UAPA ಮತ್ತು NIA ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪಾಪದ ಪಾಲೆಷ್ಟು?

UAPA ಕಾಯ್ದೆಯಡಿ ಬಂಧಿತರಾಗಿದ್ದ ಸಂತ ಪಾದ್ರಿ ಸ್ಟಾನ್ ಸ್ವಾಮಿಯವರನ್ನು ಮಾತ್ರವಲ್ಲದೆ ಮೋದಿ ಸರ್ಕಾರದ ನೀತಿಗಳಿಗೆ ಬಲಿಯಾದ ಜನರ ಎಲ್ಲಾ ಪ್ರತಿರೋಧಗಳನ್ನೂ, ಈ ದೇಶದ ಪ್ರಜಾತಂತ್ರವನ್ನು ಮೋದಿ ಸರ್ಕಾರ ಕಳೆದ ಏಳು ವರ್ಷಗಳಿಂದ ಹಾಡುಹಗಲಲ್ಲೇ ಸಾಂಸ್ಥಿಕವಾಗಿ ಕಗ್ಗೊಲೆ ನಡೆಸುತ್ತಿದೆ. ಈ ಎಲ್ಲಾ ಕಗ್ಗೊಲೆಗಳನ್ನು ಕಾನೂನು ಪ್ರಕ್ರಿಯೆಗಳಿಗನುಸಾರವಾಗಿಯೇ ನಡೆಸಲಾಗುತ್ತಿದೆಯೆಂದು ಇತ್ತೀಚೆಗೆ ವಿದೇಶಾಂಗ ಸಚಿವಾಲಯ ವಿಶ್ವಸಂಸ್ಥೆಯ ಮುಂದೆ ಸಮರ್ಥನೆಯನ್ನು ಕೂಡಾ ಮಾಡಿಕೊಂಡಿದೆ.

ಮೋದಿ ಸರ್ಕಾರ ಕಾನೂನು ಬದ್ಧವಾಗಿ ನ್ಯಾಯದ ಹತ್ಯೆ ಮಾಡುತ್ತಿರುವುದು ನಿಜ..

ಆದರೆ ಅಂಥಾ ಅತ್ಯಂತ ಪ್ರಜಾತಂತ್ರವಿರೋಧಿ ಕಾನೂನನ್ನು ಮಾಡಿ ಮೋದಿ ಕೈಗೆ ಕೊಟ್ಟಿದ್ದು ಮಾತ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಂಬುದು ಈ ದೇಶದ ಪ್ರಜಾತಂತ್ರ ಎದುರಿಸುತ್ತಿರುವ ಸಂಕಿರ್ಣ ಸವಾಲಿಗೆ ದ್ಯೋತಕದಂತಿದೆ.

ಹೀಗಾಗಿ ಸ್ಟಾನ್ ಸ್ವಾಮಿಯವರ ಸಾಂಸ್ಥಿಕ ಹತ್ಯೆಯ ನಂತರ ದೇಶಾದ್ಯಂತ UAPA ಹಾಗೂ NIA (National Investigation Agency) ಯ ವಿರುದ್ಧ ಭುಗಿಲೆದ್ದಿರುವ ಆಕ್ರೋಶವು ತಾರ್ಕಿಕವಾದ ಅಂತ್ಯ ಹಾಗೂ ನೈಜ ಪ್ರಜಾತಾಂತ್ರಿಕ ಪರಿಹಾರಗಳನ್ನು ಪಡೆದುಕೊಳ್ಳಬೇಕೆಂದರೆ UAPA ಪಾಪದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ.

ಅದೇರೀತಿ, ಕಾಂಗ್ರೆಸ್ ನೇತೃತ್ವದ UPA ಸರ್ಕಾರ ಈ ಕಾನೂನನ್ನು ಜಾರಿಗೆ ತರುವಾಗ ಸಂಸತ್ತಿನಲ್ಲಿ ಸಾಂಕೇತಿಕವಾದರೂ ಪ್ರತಿರೋಧ ವ್ಯಕ್ತಪಡಿಸಿದ ಎಡಪಕ್ಷಗಳನ್ನೂ ಹಾಗೂ ಒಂದೆರಡು ಪ್ರಾದೇಶಿಕ ಪಕ್ಷಗಳನ್ನು ಬಿಟ್ಟರೆ ಭಾರತದ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಇಂಥಾ ಪ್ರಜಾತಂತ್ರ ವಿರೋಧಿ ಕಾನೂನನ್ನು ಸಮ್ಮತಿಸಿರುವುದು ಈ ದೇಶ ಎಂಥಾ ಶಿಥಿಲ ಪ್ರಜಾತಂತ್ರದ ಹಂದರದ ಮೇಲೆ ನಿಂತಿದೆ ಎಂಬುದನ್ನೂ ಮನವರಿಕೆ ಮಾಡಿಸಬೇಕಿದೆ.

ಇದನ್ನೂ ಓದಿ: ಡಿಜೆಹಳ್ಳಿ ಗಲಬೆಯ ಅಸಲಿಯತ್ತೇನು? ಪೊಲೀಸರು-ಸರ್ಕಾರ ಮಾಡಿದ್ದೇನು? ಸತ್ಯಶೋಧನಾ ವರದಿ!

ಹೀಗಾಗಿ ಯುಎಪಿಎ ರದ್ದು ಮಾಡುವ ಹೋರಾಟಗಳು ನಿಜವಾದ ಪ್ರಜಾತಾಂತ್ರಿಕ ಕಸುವು ತುಂಬಿಕೊಳ್ಳಬೇಕಾದರೆ ಮತ್ತು ಕಾಂಗ್ರೆಸ್ ಆದಿಯಾಗಿ ಇತರ ವಿರೋಧ ಪಕ್ಷಗಳು ತೋರುವ ಬೆಂಬಲಗಳು ನಿಜವಾದ ಅರ್ಥ ಪಡೆದುಕೊಳ್ಳಬೇಕಾದರೆ UAPA ಮತ್ತು NIA ಜಾರಿಯಾದ ಪಾಪದಲ್ಲಿ ತಮ್ಮ ಪಾತ್ರದ ಬಗ್ಗೆ ಆಳವಾದ ರಾಜಕೀಯ ಪುನರ್ ವಿಮರ್ಶೆ ಮಾಡಿಕೊಳ್ಳಲೂ ಹಾಗೂ ನೈಜ ಪ್ರಜಾತಾಂತ್ರಿಕ ಆಧಾರದಲ್ಲಿ ತಮ್ಮನ್ನು ಪುನರ್ ನಿರ್ವಚನ ಮಾಡಿಕೊಳ್ಳಲೂ ಒತ್ತಾಯಿಸಬೇಕಿದೆ.

ತಾತ್ಕಾಲಿಕ POTA ವನ್ನು ಶಾಶ್ವತ UAPA ಗೊಳಿಸಿದ UPA ಸರ್ಕಾರ:

ಒಂದು ಭಯೋತ್ಪಾದಕ ನಿಗ್ರಹ ಕಾಯಿದೆಯಾಗಿ UAPA ಜಾರಿಯಾಗುವ ಮುನ್ನ 1985 ರಲ್ಲಿ ಕಾಂಗ್ರೆಸ್ ಸರ್ಕಾರ TADA (Terrorist and Disruptive Activities Prevention Act) ವನ್ನು ಜಾರಿಗೊಳಿಸಿತ್ತು. ಇದು ಭಯೋತ್ಪಾದನೆಯ ಹೆಸರಲ್ಲಿ ಪೊಲೀಸ್ ಸರ್ವಾಧಿಕಾರಗಳಿಗೆ ಹಾಗೂ ಹಿಂಸಾಚಾರಗಳಿಗೆ ಕಾನೂನು ಬದ್ಧ ಪರವಾನಗಿ ಕೊಟ್ಟಿತು. ಆದರೆ ಇದರಿಂದ ನಿಜವಾಗಿ ಭಯೋತ್ಪಾದನೆಯಲ್ಲಿ ತೊಡಗಿದ್ದ ಆತಂಕವಾದಿಗಳಿಗಿಂತ ಆಗಿನ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿದ್ದ ರಾಜಕೀಯ ಭಿನ್ನಮತೀಯರು, ಮತ್ತು ದಲಿತರು ಮತ್ತು ಆದಿವಾಸಿಗಳೇ ಹತ್ತಾರು ವರ್ಷ ಜೈಲಿನಲ್ಲಿ ಕೊಳೆಯುವಂತಾಯಿತು.

ಇಷ್ಟಾದರೂ TADA ಕಾಯಿದೆಯು ಒಂದು ತಾತ್ಕಾಲಿಕ ಕಾಯಿದೆಯಾಗಿದ್ದು, ಎರಡು ವರ್ಷಗಳಿಗೊಮ್ಮೆ ಸಂಸತ್ತಿನ ಅನುಮೋದನೆಗೊಂಡು ವಿಸ್ತರಿಸಿಕೊಳ್ಳಬೇಕಾದ ಪ್ರಜಾತಾಂತ್ರಿಕ ಉಸ್ತುವಾರಿಯನ್ನಾದರೂ ಹೊಂದಿತ್ತು.

ಆ ಕಾರಣದಿಂದಾಗಿಯೇ ದೇಶಾದ್ಯಂತ TADA ಕಾಯಿದೆಯ ವಿರುದ್ಧ ಹೋರಾಟ ಭುಗಿಲೆದ್ದಿದ್ದರಿಂದ 1995ರಲ್ಲಿ ಸಂಸತ್ತಿನಲ್ಲಿ ಅದರ ವಿಸ್ತರಣೆ ಅನುಮೋದನೆಯಾಗದೆ TADA ರದ್ದಾಯಿತು.

1999ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ವಾಜಪೇಯಿ ನೇತೃತ್ವದ NDA ಸರ್ಕಾರ 2002ರಲ್ಲಿ Prevention Of Terrorism Act-POTA ಎಂಬ ಅತ್ಯಂತ ಕರಾಳ ಕಾಯಿದೆಯನ್ನು ಜಾರಿಗೆ ತಂದಿತು. ಇದು TADA ಕಾಯಿದೆಯಲ್ಲಿದ್ದ ಎಲ್ಲಾ ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿದ್ದಲ್ಲದೆ ಆರೋಪಿಗೆ 180 ದಿನಗಳ ಕಾಲ ಜಾಮೀನು ನಿರಾಕರಿಸುವ, ನಿರಪರಾಧಿಯೆಂದು ಸಾಬೀತು ಮಾಡಿಕೊಳ್ಳುವ ಹೊಣೆಯನ್ನು ಆರೋಪಿಯ ಮೇಲೆ ವರ್ಗಾಸುವ, ಪೊಲೀಸ್ ಅಧಿಕಾರಿಯ ಮುಂದೆ ಮಾಡಿಕೊಳ್ಳುವ ತಪೊಪ್ಪಿಗೆಯನ್ನು ಸಾಕ್ಷಿಯೆಂದು ಪರಿಗಣಿಸುವ, ಸರ್ಕಾರ ವಿರೋಧಿ ಅಭಿಪ್ರಾಯ ಹಾಗೂ ಪ್ರತಿಭಟನೆಗಳನ್ನು ದೇಶದ್ರೋಹಿ ಭಯೋತ್ಪಾದಕ ಕೃತ್ಯಗಳೆಂದು ಪರಿಗಣಿಸುವಂಥಾ ಹತ್ತು ಹಲವು ಕರಾಳ ಅಂಶಗಳನ್ನು ಹೊಂದಿತ್ತು.

ಆದರೂ ಅದೂ ಕೂಡಾ ಸಂಸತ್ತಿನಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಅನುಮೋದನೆಗೊಳ್ಳಬೇಕಾಗಿದ್ದ ವಿಶೇಷವಾದ ಹಾಗೂ ತಾತ್ಕಾಲಿಕ ಕಾಯಿದೆಯಾಗಿತ್ತು.

2004ರ ಚುನಾವಣೆಯಲ್ಲಿ NDA ಒಕ್ಕೂಟ ಸೋಲುವುದರೊಂದಿಗೆ ಕಾಂಗ್ರೆಸ್ ನೇತೃತ್ವದ UPA ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಸರ್ಕಾರಕ್ಕೆ 59 ಸಂಸದರ ಬಲವನ್ನು ಹೊಂದಿದ್ದ ಎಡಪಕ್ಷಗಳು ಹೊರಗಿನಿಂದ ಬೆಂಬಲವನ್ನೂ ಕೊಟ್ಟವು. ಹಾಗೂ ಈ ಬಹು ಪಕ್ಷಗಳ ಸರ್ಕಾರಕ್ಕೆ ಬುನಾದಿಯಾಗಿ ಒಂದು ಕನಿಷ್ಟ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಲಾಯಿತು. ಅದರಲ್ಲಿ ಪ್ರಜಾತಂತ್ರವಿರೋಧಿ POTA ಕಾಯಿದೆಯು ರದ್ದುಗೊಳಿಸುವ ಆಶ್ವಾಸನೆಯನ್ನು ನೀಡಲಾಗಿತ್ತು.

ಅದರಂತೆ UPA ಸರ್ಕಾರ 2004ರ ಡಿಸೆಂಬರ್ ನಲ್ಲಿ POTA ಕಾಯಿದೆಯನ್ನೇನೋ ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿತು. ಆದರೆ ಅದರ ಜೊತೆಜೊತೆಗೆ 1967ರಲ್ಲಿ ಜಾರಿ ಮಾಡಲಾಗಿದ್ದ UAPA ಕಾಯಿದೆಗೆ ಅಮೂಲಾಗ್ರ ತಿದ್ದುಪಡಿಗಳನ್ನು ತರುವ ಮಸ್ಸೊದೆಯನ್ನು ಮಂಡಿಸಿತು.

ಇದನ್ನೂ ಓದಿ: ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಜಾಮೀನು ಪಡೆಯಲು ಅವಕಾಶ: ಆದರೂ ಉಳಿದಿವೆ ಕೆಲವು ಪ್ರಶ್ನೆಗಳು!

ಹಳೆಯ UAPA ಕಾಯಿದೆಗೆ ಟೆರರಿಸ್ಟ್ ಚಟುವಟಿಕೆಗಳನ್ನೂ ನಿಗ್ರಹಿಸುವ ಹೊಸ ಪರಿಚ್ಚೇದವನ್ನು ಸೇರಿಸಿತು. ಹಾಗೂ ಟೆರರಿಸಂ ಎಂದರೆ ಏನು? ಮತ್ತು ಯಾವ್ಯಾವ ಸಂಘಟನೆಗಳು ಟೆರರಿಸ್ಟ್ ಎಂದು NDA ಸರ್ಕಾರ ಘೋಷಿಸಿತ್ತೋ ಅದೆಲ್ಲವನ್ನೂ ಅನಾಮತ್ತಾಗಿ UAPA ಕಾಯಿದೆಯ ಶೆಡ್ಯೂಲಿನಲ್ಲಿ ಸೇರಿಸಿತು.

ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ 1985 ರ TADA ಅಥವಾ NDA ಸರ್ಕಾರದ POTA ಕಾಯಿದೆಯ ತರಹ ಈ ಹೊಸ UAPA ಕಾಯಿದೆ ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಸತ್ತಿನಿಂದ ಅನುಮೋದನೆಗೊಳ್ಳುವ ತಾತ್ಕಾಲಿಕ ಕಾಯಿದೆಯಾಗದೆ ಒಂದು ಶಾಶ್ವತ ಕಾಯಿದೆಯಾಗಿಬಿಟ್ಟಿತು.

ಆ ಅರ್ಥದಲ್ಲಿ TADA ಅಥವಾ POTA ಗಳ ಮೇಲಿದ್ದ ಪ್ರಜಾತಾಂತ್ರಿಕ ಉಸ್ತುವಾರಿಯೂ ಸಹ UAPA ಕಾಯಿದೆ ಮೇಲೆ ಇರದಂತೆ ಕಾಂಗ್ರೆಸ್ ಸರ್ಕಾರ ತಿದ್ದುಪಡಿಯನ್ನು ತಂದಿತು.

ಹೀಗಾಗಿ ಇಂದಿನ ಪ್ರಜಾತಾಂತ್ರಿಕ ಕಗ್ಗೊಲೆಗೆ ಬೇಕಾದ ಶಾಸನ ಬಲವನ್ನು ಕೊಟ್ಟಿದ್ದು ಕಾಂಗ್ರೆಸ್ ನೇತೃತ್ವದ UPA ಸರ್ಕಾರವೇ!

ಕಾಂಗ್ರೆಸ್ ಸರ್ಕಾರ ಮುಂದಿಟ್ಟ ಈ ಹೊಸ UAPA ಮಸೂದೆಯ ಬಗ್ಗೆ 2004ರ ಡಿಸೆಂಬರ್ 6 ಮತ್ತು 9 ರಂದು ಲೋಕಸಭೆಯಲ್ಲಿ ಹಾಗೂ ಡಿಸೆಂಬರ್ 13 ರಂದು ರಾಜ್ಯಸಭೆಯಲ್ಲಿ ಚರ್ಚೆಯಾಗುತ್ತದೆ.

UPA ಸರ್ಕಾರದ ಕನಿಷ್ಟ ಸಾಮಾನ್ಯ ಕಾರ್ಯಕ್ರಮದಲ್ಲಿ ಭಯೋತ್ಪಾದನಾ ನಿಗ್ರಹ ಕಾಯಿದೆಯನ್ನು ಬಿಜೆಪಿ ಅಮಾಯಕರನ್ನು ಹಾಗೂ ಅಲ್ಪಸಂಕ್ಯಾತರನ್ನೂ ಬಲಿಹಾಕಲು ಬಳಸಿಕೊಡ ರೀತಿಯ ಬಗ್ಗೆ ಸ್ಪಷ್ಟವಾದ ಖಂಡನೆಗಳಿದ್ದರೂ, ಕಾಂಗ್ರೆಸ್ ಪಕ್ಷ ತನ್ನ ಹೊಸ UAPA ಮಸೂದೆಯನ್ನು ಸಮರ್ಥಿಸಿಕೊಳ್ಳಲು ಕೊಟ್ಟ ಸಮರ್ಥನೆಗಳು ಬಿಜೆಪಿ ಗಿಂತ ಯಾವುದೇ ರೀತಿಯಲ್ಲೂ ಭಿನ್ನವಿರಲಿಲ್ಲ.

ಎಡಪಕ್ಷಗಳು ಈ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟ ಹಾಗೂ ಯುಪಿಎ ಸರ್ಕಾರ ಸ್ಥಾಪನೆಯಾಗಲು ಕಾರಣವಾದ ಪ್ರಮುಖ ಘಟಕಗಳು. ಆದರೆ UPA ಯ ಸಂಯೋಜನಾ ಸಭೆಯಲ್ಲಿ ಈ ಬಗ್ಗೆ ಎಡಪಕ್ಷಗಳ ಅಭಿಪ್ರಾಯವನ್ನು ಕೇಳಿದ ಶಾಸ್ತ್ರ ಮಾಡಿದ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಎರಡು ಪ್ರಮುಖ ಎಡಪಕ್ಷಗಳು ಮುಂದಿಟ್ಟ ಯಾವುದೇ ಸಲಹೆಗಳನ್ನು ಒಪ್ಪಿಕೊಳ್ಳುವುದಿಲ್ಲ.

ಕನಿಷ್ಟ ಮಸೂದೆಯನ್ನು ಸಂಸತ್ತಿನ ವಿಷಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ಒತ್ತಾಯವನ್ನು ಕೂಡಾ ಕಾಂಗ್ರೆಸ್ ಸರ್ಕಾರ ಒಪ್ಪಿಕೊಳ್ಳಲಿಲ್ಲ.

ಆದರೂ ತಮ್ಮ ಎಲ್ಲಾ ಕಾಳಜಿಗಳನ್ನು ಕಾಯಿದೆಗೆ ನಿಯಮಾವಳಿಗಳನ್ನು ರಚಿಸುವಾಗ ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಕೊಟ್ಟ ಭರವಸೆಯನ್ನು ಎಡ ಹಾಗೂ ಇನ್ನಿತರ ಪಕ್ಷಗಳು ಒಪ್ಪಿಕೊಂಡವು.

ನಂತರದಲ್ಲಿ UAPA ಯಂಥ ಕರಾಳ ಕಾಯಿದೆ ಸಂಸದೀಯ ಉಸ್ತುವಾರಿಯೂ ಇಲ್ಲದ ಶಾಶ್ವತ ಕಾಯಿದೆಯಾಗಿ ಸರ್ವಾಧಿಕಾರಿ ಸರ್ಕಾರದ ಹಾಗೂ ಪೊಲೀಸರ ಬತ್ತಳಿಕೆಯನ್ನು ಸೇರಿಕೊಂಡುಬಿಟ್ಟಿತು.

ಆಸಕ್ತರು ಆಗ ನಡೆದ ಸಂಸದೀಯ ಚರ್ಚೆಯನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು : https://eparlib.nic.in/bitstream/123456789/730920/1/864.pdf

2008 ರ ತಿದ್ದುಪಡಿಗಳು-ಪ್ರಜಾತಂತ್ರದ ಕಗ್ಗೊಲೆಗೆ ರಾಜಮಾರ್ಗ

2008ರ ನವಂಬರ್ 26 ರಂದು ಪಾಕಿಸ್ತಾನದಿಂದ ನುಸುಳಿ ಬಂದ ಉಗ್ರರು ಮುಂಬೈ ಮೇಲೆ ದಾಳಿ ಮಾಡಿ 150 ಕ್ಕೂ ಹೆಚ್ಚು ಜನ ಬಲಿಯಾದದ್ದು ಈ ಕಾಯಿದೆಯನ್ನು ಬಳಸಿಕೊಂಡು ಜನರನ್ನು ಸದೆಬಡಿಯಲು ಬೇಕಾದ ಉಗ್ರಬಲವನ್ನು ತಂದುಕೊಟ್ಟಿತು!.

