ಬಟ್ಟೆ ತೊಳೆಯಲು ನದಿಗೆ ತೆರಳಿದ ನಾಲ್ವರು ಸಹೋದರರ ದಾರುಣ ಸಾವು!
ಬಟ್ಟೆ ಹಾಗೂ ಹಾಸಿಗೆಗಳನ್ನು ತೊಳೆಯಲು ಕೃಷ್ಣಾ ನದಿಗೆ ತೆರಳಿದ್ದ ನಾಲ್ವರು ಸಹೋದರರು ನದಿಗೆ ಜಾರಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಅಥಣಿ ತಾಲೂಕಿನ ಹಲ್ಯಾಳದಲ್ಲಿ ನಡೆದಿದೆ.
ಹಲ್ಯಾಳ ಗ್ರಾಮದ ಪರಸಪ್ಪ ಗೋಪಾಲ ಬನಸೂಡೆ (42), ಸದಾಶಿವ ಗೋಪಾಲ ಬನಸೋಡೆ (36), ಧರೆಪ್ಪ ಗೋಪಾಲ ಬನಸೋಡೆ (25) ಹಾಗೂ ಶಂಕರ ಗೋಪಾಲ ಬನಸೋಡೆ(23) ಸಾವನ್ನಪ್ಪಿರುವ ದುರ್ದೈವಿಗಳು ಎಂದು ಹೇಳಲಾಗಿದೆ.
ಲಾಲಸಾಬ್ ಉರುಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಸಹೋದರರು ಬಟ್ಟೆ ಮತ್ತು ಹಾಸಿಗೆ ತೊಳೆಯಲು ಸೋಮವಾರ ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ಧರೆಪ್ಪ ಗೋಪಾಲ ಎಂಬಾತ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಉಳಿದ ಮೂವರೂ ನದಿಗೆ ಹಾರಿದ್ದಾರೆ. ಆದರೆ, ಅವರು ಮತ್ತೆ ದಡಕ್ಕೆ ಏರಲು ಸಾಧ್ಯವಾಗದೇ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಇದನ್ನೂ ಓದಿ: ಸಿಎಂ ಬದಲಾವಣೆಯ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಪಿಗಾಗಿ ಕಾಯುತ್ತಿದ್ದೇನೆ: ಸಚಿವ ಯೋಗೇಶ್ವರ್
ಅವರ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ತೀವ್ರವಾಗಿ ಶೋಧ ನಡೆಸಿದ್ದಾರೆ. ಮಂಗಳವಾರ ಪರಶುರಾಮ ಗೋಪಾಲ ಬನಸೋಡೆ ಎಂಬಾತನ ಮೃತದೇಹ ಪತ್ತೆಯಾಗಿದೆ. ನಂತರ, ಬುಧವಾರ ಮೂವರ ಶವಗಳನ್ನು ಎನ್ಡಿಆರ್ಎಫ್ ಹಾಗೂ ಸ್ಥಳೀಯರು ಹೊರ ತೆಗೆದಿದ್ದಾರೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಜಿಲ್ಲಾ-ತಾಲ್ಲೂಕು ಪಂಚಾಯತ್ ಚುನಾವಣೆ; ಬಿಜೆಪಿ ಭಾರೀ ಸಿದ್ದತೆ!