ಮಹಿಳಾ ಪೇದೆ ಮೇಲೆ ಅತ್ಯಾಚಾರ; ಪೊಲೀಸ್ ಅಧಿಕಾರಿ ಬಂಧನ!
ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣಾ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ಮಹಿಳಾ ಕಾನ್ಸ್ಟೆಬಲ್ ತಾನು ಕರ್ತವ್ಯದಲ್ಲಿದ್ದಾಗ ಪ್ರಧಾನ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಮತ್ತು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಅಧಿಕಾರಿ ಮೇಲೆ ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳಾ ಕಾನ್ಸ್ಟೆಬಲ್ನನ್ನು ಮೊದಲಿಗೆ ಖಂಟಪದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಆದರೆ, ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಆಕೆಗೆ ಗೋಪಾಲಪುರ ಪೊಲೀಸ್ ಔಟ್ಪೋಸ್ಟ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆರೋಪಿ ಪೋಲೀಸ್ ಅಧಿಕಾರಿಯಾದ ಬನ್ಸಿದಾರ್ ಪ್ರದಾನ್ ಈ ಹೊರಠಾಣೆಯ ಉಸ್ತುವಾರಿ ವಹಿಸಿದ್ದರು.
ಆರಂಭದಲ್ಲಿ ತನ್ನ ದೂರನ್ನು ದಾಖಲಿಸಿಕೊಳ್ಳಲು ಇಲಾಖೆ ಹಿಂದೇಟು ಹಾಕಿದ ಬಳಿಕ ಸಂತ್ರಸ್ತೆ ರೈಲು ಹಳಿಯ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಆಕೆಯನ್ನು ರಕ್ಷಿಸಿದ ರೈಲ್ವೇ ಪೊಲೀಸರು ರಾಜ್ಯ ಪೊಲೀಸ್ನ ಪೂರ್ವ ವಿಭಾಗದ ಐಜಿಗೆ ಮಾಹಿತಿ ನೀಡಿದ್ದಾರೆ.
ಐಜಿ ದೀಪ್ತೇಶ್ ಪಟ್ನಾಯಿಕ್ ಅವರು ಬನ್ಸಿದಾರ್ ಪ್ರದಾನ್ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ ಬಳಿಕ ಆರೋಪಿ ಅಧಿಕಾರಿಯನ್ನು ಬಾಲಾಸೋರ್ ಠಾಣೆಗೆ ಕರೆಯಿಸಿ ಬಂಧಿಸಲಾಗಿದೆ.
ಆಪಾದಿತನ ವಿರುದ್ಧ ಅತ್ಯಾಚಾರ, ಹಲ್ಲೆ ಹಾಗೂ ದುರುದ್ದೇಶಪೂರಿತ ವರ್ತನೆಗಳ ಆರೋಪದ ಮೇಲೆ ಪ್ರಕರಣ ದಾಖಲಿಸಿ ಆತನ ವೈದ್ಯಕೀಯ ಪರೀಕ್ಷೆ ಮಾಡಿ ಸ್ಥಳೀಯ ನ್ಯಾಯಾಲದಲ್ಲಿ ಹಾಜರುಪಡಿಸಲಾಗಿದೆ ಎಂದು ಬಾಲಾಸೋರ್ ಟೌನ್ ಪೊಲೀಸ್ ಠಾಣೆಯ ಇನ್-ಚಾರ್ಜ್ ಸುಭ್ರಾಂಶು ಶೇಖರ್ ನಾಯಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ತಾಯಿ ಸಾವು; ಸುದ್ದಿ ಕೇಳಿ ಮಗ ಆತ್ಮಹತ್ಯೆ!