ಬಿಎಸ್ವೈಗೆ ಬಿಗ್ ರಿಲೀಫ್; ಯಡಿಯೂರಪ್ಪ ಸೇರಿ 8 ಮಂದಿ ವಿರುದ್ದದ ಭ್ರಷ್ಟಾಚಾರ ಪ್ರಕರಣ ವಜಾ!
ಸಿಎಂ ಯಡಿಯೂರಪ್ಪ ಮತ್ತು ಎಂಟು ಜನರ ವಿರುದ್ದ ದಾಖಲಿಸಲಾಗಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿರುದ್ದದ ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಲಯವು ರದ್ದುಗೊಳಿಸಿದೆ. ಇದು ಸಿಎಂ ಮತ್ತವರ ಕುಟುಂಬಕ್ಕೆ ನಿರಾಳವನ್ನು ತಂದಿದೆ ಎಂದು ಹೇಳಲಾಗಿದೆ.
ಸಿಎಂ ಮತ್ತು ಇತರರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಆ ಬಗ್ಗೆ ತನಿಖೆ ನಡೆಸಲು ಆದೇಶ ಕೋರಿ ಆಂಟಿ-ಗ್ರಾಫ್ಟ್ ಮತ್ತು ಪರಿಸರ ವೇದಿಕೆಯ ಅಧ್ಯಕ್ಷ ಟಿ.ಜೆ. ಅಬ್ರಹಾಂ ಅವರು ಅರ್ಜಿ ಸಲ್ಲಿಸಿದ್ದರು.
ಸಿಎಂ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಡಿ, ಅಳಿಯ ವಿರೂಪಾಕ್ಷಪ್ಪ ಯಮಕನ್ಮಾರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಮತ್ತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರದ ದೂರು ದಾಖಲಿಸಲಾಗಿತ್ತು.
ಕೋಟ್ಯಂತರ ರೂಪಾಯಿಗಳು ಅಕ್ರಮ ನಗದು ವಿನಿಮಯ ಮಾಡಿಕೊಂಡಿದ್ದಾರೆ. ಇದರಲ್ಲಿ ಯಡಿಯೂರಪ್ಪ ಅವರ ಕುಟುಂಬವು ಭಾಗಿಯಾಗಿದೆ. ಅಲ್ಲದೆ, ಈ ಅಕ್ರಮ ಆದಾಯವನ್ನು ಕೆಲವು ಶೆಲ್ ಕಂಪನಿಗಳ ಮೂಲಕ ಕೋಲ್ಕತ್ತಾದ ಯಡಿಯೂರಪ್ಪ ಅವರ ಕುಟುಂಬ ಸದಸ್ಯರ ಒಡೆತನದಲ್ಲಿರುವ ಸಂಸ್ಥೆಗಳಿಗೆ ರವಾನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ವಾದಗಳನ್ನು ಆಲಿಸಿದ ನಂತರ ಆದೇಶಗಳನ್ನು ಕಾಯ್ದಿರಿಸಿದ್ದ ನ್ಯಾಯಾಲಯವು ಗುರುವಾರ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಆಂಧ್ರ ರಾಜ್ಯಪಾಲರಾಗಿ ಯಡಿಯೂರಪ್ಪ? ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ?