‘ಸುಳ್ಳು ಹೇಳುವುದರಲ್ಲಿ ಮೋದಿಗೆ ಆಸ್ಕರ್ ಅವಾರ್ಡ್ ಕೊಡಿ’ -ಸಲೀಂ ಅಹಮ್ಮದ್ ವ್ಯಂಗ್ಯ!
ಪ್ರಪಂಚದಲ್ಲಿ ಸುಳ್ಳು ಹೇಳೋದರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದರೆ ಮೊದಲು ಪ್ರಧಾನಿ ಮೋದಿಯವರಿಗೇ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಾಗ್ದಾಳಿ ಮಾಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಪ್ಪು ಹಣ ತರ್ತಿವಿ ಅಂದ್ರು ತರಲಿಲ್ಲ. ಪ್ರಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕ್ತೀನಿ ಅಂದ್ರು ಅದೂ ಹಾಕಲಿಲ್ಲ. ಎಷ್ಟೋ ಜನ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರ ಶಾಪ ಮೋದಿಗೆ ತಟ್ಟದೇ ಇರುವುದಿಲ್ಲ ಎಂದಿದ್ದಾರೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 36 ಜನ ಅಸುನೀಗಿದ್ದಾರೆ ಅದು ನಿಜವಾಗಲೂ ಕೊಲೆ ಎಂದು ಆರೋಪಿಸಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿನಿಂದ ನಾವು ಕೋಮುವಾದಿ ಪಕ್ಷದ ವಿರುದ್ಧ ಹೋರಾಡುತ್ತೇವೆ. ಕೆಲವರು ತಮ್ಮ ವಿಚಾರಗಳನ್ನು ಹೇಳಿಕೊಳ್ಳುತ್ತಾರೆ. ಇದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲದೆ ಪಕ್ಷದ ಹೈಕಮಾಂಡ್ ನಮ್ಮೊಂದಿಗಿದೆ. ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಎಲ್ಲರೂ ಒಗ್ಗೂಡಿ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇವೆ.ಮಾತ್ರವಲ್ಲದೇ ಪಕ್ಷ ಬಿಟ್ಟು ಹೋದವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದರು.