ಅಂಬೇಡ್ಕರ್ ಪೋಸ್ಟರ್‌ ಹರಿದು, ಭೀಮ್‌ ಅರ್ಮಿ ಸದಸ್ಯ, ದಲಿತ ಯುವಕನ ಹತ್ಯೆ!

ಅಂಬೇಡ್ಕರ್‌ ಅವರ ಪೋಸ್ಟರ್‌ಗಳನ್ನು ಹರಿದು ಹಾಕಿದ ಜನರ ತಂಡವೊಂದು ಭೀಮ್‌ ಆರ್ಮಿ ಸದಸ್ಯ, ದಲಿತ ಯುವಕ ವಿನೋದ್‌ ಬಮ್ನಿಯಾ ಎಂಬುವವರನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಹನುಮಾನ್‍ಘರ್ ಜಿಲ್ಲೆಯ ಕಿಕ್ರಲಿಯಾ ಗ್ರಾಮದಲ್ಲಿ ನಡೆದಿದೆ.

ಇತರ ಹಿಂದುಳಿದ ವರ್ಗಗಳಿಗೆ ಜನರ ಗುಂಪೊಂದು ವಿನೋದ್ ಮನೆಯ ಹೊರಗೆ ಅಂಟಿಸಲಾಗಿದ್ದ ಅಂಬೇಡ್ಕರ್ ಪೋಸ್ಟರುಗಳನ್ನು ಜೂನ್ 5ರಂದು ಹರಿದು ಹಾಕಿ, 21 ವರ್ಷದ ವಿನೋದ್ ಬಮ್ನಿಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ನಂತರ ಯುವಕ ಮೃತಪಟ್ಟಿದ್ದಾನೆ.

ವಿನೋದ್ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳಾದ ಅನಿಲ್ ಸಿಹಾಗ್ ಹಾಗೂ ರಾಕೇಶ್ ಸಿಹಾಗ್ ಹಾಗೂ ಇತರರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ನಿನ್ನ ಅಂಬೇಡ್ಕರ್ ಸಿದ್ಧಾಂತ ನೆನಪಾಗುವಂತೆ ಇಂದು ನಿನಗೆ ಮಾಡುತ್ತೇವೆ” ಎಂದು ಯುವಕನನ್ನು ನಿಂದಿಸಿದ ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಶಾಲೆಯೊಂದರಲ್ಲಿ ಹನುಮಾನ್ ಚಾಲೀಸಾದ ಪ್ರತಿ ವಿತರಣೆ ಮಾಡಿದ್ದನ್ನು ಯುವಕ ಆಕ್ಷೇಪಿಸಿದ್ದನು. ಆ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆದಿದೆ. ಅಲ್ಲದೆ, ಇದಕ್ಕೂ ಮುಂಚೆ ಹಲವು ಬಾರಿ ಬೆದರಿಕೆ ಕರೆಗಳು ಬಂದಿವೆ ಎಂದು ವಿನೋದ್ ಎಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಎಫ್‍ಐಆರ್ ಕೂಡ ದಾಖಲಾಗಿತ್ತು.

ಪೊಲೀಸರು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಭೀಮ್ ಆರ್ಮಿ ಪ್ರತಿಭಟನೆ ನಡೆಸಿದೆ.

ಏಪ್ರಿಲ್‌ 14 ರಂದು ಅಂಬೇಡ್ಕರ್ ಜಯಂತಿಯ ದಿನ ಯುವಕನ ಮನೆಯ ಮುಂದೆ ಅಂಬೇಡ್ಕರ್‌ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಆ ಪೋಸ್ಟರ್‌ಅನ್ನು ಜನರ ಗುಂಪು ಹರಿದು ಹಾಕಿತ್ತು. ಈ ವಿಚಾರವಾಗಿ ಪಂಚಾಯತಿ ನಡೆಸಿ ಸಮಸ್ಯೆ ಇತ್ಯರ್ಥ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಖ್ಯಾತೆ ತೆಗೆದ ಜನರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜಿತಿನ್ ಪ್ರಸಾದರನ್ನು ಕಸಿದುಕೊಂಡ ಬಿಜೆಪಿ; ಕಾಂಗ್ರೆಸ್‌ ಮುಕ್ತವಾಗುತ್ತಾ ಉತ್ತರ ಪ್ರದೇಶ?!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights