ಕುಸ್ತಿ ಚಾಂಪಿಯನ್ ಕೊಲೆ ಪ್ರಕರಣ: ಆರೋಪಿ ಸುಶೀಲ್ ಬಂಧನ ಮತ್ತು ಒಎಸ್ಡಿ ಹುದ್ದೆಯಿಂದ ಅಮಾನತು!
ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಅವರ ಕೊಲೆ ಪ್ರಕರಣದ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಸುಶೀಲ್ ಅವರನ್ನು ಒಎಸ್ಡಿ ಹುದ್ದೆಯಿಂದ ಅಮಾನತುಗೊಳಿಸಿಲು ಉತ್ತರ ರೈಲ್ವೇ ನಿರ್ಧರಿಸಿದೆ.
ಮೇ 4ರಂದು ದೆಹಲಿಯ ಹತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿ ನ್ಯಾಷನಲ್ ಚಾಂಪಿಯನ್ ಆಗಿದ್ದ ಸಾಗರ್ ರಾಣಾ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸುಶೀಲ್ ಕುಮಾರ್ ಪರಾರಿಯಾಗಿದ್ದರು.
ಪರಾರಿಯಾಗಿದ್ದ ಸುಶೀಲ್ ಅವರ ಸುಳಿವು ಕೊಟ್ಟವರಿಗೆ 01 ಲಕ್ಷ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು. ಇದೀಗ ಸುಶೀಲ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಒಲಿಂಪಿಕ್ ಪದಕವನ್ನು ಗೆದಿದ್ದ ಸುಶೀಲ್ ಕುಮಾರ್ ಉತ್ತರ ರೈಲ್ವೆಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಹುದ್ದೆಯಲ್ಲಿದ್ದರು. ಅವರನ್ನು ದೆಹಲಿ ಸರ್ಕಾರವು ಶಾಲಾ ಮಟ್ಟದಲ್ಲಿ ಕ್ರೀಡೆಗಳ ಅಭಿವೃದ್ಧಿಗಾಗಿ ಹತ್ರಾಸಲ್ ಕ್ರೀಡಾಂಗಣದಲ್ಲಿ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್ಡಿ) ಯಾಗಿ ನೇಮಕ ಮಾಡಿತ್ತು.
ಕೊಲೆ ಪ್ರಕರಣದ ಬಗ್ಗೆ ದೆಹಲಿ ಸರ್ಕಾರದಿಂದ ವರದಿ ಪಡೆದುಕೊಂಡಿರುವ ರೈಲ್ವೆ ಮಂಡಳಿ ಸುಶೀಲ್ ಅವರನ್ನು ಅಮಾನತು ಮಾಡಲು ನಿರ್ಧರಿಸಿದೆ ಎಂದು ಉತ್ತರ ರೈಲ್ವೆ ಸಿಪಿಆರ್ಒ ದೀಪಕ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಒಂದೆರಡು ದಿನಗಳಲ್ಲಿ ಕುಸ್ತಿಪಟು ಅಮಾನತುಗೊಳಿಸುವ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುಸ್ತಿ ಚಾಂಪಿಯನ್ ಕೊಲೆ ಪ್ರಕರಣ: ಆರೋಪಿ ಸುಳಿವು ಕೊಟ್ಟವರಿಗೆ 01 ಲಕ್ಷ ಬಹುಮಾನ!