ಕೊರೊನಾ ಆರ್ಥಿಕ ಬಿಕ್ಕಟ್ಟು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸಲಾಗದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಎಚ್. ಮೂಕನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಮಹದೇವಪ್ಪ (47), ಮಂಗಳಮ್ಮ (40), ಜ್ಯೋತಿ (14) ಹಾಗೂ ಶ್ರುತಿ (12) ಎಂದು ಗುರುತಿಸಲಾಗಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದ ಇವರು ಇತ್ತೀಚೆಗೆ ಕೋವಿಡ್ ನಿಂದ ಚೇತರಿಸಿಕೊಂಡು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
‘ಕೊರೊನಾ ಸೋಂಕು ತಗುಲಿದ್ದ ಮಹದೇವಪ್ಪ ಗುಣಮುಖರಾದರೂ ಅವರೊಂದಿಗೆ ಗ್ರಾಮಸ್ಥರು ಮಾತನಾಡಲು ಹಿಂಜರಿಯುತ್ತಿದ್ದರು. ಹೀಗಾಗಿ ಡೈರಿಗೆ ಹಾಲು ಹಾಕುವ ಕೆಲಸವನ್ನು ಬಿಟ್ಟುಬಿಟ್ಟಿದ್ದರೂ. ಇದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದರು. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ನಿನ್ನೆ ರಾತ್ರಿ 9ರ ಸುಮಾರಿಗೆ ನನ್ನ ಜೊತೆ ಮಾತನಾಡಿದಾಗಲೂ ಅವರು ಯಾವ ವಿಚಾರ ಹೇಳಿಕೊಂಡಿಲ್ಲ. ಅವರ ಚಿಕಿತ್ಸೆಗೆ ನಾನೂ ಕೂಡ ಸಹಾಯ ಮಾಡಿದ್ದೆ’ ಎಂದು ಗ್ರಾಮಸ್ಥರಾದ ನಾಗರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಇದರಿಂದ ಸರ್ಕಾರ ಈಗಲಾದರೂ ರೈತ ಕೂಲಿಕಾರರ ಸಂಕಷ್ಟಕ್ಕೆ ಸ್ಫಂದಿಸಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.