ಇಂಥಾ ಭಯೋತ್ಪಾದನೆಯನ್ನು ದೇಶ ಒಗ್ಗಟ್ಟಾಗಿ ಎದುರಿಸುವ ಅಗತ್ಯವಿತ್ತು. ಆದರೆ ಇದಾದ ಕೇವಲ ಆರು ತಿಂಗಳ ನಂತರ 2009ರಲ್ಲಿ ಸಾರ್ವತ್ರಿಕ ಚುನಾವಣೆ ಇದ್ದಿದ್ದರಿಂದ ಬಿಜೆಪಿ ಈ ದುರಂತವನ್ನೂ ಕೂಡಾ ತನ್ನ ಕೋಮುವಾದಿ ರಾಜಕಾರಣಕ್ಕೆ ದಾಳವಾಗಿ ಬಳಸಿಕೊಂಡಿತು. ಮುಂಬೈ ದಾಳಿಯನ್ನು ನೆಪವಾಗಿರಿಸಿಕೊಂಡು ಈ ದೇಶದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವ ಹಾಗೂ ಇಸ್ಲಾಮ್ ಆಚರಣೆಗಳನ್ನೂ ಉಗ್ರವಾದದ ಬೆಂಬಲವೆಂದು ನೋಡುವ ಕಥನವನ್ನೂ ಹರಿಬಿಟ್ಟಿತು. ಹಾಗೂ ಕಾಂಗ್ರೆಸ್ ಇಂಥಾ ಉಗ್ರವಾದವನ್ನು ಹತ್ತಿಕ್ಕಲು ಅಸಮರ್ಥ ಎಂಬ ಕಥನವನ್ನೂ ಹುಟ್ಟುಹಾಕಿತು.

ಇದನ್ನೂ ಓದಿ: ಪ್ರತಿಭಟನೆ ಮತ್ತು ಚುನಾವಣೆಗಳ ಭಯದಿಂದ ಸಿಎಎ ಜಾರಿಗೆ ಹಿಂದೆ ಸರಿಯುತ್ತಿದೆಯೇ ಬಿಜೆಪಿ?

ಈ ಕೋಮುವಾದಿ ದಾಳಿಯನ್ನು ರಾಜಕೀಯವಾಗಿ ಮತ್ತು ಸೈದ್ದಾಂತಿಕವಾಗಿ ಶಕ್ತಿಯುತವಾದ ಪ್ರಜಾತಾಂತ್ರಿಕ ನೆಲೆಯಿಂದ ಎದುರಿಸುವ ಸಾಂವಿಧಾನಿಕ ಬದ್ಧತೆಯನ್ನಾಗಲೀ, ಪ್ರಾಮಾಣಿಕತೆಯಾಗಲೀ ತೋರದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ತಾನು ಹೆಚ್ಚು ರಾಷ್ಟ್ರಭಕ್ತ ಎಂದು ಸಾಬೀತು ಮಾಡಲು UAPA ಕಾಯಿದೆಗೆ ಇನ್ನಷ್ಟು ಕರಾಳ, ವಿಕರಾಳ ಅಂಶಗಳನ್ನು ಸೇರಿಸಿತು.

ಮುಂಬೈ ದಾಳಿ 2008ರ ನವಂಬರ್ ನಲ್ಲಿ ನಡೆದರೆ ಕೇವಲ ಮೂರು ವಾರದಲ್ಲಿ ಅಂದರೆ ಡಿಸೆಂಬರ್ 13 ರಂದು ಲೋಕಸಭೆಯಲ್ಲಿUAPA ತಿದ್ದುಪಡಿ ಹಾಗೂ ಹೊಸ NIA (National Investigation Agency- ರಾಷ್ಟ್ರೀಯ ತನಿಖಾ ಸಂಸ್ಥೆ) ರಚಿಸುವ ಮಸೂದೆಯನ್ನು ಕಾಂಗ್ರೆಸ್ ಮಂಡಿಸಿತು.

UAPA ಹೊಸ ತಿದ್ದುಪಡಿಗಳು:

– 2008 ರ ಹೊಸ ತಿದ್ದುಪಡಿಯು ಸೆಕ್ಷನ್ ೧೫ ಕ್ಕೆ ತಂದ ತಿದ್ದುಪಡಿಯ ಪ್ರಕಾರ, ದೇಶದ ಭದ್ರತೆ ಮತ್ತು ಸಾರ್ವಭೌಮತೆಯ ಮೇಲೆ ಬಾಂಬು ಬಂದೂಕಗಳಿಂದ ದಾಳಿ ಮಾಡಿದರೆ ಮಾತ್ರವಲ್ಲ ಇತರ ಯಾವುದೇ ಕ್ರಮಗಳ ಮೂಲಕ॒ ಭಯೋತ್ಪಾದನೆಯನ್ನುಂಟು ಮಾಡಲು ಪ್ರಯತ್ನಿಸುವುದೂ ಕೂಡ ಭಯೋತ್ಪಾದನೆಯಾಯಿತು. ಹಾಗೂ ಆ ಕ್ರಮಗಳು ಯಾವುದು ಎಂಬ ನಿರ್ವಚನೆಯನ್ನು ಪೊಲೀಸರಿಗೆ ಬಿಟ್ಟುಕೊಡಲಾಯಿತು.

ಅದರ ಜೊತೆಗೆ ಭಯೋತ್ಪಾದನೆಯೆಂಬ ಪರಿಣಾಮ ಸಂಭವಿಸದಿದ್ದರೂ ಅಂಥಾ ಸಾಧ್ಯತೆ (..Likely) ಇದ್ದರೂ ಅದನ್ನು ಟೆರರಿಸ್ಟ್ ಆಕ್ಟ್ ಎಂದು ಪರಿಗಣಿಸಬೇಕೆಂದಿತು.

ಅಂದರೆ ಸರ್ಕಾರ ಯಾವುದನ್ನು ಬೇಕಾದರೂ ಟೆರರಿಸ್ಟ್ ಆಕ್ಟ್ ಎಂದು ಭಾವಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಿತು.

– ಸೆಕ್ಷನ್ 43 D (2-7) ಎಂಬ ಹೊಸ ಸೇರ್ಪಡೆಯನ್ನು ಮಾಡಲಾಯಿತು. ಇದರ ಪ್ರಕಾರ ಚಾರ್ಜ್ ಶೀಟ್ ಅನ್ನು ಪೊಲೀಸರು ನ್ಯಾಯಲಯಕ್ಕೆ ಸಲ್ಲಿಸಿದ ನಂತರವೂ, ಆರೋಪಿಯನ್ನು ಜಾಮೀನು ಕೊಡದಿರುವ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಿತು.

ಹೀಗೆ ಈ ಕಾಯಿದೆಯಡಿ ಬಂಧಿತರಾದವರಿಗೆ ವಿಚಾರಣೆ ಮುಗಿಯುವವರೆಗೆ ಅಂದರೆ 10-20 ವರ್ಷಗಳ ಕಾಲ ಜಾಮೀನು ಕೂಡ ಸಿಗದಿರುವ ಅಮಾನುಷ ಅವಕಾಶವನ್ನು ಒದಗಿಸಿದ್ದು 2008ರ ತಿದ್ದುಪಡಿಗಳೇ..

ಇದನ್ನೂ ಓದಿ:ದೆಹಲಿ ಗಲೆಭೆ ಪ್ರಕರಣ: ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌!

ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ ಇದ್ದ ಅವಕಾಶವನ್ನು 90 ದಿನಗಳಿಂದ 180 ದಿನಗಳವರೆಗೆ ವಿಸ್ತರಿಸುವ ಅವಕಾಶವನ್ನು ನೀಡಲಾಯಿತು.

-ಸೆಕ್ಷನ್ 43 E ಎಂಬ ಹೊಸ ಸೇರ್ಪಡೆಯ ಮೂಲಕ ನಿರಪರಾಧಿತ್ವವನ್ನು ಸಾಬೀತು ಮಾಡುವ ಹೊಣೆಗಾರಿಕೆಯನ್ನು ಆರೋಪಿಗೆ ವರ್ಗಾಯಿಸಲಾಯಿತು.

ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಹಾಗೂ ಮಾನವ ಹಕ್ಕುಗಳನ್ನು ಗಂಭೀರವಾಗಿ ಉಲ್ಲಂಘನೆಯನ್ನು ಮಾಡುವ ಹಾಗೂ ಜಗತ್ತಿನ ಯಾವ ನಾಗರಿಕ ದೇಶಗಳಲ್ಲೂ ಇಲ್ಲದ ಇನ್ನೂ ಹಲವಾರು ಅಂಶಗಳನ್ನು ಈ ತಿದ್ದುಪಡಿಯ ಮೂಲಕ ಸೇರಿಸಲಾಯಿತು.

ದೇಶಭದ್ರತೆಯ ಹೆಸರಲ್ಲಿ ರಾಜ್ಯಗಳ ಪರಮಾಧಿಕಾರವನ್ನು ಉಲ್ಲಂಘಿಸುವ NIA

ಇದೇ ಸಂದರ್ಭವನ್ನು ಬಳಸಿಕೊಂಡು ಕಾಂಗ್ರೆಸ್ ನೇತೃತ್ವ ಯುಪಿಎ ಸರ್ಕಾರ ಒಂದು ಹೊಸ NIA (National Investigation Agency)- ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ ಕಾನೂನನ್ನು ಮಾಡಿತು.

ನಮ್ಮ ದೇಶದ ಸಂವಿಧಾನದ ಏಳನೇ ಶೆಡ್ಯೊಲಿನ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರ್ಕಾರಗಳ ಜವಾಬ್ದಾರಿ. ಮತ್ತು ಅಧಿಕಾರ. ಒಂದು ವೇಳೆ ಕೇಂದ್ರ ತನಿಖಾ ದಳಗಳು ರಾಜ್ಯದಲ್ಲಿ ತನಿಖೆಯನ್ನು ಮಾಡಬೇಕೆಂದರೂ ರಾಜ್ಯ ಸರ್ಕಾರಕ್ಕೆ ತಿಳಿಸಿ ಅದರ ಅನುಮತಿಯನ್ನು ಪಡೆದು ಮಾಡಬೇಕು.

ಆದರೆ ಈ ಹೊಸ NIA ಕಾಯಿದೆಯ ಪ್ರಕಾರ ಕಾಯಿದೆಯ ಶೆಡ್ಯೂಲಿನಲ್ಲಿ ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಅಪರಾಧಗಳು ದೇಶದಲ್ಲಿ ಎಲ್ಲೇ ಸಂಭವಿಸಿದರೂ ಕೇಂದ್ರ ಸರ್ಕಾರದ ಆದೆಶದ ಮೇರೆಗೆ NIA ರಾಜ್ಯಗಳ ಅನುಮತಿಯನ್ನು ಕೇಳದೆ ನೇರವಾಗಿ ಆ ಪ್ರಕರಣಗಳನ್ನು ತನ್ನ ಸುಫರ್ದಿಗೆ ತೆಗೆದುಕೊಳ್ಳಬಹುದು. ಹಾಗೂ ಅಂಥಾ ತನಿಖೆಗೆ ರಾಜ್ಯ ಸರ್ಕಾರಗಳ ಪೂರ್ವಾನುಮತಿಯ ಅಗತ್ಯವಿರುವುದಿಲ್ಲ. ಹಾಗೂ ಯಾವುದೇ ಆಸ್ತಿಪಾಸ್ತಿಗಳ ಜಫ್ತಿ ಇತ್ಯಾದಿಗಳನ್ನು ಮಾಡಬಹುದು. ಜೊತೆಗೆ ಈ ಪ್ರಕರಣಗಳ ವಿಚಾರಣೆಗಳು ಕೇಂದ್ರ ಸರ್ಕಾರ ಸೂಚಿಸುವ ವಿಶೇಷ NIA ನ್ಯಾಯಾಲಯಗಳಲ್ಲೆ ನಡೆಯಬೇಕು. ಅರ್ಥಾತ್ ಈ ವಿಷಯಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಸ್ವಾಯತ್ತತೆಯನ್ನೇ ಕಳೆದುಕೊಳ್ಳುತ್ತದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಸ್ಟಾನ್ ಸ್ವಾಮಿಯವರನ್ನು ಬಂಧಿಸಿದ್ದ ಭೀಮ ಕೊರೆಗಾಂವ್ ಪ್ರಕರಣವೇ.

2018 ರ ಜೂನ್ ನಲ್ಲಿ ಮಹರಾಶ್ಟ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಆ ಸರ್ಕಾರ ಭೀಮಾ ಕೊರೆಗಾಂವ ಪ್ರಕರಣಕ್ಕೆ ಮೋದಿ ಕೊಲೆ ಸಂಚೆಂಬ ತಿರುವನ್ನು ನೀಡಿ ದೇಶಾದ್ಯಂತ ಮೋದಿ ಸರ್ಕಾರದ ವಿರೋಧಿಗಳೆನ್ನೆಲ್ಲಾ UAPA ಅಡಿ ಬಂಧಿಸಿತು. ಆದರೆ ತನಿಖೆಯನ್ನು ರಾಜ್ಯ ಪೊಲೀಸರೇ ನಡೆಸುತ್ತಿದ್ದರು. ಏಕೆಂದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತು.

ಆದರೆ 2019ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಶಾಸನ ಸಭಾ ಚುನಾವಣೆಯ ನಂತರ ಅಲ್ಲಿ ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಸರ್ಕಾರ ಅಧಿಕಾರಕ್ಕೆ ಬಂತು. ಹಾಗೂ ಅ ಸರ್ಕಾರ ಭೀಮ್ ಕೊರೆಗಾಂವ್ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರಾಜಕೀಯ ಸಂಚನ್ನು ಮಾಡಿ ಮಾನವ ಹಕ್ಕು ಕಾರ್ಯಕರ್ತರನ್ನು ಸಿಲುಕಿಸಿರುವ ಬಗ್ಗೆ ವಿಶೇಷ ತನಿಖೆಯನ್ನು ನಡೆಸುವ ಸಿದ್ಧತೆಯನ್ನು ನಡೆಸಿತ್ತು.

