ರೈತರು v/s ಹರ್ಯಾಣ ಸರ್ಕಾರ; ರೈತರನ್ನು ಒಕ್ಕಲೆಬ್ಬಿಸಲು ಪ್ರಭುತ್ವದ ಹುನ್ನಾರ!
ಕಳೆದ ನವೆಂಬರ್ ತಿಂಗಳಿನಿಂದ ರೈತ ಹೋರಾಟ ನಡೆಯುತ್ತಿದೆ. ಪಂಜಾಬ್ನ ರೈತರು ಆರಂಭಿಸಿದ ಹೋರಾಟ ಹರಿಯಾಣಕ್ಕೂ ವ್ಯಾಪಿಸಿದೆ. ಎರಡೂ ರಾಜ್ಯಗಳ ರೈತರು ದೆಹಲಿ ಗಡಿಯಲ್ಲಿ ಆರು ತಿಂಗಳುಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಆದರೆ, ರೈತರ ಮೇಲೆ ಪೊಲೀಸರು ಮತ್ತು ಪ್ರಭುತ್ವದ ದೌರ್ಜನ್ಯ ಆಗಾಗ್ಗೆ ನಡೆಯುತ್ತಿದ್ದು, ಇದೀಗ ಹರ್ಯಾಣದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ದೌರ್ಜನ್ಯ ತೀವ್ರಗೊಂಡಿದೆ.
ಹರ್ಯಾಣದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದು, ಒಕ್ಕೂಟ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಬದ್ಧವಾಗಿದೆ ಎಂಬುದು ವೇದ್ಯ. ಆದರೆ ಆರು ತಿಂಗಳಿಂದ ಕಾಯ್ದೆ ವಿರುದ್ಧ ಆರಂಭವಾದ ಹೋರಾಟದಲ್ಲಿ ಮುಖ್ಯ ಪಾತ್ರವಹಿಸುತ್ತಿರುವುದು ಪಂಜಾಬ್ ರೈತರಷ್ಟೇ, ಹರ್ಯಾಣದ ರೈತರು ಎಂಬುದೂ ಸ್ಪಷ್ಟ. ಈ ಪ್ರತಿರೋಧದಿಂದ ಮುಜುಗರಕ್ಕೆ ಒಲಗಾಗಿಯೋ, ಅಥವಾ ರಾಷ್ಟ್ರ ನಾಯಕರಿಂದ ಬಂದ ಒತ್ತಡದಿಂದಲೋ, ಹರ್ಯಾಣ ಸರ್ಕಾರ ತನ್ನ ರಾಜ್ಯದ ರೈತರ ಎಲ್ಲ ರೀತಿಯ ಬಲ ಪ್ರಯೋಗ ಮಾಡುವುದಕ್ಕೂ ಹಿಂಜರಿದಿಲ್ಲ.
ಇದನ್ನೂ ಓದಿ:ರಸಗೊಬ್ಬರ ಬೆಲೆ ಹೆಚ್ಚಳ: ಶೇ.70 ರಷ್ಟು ರೈತರ ಭೂಮಿ ಕಸಿದುಕೊಳ್ಳುವ ಸರ್ಕಾರದ ಹುನ್ನಾರ!
ಕಳೆದ ಒಂದು ತಿಂಗಳಿನಿಂದ ಹರ್ಯಾಣ ಸರ್ಕಾರ ಮತ್ತು ರೈತರ ನಡುವೆ ಸಂಘರ್ಷ ನಡೆಯುತ್ತಿದೆ. ಮೇ 7ರಂದು ಜಿಂಡ್ನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಿಂದಾಗಿ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಲಾ ತಮ್ಮ ಕಾರ್ಯಕ್ರಮ ರದ್ದು ಮಾಡಿದರು. ಇದಾಗಿ ಹತ್ತು ದಿನಕ್ಕೆ ಹಿಸ್ಸಾರ್ನಲ್ಲಿ ಕೋವಿಡ್ ಆಸ್ಪತ್ರೆ ಉದ್ಘಾಟನೆಗೆಂದು ಬಂದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ರೈತರು ಮತ್ತು ಪೊಲೀಸರು ಪರಸ್ಪರ ಕಲ್ಲೆಸೆದಿದ್ದರು. ಪೊಲೀಸರು ಮತ್ತು ರೈತರೂ ತೀವ್ರವಾಗಿ ಗಾಯಗೊಂಡಿದ್ದರು.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು 200 ರೈತರನ್ನು ಬಂಧಿಸಿದ್ದರು. ಹರ್ಯಾಣ ಸರ್ಕಾರದ ಈ ನಡೆಯನ್ನು ಖಂಡಿಸಿದ ರೈತರು ರಸ್ತೆ ತಡೆ ನಡೆಸಿ ಬಂಧಿತ ರೈತರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ಪ್ರಕರಣಗಳು ಹೆಚ್ಚುತ್ತಿರುವುದು ರೈತರನ್ನು ಕೆಣಕುವ ಉದ್ದೇಶದಿಂದಲೇ ನಡೆಯುತ್ತಿರುವಂತಿದೆ ಎಂಬುದು ಪ್ರತಿಭಟನಾ ನಿರತರ ರೈತರ ಆರೋಪ. ಭಾರತೀಯ ಕಿಸಾನ್ ಯೂನಿಯನ್ನ ನಾಯಕ ಗುರ್ನಾಮ್ ಸಿಂಘ ಚಡೂಣಿ, ದಿಢೀರನೆ ಕಟ್ಟರ್ ಸರ್ಕಾರದ ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದು ನಿರ್ದಿಷ್ಟ ಉದ್ದೇಶ ಸಾಧನೆಗೆ ಮಾಡಿರುವ ಒಂದು ವಿನ್ಯಾಸ ಎನ್ನುತ್ತಾರೆ. ಚಡೂಣಿ ಅವರ ಪ್ರಕಾರ, ಮೊದಮೊದಲು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ್ದ ನಾಯಕರು ತಂತ್ರ ಬದಲಿಸಿದ್ದಾರೆ. ಸಾರ್ವಜನಿಕವಾಗಿ ಪಾಲ್ಗೊಳ್ಳುವ ಮೂಲಕ ದೊಂಬಿ-ಗಲಭೆ ಸೃಷ್ಟಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ರೈತರ ಹೋರಾಟಕ್ಕೆ ಮಸಿ ಬಳಿಯಬಹುದು ಎಂಬುದು ಅವರ ಉದ್ದೇಶ ಎಂದು’ ಗುರ್ನಾಮ್ ಹೇಳಿಕೆ ನೀಡಿದ್ದರು. ದೆಹಲಿ ಗಡಿಗಳಿಂದ ರೈತರನ್ನು ಹಿಮ್ಮೆಟ್ಟಿಸಲಾಗದ ಒಕ್ಕೂಟ ಸರ್ಕಾರ ಈಗ ಈ ತಂತ್ರಗಳನ್ನು ಹೂಡುತ್ತಿದೆ ಎಂಬ ಗಂಭೀರ ಆರೋಪವು ರೈತ ಮುಖಂಡರುಗಳಿಂದ ಕೇಳಿ ಬಂದಿತ್ತು.
