಬೆಂಗಳೂರು.
- ಚಾಮರಸ ಮಾಲೀಪಾಟೀಲ್,ರಾಯಚೂರು.
- ದಾನಪ್ಪ ನಿಲೋಗಲ್, ರಾಯಚೂರು.
- ಡಿ.ಎಚ್.ಕಂಬಳಿ, ರಾಯಚೂರು.
- ಕೆಜೆಎಸ್ ಮರಿಯಪ್ಪ, ಬೆಂಗಳೂರು.
- ಗೋಪಾಲ್ ಜನಮನ , ಮೈಸೂರು.
- ಪ್ರೊ.ಪುರುಷೋತ್ತಮ್ ಬಿಳಿಮಲೆ, ದೆಹಲಿ.
- ಪ್ರೊ.ನಗರಗೆರೆ ರಮೇಶ್, ಬೆಂಗಳೂರು.
- ಪ್ರೊ.ಬಾಬು ಮ್ಯಾಥ್ಯೂ, ಬೆಂಗಳೂರು.
- ಕಾಂ.ಬಾಲನ್, ಬೆಂಗಳೂರು.
- ಪ್ರೊ.ಕೆ.ಎಸ್.ಶರ್ಮಾ, ಹುಬ್ಬಳ್ಳಿ.
- ಪ್ರೊ.ವಿ.ಎಸ್.ಶ್ರೀಧರ್, ಬೆಂಗಳೂರು.
- ಎನ್.ಡಿ.ವೆಂಕಮ್ಮ,ಬಳ್ಳಾರಿ.
- ಪ್ರೊ.ಶಿವರಾಮಯ್ಯ, ಬೆಂಗಳೂರು.
- ಚನ್ನಕೃಷ್ಣಪ್ಪ, ಬೆಂಗಳೂರು.
- ಶಿವಸುಂದರ್, ಪ್ರಗತಿಪರ ಚಿಂತಕರು, ಬೆಂಗಳೂರು.
- ಅಖಿಲಾ ವಾಸನ್, ಬೆಂಗಳೂರು
- ವಿಜಯ್ ಕುಮಾರ್ ಸೀತಪ್ಪ, ಬೆಂಗಳೂರು
- ಡಾ.ವಾಸು, ಬೆಂಗಳೂರು
- ವಿನಯ್ ಶ್ರೀನಿವಾಸ್, ಬೆಂಗಳೂರು
- ಅಡ್ವೋಕೇಟ್ ಬಿ.ಟಿ.ವಿಶ್ವನಾಥ್, ಮಂಡ್ಯ
- ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಬಳ್ಳಾರಿ