ಕೂಡಲೇ ಕಾರ್ಯಪ್ರವೃತ್ತವಾದ ಕೇಂದ್ರ ಸರ್ಕಾರ NIA ಕಾಯಿದೆ ಕೊಡುವ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರ್ಕಾರಕ್ಕೆ ಯಾವ ಸೂಚನೆಯನ್ನೂ ಕೊಡದೆ ಇಡೀ ಪ್ರಕರಣವನ್ನು NIA ಗೆ ವಹಿಸಿತು. ಆ ನಂತರ ಶಿವಸೇನಾ ಮುಖ್ಯಮಂತ್ರಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದು ಬೇರೆ ವಿಷಯ. ಇಂಥಾ ಫ಼ೆಡರಲ್ ವಿರೋಧಿ ಹತಾರವನ್ನು 2008 ರ ತಿದ್ದುಪಡಿಯ ಮೂಲಕ ಹರಿತ ಮಾಡಿಕೊಟ್ಟದ್ದು ಮಾತ್ರ ಕಾಂಗ್ರೆಸ್ ಸರ್ಕಾರವೇ.

ಈ ಎರಡೂ ಮಸೂದೆಗಳ ಬಗ್ಗೆ 2008 ರ ಡಿಸೆಂಬರ್ ನಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಗಳಲ್ಲಿ ತಲಾ ಒಂದೊಂದು ದಿನಗಳ ಚರ್ಚೆ ಮಾತ್ರ ನಡೆಯಿತು. ಬಿಜೆಪಿ ಪಕ್ಷವು ಭಯೋತ್ಪಾದನೆಯನ್ನು ವಿರೋಧಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂಬ ವಿಷಯವನ್ನು ರಾಜಕೀಯ ಪ್ರಚಾರ ಮಾಡಿಕೊಳ್ಳಲು ಸಂಸತ್ತಿನ ವೇದಿಕೆಯನ್ನು ಬಳಸಿಕೊಂಡಿತು. ಹೇಗೆ ಹೊಸ ಕಾಯಿದೆ ತಾವು 2002ರಲ್ಲಿ ಜಾರಿಗೆ ತಂದ POTA ಕಾಯಿದೆಯ ನಕಲಾಗಿದೆಯೆಂದೂ ಹಾಗೂ ಅದನ್ನು ರದ್ದು ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಯಾಚಿಸಬೇಕೆಂದೂ ಪಟ್ಟು ಹಿಡಿಯಿತು. ಬಿಜೆಪಿಯ ಈ ದ್ವೇಷಭಕ್ತಿಯ ಟ್ರಾಪಿಗೆ ಬಿದ್ದ ಕಾಂಗ್ರೆಸ್ ತಾನು ಬಿಜೆಪಿಗಿಂತ ದೊಡ್ಡ ದೇಶಭಕ್ತ ಎಂದು ತೋರಿಸಿಕೊಳ್ಳಲು ಹೇಗೆ ತಮ್ಮ ಕಾಯಿದೆ ಪೋಟಾ ಗಿಂತಲೂ ಭೀಕರವಾಗಿದೆ ಎಂದು ಸಮರ್ಥಿಸಿಕೊಂಡಿತು!!

ಇದನ್ನೂ ಓದಿ: ಯುಎಪಿಎ ಆರೋಪ ಖುಲಾಸೆ; 12 ವರ್ಷಗಳ ಬಳಿಕ ಜೈಲಿಂದ ಬಿಡುಗಡೆಯಾದ ನಿರಪರಾಧಿ!

ಎಡಪಕ್ಷಗಳು, ಆರೆಜೆಡಿ, ಹಾಗೂ ಇತರ ಪಕ್ಷಗಳು ಕಾಯಿದೆಯನ್ನು ತರಾತುರಿಯಲ್ಲಿ ಜಾರಿ ಮಾಡಬಾರದೆಂದು ವಿಷಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂದೂ ಆಗ್ರಹಿಸಿದವು.

ಆದರೆ, ವಿಪರ್ಯಾಸವೆಂದರೆ ಕಾಯಿದೆಯಲ್ಲಿನ ಕೆಲವು ಅಂಶಗಳ ಬಗ್ಗೆ ಓಟಿಂಗ್ ನಡೆದಾಗ ಎಡಪಕ್ಷಗಳು ಹಾಗೂ ವಿರೋಧ ಪಕ್ಷಗಳು ಪೂರ್ಣಪ್ರಮಾಣದಲ್ಲಿ ಹಾಜರೂ ಇರಲಿಲ್ಲ.

ಉದಾಹರಣೆಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ 180 ದಿನಗಳ ಅವಕಾಶ ಕೊಡಕೂಡದು ಎಂಬ ಪ್ರಸ್ತಾವದ ಪರವಾಗಿ ಕೇವಲ 27 ಓಟುಗಳು ಬಿದ್ದವು. ಆಗ ಸಂಸತ್ತಿನಲ್ಲಿ ಎಡಪಕ್ಷಗಳ ಸಂಕ್ಯಾಬಲವೇ59 ಇತ್ತು!

ಅಷ್ಟು ಮಾತ್ರವಲ್ಲ.

ಎಡಪಕ್ಷಗಳ ಸದಸ್ಯರು ರಾಜ್ಯಗಳು ಭಯೋತ್ಪಾದನೆಯನ್ನು ಎದುರಿಸಲು ಅಷ್ಟು ಶಕ್ತವಾಗಿಲ್ಲವಾದ್ದರಿಂದ NIA ರಚನೆಯನ್ನೂ ಹಾಗೂ ಒಟ್ಟಾರೆ ಕಾಯಿದೆಯನ್ನು ತಾವು ವಿರೋಧಿಸುತ್ತಿಲ್ಲವೆಂದೂ ವಿವರಿಸಿಕೊಂಡರು!

ಆರೆಜೆಡಿ, ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಫೆಡರಲ್ ಸ್ವರೂಪಕ್ಕಾಗಬಹುದಾದ ಧಕ್ಕೆಗಳ ಬಗ್ಗೆ ಮಾತ್ರ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸಿದವು.