ರೈತರು ಕೃಷಿ ಚಟುವಟಿಕೆಗಳನ್ನು ಮುಗಿಸಿ ಪುನಃ ಟಿಕ್ರಿ, ಸಿಂಘು, ಗಾಝಿಪುರ್ ಗಡಿಗಳತ್ತ ಆಗಮಿಸುತ್ತಿದ್ದಾರೆ. ದೆಹಲಿ ಗಡಿಗಳಲ್ಲಿನ ರೈತ ಹೋರಾಟ ಮತ್ತೆ ಬಲಪಡೆದುಕೊಳ್ಳದಿರುವುದನ್ನು ಸಹಿಸದೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರು ಈ ಪ್ರದೇಶಗಳಿಂದ ಬೇರೆಡೆಗೆ ಗಮನ ಹರಿಸುವಂತೆ ಮಾಡುವ ಪ್ರಯತ್ನ ಮಾಡುತ್ತಿವೆ ಎನ್ನುತ್ತಾರೆ ಇನ್ನೊಬ್ಬ ರೈತ ಮುಖಂಡ ಭಾರತೀಯ ಕಿಸಾನ್ಯೂನಿಯನ್ ನಾಯಕ, ರಾಕೇಶ್ ಟಿಕಾಯತ್. ‘ದೆಹಲಿಗಡಿಗಳಿಂದ ಜಿಂಡ್, ಹಿಸ್ಸಾರ್, ಫತೇಹ್ಬಾದ್ ಮತ್ತು ಇತರೆ ಜಿಲ್ಲೆಗಳಿಗೆ ಪ್ರತಿಭಟನೆ ಸ್ಥಳಾಂತರಗೊಳ್ಳಲಿ ಎಂದೇ ಹರ್ಯಾಣದ ಸರ್ಕಾರದ ನಾಯಕರು ಪದೇ ಪದೇ ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ” ಎಂದು ವಿಶ್ಲೇಷಿಸಿದ್ದಾರೆ.
ಹರ್ಯಾಣದಲ್ಲಿ ಈಗ ಪೊಲೀಸರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದು ಒಂದೆಡೆ, ಸರ್ಕಾರ ಹಲವು ರೀತಿಯಲ್ಲಿ ರೈತರನ್ನು ಗುರಿಯಾಗಿಸಿಕೊಂಡು ದುರಾಡಳಿತ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಭೂಪೆಂದರ್ ಸಿಂಗ್ ಹೂಡ ದೂರಿರುವುದು ರೈತ ಹೋರಾಟಕ್ಕೆ ಇನ್ನೊಂದು ಆಯಾಮ ನೀಡಿದೆ. ಇಂತಹ ಕಷ್ಟ ಕಾಲದಲ್ಲಿ ಖಟ್ಟಾರ್ ಸರ್ಕಾರ, ರೈತರ ಮೇಲೆ ದನಗಳ ಜಾತ್ರೆಯ ಶುಲ್ಕ ಹೆಚ್ಚಿಸಿದೆ, ದನಗಳ ಖರೀದಿ/ಮಾರಾಟದ ಮೇಲೆ 4% ಶುಲ್ಕ ಹೆಚ್ಚಿಸಿದೆ. ಜೊತೆಗೆ ಕೊರೊನಾಕ್ಕೆ ಸಕಾಲಿಕ ಚಿಕಿತ್ಸೆ ರೈತರಿಗೆ ಲಭ್ಯವಾಗುತ್ತಿಲ್ಲ ಎಂದು ಹೂಡ ದೂರಿದ್ದಾರೆ. ಎಲ್ಲ ಸಂಭವನೀಯ ಮಾರ್ಗಗಳ ಮೇಲೆ ರೈತರ ಮೇಲೆ ಒತ್ತಡ ಉಂಟು ಮಾಡುವ ಹಾಗೂ ದೆಹಲಿ ಗಡಿಗಳಿಂದ ರೈತರ ಹೋರಾಟವನ್ನು ಬೇರೆಡೆ ತಿರುಗಿಸುವ ಪ್ರಯತ್ನವನ್ನು ಖಟ್ಟರ್ ಸರ್ಕಾರ ನಡೆಸುತ್ತಿದೆ ಎಂದು ರೈತರು ಗಂಭೀರವಾಗಿ ಆರೋಪಿಸಿದ್ದಾರೆ. ಖಟ್ಟರ್ ಸರ್ಕಾರದ ಈ ನಡೆ ಖಂಡಿಸಿ ರೈತರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ನಮ್ಮ ಗಮನ ದೆಹಲಿಗಡಿಗಳತ್ತಲೇ ಹೆಚ್ಚು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ದೀರ್ಘ ಕಾಲದವರೆಗೆ ಮುಂದುವರೆಯುತ್ತದೆ: ರೈತ ಮುಂಖಡ ರಾಕೇಶ್ ಟಿಕಾಯತ್