ಒಟ್ಟಿನಲ್ಲಿ ಈ ಸಾಂಕೇತಿಕ ಭಿನ್ನಮತಗಳೊಂದಿಗೆ ಕಾಂಗ್ರೆಸ್ ನೇತೃತ್ವದ UPA ಸರ್ಕಾರ ಜಗತ್ತಿನಲ್ಲೇ ಅತ್ಯಂತ ಕರಾಳವಾದ ಕಾಯಿದೆಯನ್ನು ಜಾರಿ ಮಾಡಿತು.
ಆಸಕ್ತರು ಇದರ ಬಗ್ಗೆ ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಈ ವಿಳಾಸದಲ್ಲಿ ಓದಬಹುದು:

https://eparlib.nic.in/bitstream/123456789/722419/1/10813.pdf

೨೦೧೨ರಲ್ಲಿ ಈ ಕಾಯಿದೆಗೆ ಮತ್ತೊಂದು ತಿದ್ದುಪಡಿಯನ್ನು ಜಾರಿ ಮಾಡಿ ಆರ್ಥಿಕ ಭದ್ರತೆಗಳಿಗೆ ಅಪಾಯ ಉಂಟು ಮಾಡುವ ಕಂಪನಿಗಳನ್ನು, ಸಂಸ್ಥೆಗಳನ್ನೂ ಹಾಗೂ ಕ್ರಿಯೆಗಳನ್ನೂ ಟೆರರಿಸಂ ಎಂದು ಘೋಷಿಸಲಾಯಿತು. ಆಗಲೂ ಬಿಜೆಪಿ ಸಂಭ್ರಮಿಸಿದರೆ ಎಡವನ್ನೂ ಒಳಗೊಂಡಂತೆ ಉಳಿದ ವಿರೋಧ ಪಕ್ಷಗಳ ವಿರೋಧಗಳು ಸಾಂಕೇತಿಕಕ್ಕೆ ಸೀಮಿತವಾಯಿತು.

ಹಿಂದೂತ್ವ ಟೆರರಿಸಂ ಮತ್ತು UAPA

ಇಷ್ಟೆಲ್ಲಾ ಆದರೂ ಯುಪಿಎ ಸರ್ಕಾರದ ಬಗ್ಗೆ ಹೇಳಬಹುದಾದ ಒಂದು ಮಾತೆಂದರೆ ಆ ಸರ್ಕಾರ ಈ ಕಾಯಿದೆಯನ್ನು ಅಮಾಯಕ ಆದಿವಾಸಿಗಳು ಹಾಗೂ ದಲಿತರ ಮೇಲೆ ಬಳಸಿದಷ್ಟು ಅಲ್ಪಸಂಕ್ಯಾತರ ಮೇಲೆ ಬಳಸಲಿಲ್ಲ. ಹಾಗೂ ಹಿಂದೂತ್ವವಾದಿ ಭಯೋತ್ಪಾದಕರನ್ನು ಬಂಧಿಸಲೂ ಈ ಅವಧಿಯಲ್ಲಿ ಈ ಕಾಯಿದೆಯನ್ನು ಬಳಸಿದರು.

ಆದರೆ ಹಿಂದೂತ್ವವಾದಿ ಭಯೋತ್ಪಾದಕರನ್ನು ಸಹ ತ್ವರಿತವಾಗಿ ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಬೇಕೇ ವಿನಾ ವಿಚಾರಣೆಯಿಲ್ಲದೆ, ಜಾಮೀನಿಲ್ಲದೆ ಅನಿರ್ದಿಷ್ಟ ಕಾಲ ವಿಚಾರ್ಣಾಧೀನ ಬಂಧಿಗಳನ್ನಾಗಿ ಉಳಿಸಿಕೊಳ್ಳಬಾರದು.

ಇದನ್ನೂ ಓದಿ: ಸಂತರನ್ನು ಕೊಂದು – ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ ಹೇಳುವುದು ಸಾಕಷ್ಟಿದೆ: ಶಿವಸುಂದರ್

ಆದರೆ ಅಂಥವರ ಸಂಕ್ಯೆ ತುಂಬಾ ಕಡಿಮೆ. ಹಾಗೂ ಮೋದಿ ಸರ್ಕಾರ ಬಂದ ಮೇಲೆ ಅಂಥವರಿಗೆ ಕೋರ್ಟುಗಳು ಉದಾರವಾಗಿ ಜಾಮೀನು ನೀಡುತ್ತಿರುವುದ ಮಾತ್ರವಲ್ಲ..ಪ್ರಗ್ಯಾ ಸಿಂಗ್ ಅಂಥವರು ಎಂಪಿಗಳೂ ಆಗಿದ್ದಾರೆ. ಹೀಗಾಗಿ ಇಂಥಾ ಕಾಯಿದೆಗಳನ್ನು ಹಿಂದೂತ್ವ ಭಯೋತ್ಪಾದನೆಯ ಆರೋಪಿಗಳ ಮೇಲೆ ಬಳಕೆಯಾಗುವುದು ಇಂಥಾ ಪ್ರಜಾತಂತ್ರ ವಿರೋಧಿ ಕರಾಳ ಕಾಯಿದೆಗಳಿಗೆ ಸಮರ್ಥನೆಯಾಗಬಾರದು.

ಏಕೆಂದರೇ ಇಂಥಾ ಕಾಯಿದೆಗಳು ಯಾವಾಗಲೂ ಬಲಿತೆಗೆದುಕೊಳ್ಳುವುದು ಆದಿವಾಸಿ, ದಲಿತ, ಅಲ್ಪಸಂಕ್ಯಾತ, ರೈತ, ಕಾರ್ಮಿಕರನ್ನೂ ಹಾಗೂ ನೈಜ ಪ್ರಜಾತಂತ್ರವಾದಿಗಳ ಸ್ವಾತಂತ್ರ್ಯಗಳನ್ನು ಹಾಗು ಪ್ರಾಣಗಳನ್ನೇ..

2019 ರ ಮೋದಿ ತಿದ್ದುಪಡಿಗಳು-ನಾಮಕಾವಸ್ಥೆ ವಿರೋಧವೂ ಮಾಯ!

2019ರಲ್ಲಿ ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ UAPA ಅಡಿ ಯಾವುದೇ ಟೆರರಿಸ್ಟ್ ಸಂಘಟನೆ ಅಥವಾ ಗ್ಯಾಂಗಿನ ಸದಸ್ಯನಲ್ಲದ ಬಿಡಿವ್ಯಕ್ತಿಂiನ್ನು ಬಂಧಿಸುವಂಥಾ ಘೋರ ತಿದ್ದುಪಡಿಯನ್ನು ತಂದಿತು. ಹಾಗೂ NIA ಅಡಿ ಬೇರೆ ಯಾವುದಾದರೂ ರಾಜ್ಯದಲ್ಲಿ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡುವಾಗ ಆ ರಾಜ್ಯದ ಡಿಜಿಪಿಗೆ ತಿಳಿಸುವ ಅಗತ್ಯವಿಲ್ಲವೆಂಬ ಅಧಿಕಾರವನ್ನು ನೀಡಿತು.

ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಈ ತಿದ್ದುಪಡಿಯನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ವಿರೋಧಿಸಿದರೂ ರಾಜ್ಯ ಸಭೆಯಲ್ಲಿ ಬೆಂಬಲಿಸಿತು.

ಎಡಪಕ್ಷಗಳು, ಟಿಎಂಸಿ, ಡಿಎಂಕೆ ಮತ್ತು ಆರೆಜೆಡಿಗಳನ್ನು ಬಿಟ್ಟರೆ ಬಿಎಸ್‌ಪಿ, ಎಸ್‌ಪಿ, ಆಮ್ ಆದ್ಮಿ ಯಂಥ ಪ್ರಾದೇಶಿಕ ಪಕ್ಷಗಳೂ ಸಹ ಇಂಥ ಅತ್ಯಂತ ಫೆಡರಲ್ ವಿರೋಧಿ ಹಾಗೂ ಮಾನವ ಹಕ್ಕು ವಿರೋಧಿ ತಿದ್ದುಪಡಿಯನ್ನು ಬೆಂಬಲಿಸಿದವು.

ಹಾಗೆ ನೋಡಿದರೆ UAPA ಮತ್ತು NIA ದುರ್ಬಳಕೆಗಳು ಬಿಜೆಪಿಯ ನೇರ ಹಾಗೂ ಪರೋಕ್ಷ ಆಡಳಿತದಲ್ಲಿರುವ ಮಣಿಪುರ, ಉತ್ತರ ಪ್ರದೇಶ, ಅಸ್ಸಾಂ, ಹಾಗೂ ತಮಿಳುನಾಡುಗಳಲ್ಲಿ (೨೦೧೯ ರ ತನಕ) ಜಾಸ್ತಿ ನಡೆದಿರುವುದು ನಿಜವಾದರೂ….

ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಮತ್ತು ಚತೀಸ್‌ಘಡ್ಗಳಲ್ಲಿ ಹಾಗೂ ಎಡಪಕ್ಷಗಳು ಅಧಿಕಾರದಲ್ಲಿರುವ ಕೇರಳದಲ್ಲಿ ಕೂಡಾ UAPA ಅನ್ನು ವಿವೇಚನೆಯಿಲ್ಲದೆ ಹಾಗೂ ರಾಜಕೀಯ ಭಿನ್ನಮತೀಯರ ಮೇಲೆ ಬಳಸಿರುವ ಸಾಕಷ್ಟು ಉದಾಹರಣೆಗಳಿವೆ.

ಇದು UAPA ಮತ್ತು NIA ಯಂಥ ಫ್ಯಾಸಿಸ್ಟ್ ಕಾಯಿದೆಗಳನ್ನು ವಿರೋಧಿಸುವಲ್ಲಿ ಸಂಕ್ಯಾತ್ಮಕವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿಯೂ ಕೂಡಾ ಕಾಂಗ್ರೆಸ್ ನಂಥ ವಿರೋಧ ಪಕ್ಷಗಳಿಗಿರುವ ದೌರ್ಬಲ್ಯ ಮತ್ತು ಹಿತಾಸಕ್ತಿಗಳ ಸಾಮಾನ್ಯ ವರ್ಗಸ್ವರೂಪ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೊಂದು ಪತ್ರ: ಈ ದೇಶದಲ್ಲಿ ಮೋದಿವಾದಿಗಳಿಗೊಂದು ಕಾನೂನು – ಜನವಾದಿಗಳಿಗೊಂದು ಕಾನೂನಿದೆಯೇ?

ಬಿಜೆಪಿಗಳ ದೇಶರಕ್ಷಣೆಯೆಂಬ ಬ್ಲಾಕ್ ಮೇಲ್ ಕೋಮುವಾದಿ ರಾಜಕಾರಣಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ನೆಲೆಯಲ್ಲಿ ದೇಶರಕ್ಷಣೆಯ ರಾಜಕಾರಣವನ್ನು ಮುಂದಿಡಲಾಗದ ವೈಫಲ್ಯದಲ್ಲೇ ಬಿಜೆಪಿಯ ಜಯವಿದೆ.

ಇಂದು ವಿರೋಧಪಕ್ಷಗಳು ಅದರಲ್ಲು ವಿಶೆಷವಾಗಿ ಕಾಂಗ್ರೆಸ್ ಪಕ್ಷ, ತನ್ನ ರಾಜಕೀಯ ಅಸ್ಥಿತ್ವದ ಕಾರಣಕ್ಕಾಗಿಯಾದರೂ UAPA ಮತ್ತು NIA ಬಗ್ಗೆ ತನ್ನ ಧ್ವನಿ ಎತ್ತಿರುವುದು ಒಳ್ಳೆಯದೇ. ಚತ್ತೀಸ್ ಘಡ್ ಸರ್ಕಾರ ಎನ್‌ಐಎ ತಿದ್ದುಪಡಿಗಳ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಅಹವಾಲನ್ನೂ ದಾಖಲಿಸಿದೆ.

ಆದರೆ ಅಷ್ಟು ಸಾಲದು. ಮತ್ತದು ನಿಜವಾದ ಪ್ರಜಾತಾಂತ್ರಿಕ ವಿರೋಧ ಎಂದು ಪರಿಗಣಿಸಲಾಗದು.

ಏಕೆಂದರೆ ಕಾಂಗ್ರೆಸ್ ನಂಥ ಈ ಹಿಂದಿನ ಅಧಿಕಾರ ರೂಢ ಪಕ್ಷಗಳು ಪ್ರಜಾತಂತ್ರಿಕ ಮೌಲ್ಯಗಳಲ್ಲಿ ತಾನು ಮಾಡಿಕೊಂಡ ರಾಜಿಯ ಬಗ್ಗೆ ಮರುಮೌಲ್ಯಮಾಪನ ಮಾಡಿಕೊಳ್ಳುವ ಅಗತ್ಯವಿದೆ.

ಎಲ್ಲಾ ವಿರೋಧ ಪಕ್ಷಗಳು ಇಷ್ಟನ್ನು ಮಾಡಬಹುದೇ?:

– CAA-NRC ವಿಷಯಗಳಲ್ಲಿ ಕೆಲವು ವಿರೋಧ ಪಕ್ಷಗಳ ಸರ್ಕಾರಗಳು ತಮ್ಮಲ್ಲಿ ಅದನ್ನು ಜಾರಿ ಮಾಡುವುದಿಲ್ಲ ಎಂದು ತೀರ್ಮಾನಿಸಿದಂತೆ ಎಲ್ಲಾ ವಿರೋಧ ಪಕ್ಷಗಳ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ UAPA ಯನ್ನೂ ಬಳಸುವುದಿಲ್ಲ ಎಂದು ಘೋಶಿಸಬಲ್ಲರೇ?

– ರಾಜ್ಯ ಸರ್ಕಾರಗಳು ನಿರಾಕರಿಸಿದರೂ, NIA ಅಡಿ ಕೇಂದ್ರ ಸರ್ಕಾರವೇ ರಾಜ್ಯಗಳಲ್ಲಿ UAPA ಬಂಧನಗಳನ್ನು ಮಾಡಬಹುದು.

ಹೀಗಾಗಿ, ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ UAPA ಮತ್ತು NIA ಕಾಯಿದೆಗಳ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಒಟ್ಟು ಅಹವಾಲನ್ನು ಸಲ್ಲಿಸಿ ಫ್ಯಾಸಿಸ್ಟ್ ಕಥನಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ದೇಶರಕ್ಷಣೆಯ ಕಥನವನ್ನು ಕಟ್ಟಬಲರೇ?

– UAPA ಮತ್ತು NIA ಅನ್ನು ರದ್ದುಗೊಳಿಸೋಣ ಮತ್ತು ಭಾರತದ ಫ್ಯಾಸೀಕರಣವನ್ನು ತಡೆಗಟ್ಟೋಣ ಎಂಬುದನ್ನು ರಾಜಕೀಯ ಘೋಷಣೆಯಾಗಿ ಅಳವಡಿಸಿಕೊಳ್ಳಬಲ್ಲರೇ?

– ಶಿವಸುಂದರ್

ಇದನ್ನೂ ಓದಿ: UAPA ಅಡಿಯಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights