ಸಂತರನ್ನು ಕೊಂದು – ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ ಹೇಳುವುದು ಸಾಕಷ್ಟಿದೆ: ಶಿವಸುಂದರ್

ಸಂತರನ್ನು ಕೊಂದು ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ.. ಸುತ್ತುಬಳಸಿ ಮಾತಾಡುವ ಸಮಯವಲ್ಲ.
ಸ್ಟಾನ್ ಸ್ವಾಮಿಯಂಥ ಸಂತಪಾದ್ರಿಯನ್ನು ನಡುಹಗಲಿನಲ್ಲಿ  ಈ ದೇಶದ ಸರ್ಕಾರ ಹಾಗೂ ನ್ಯಾಯಂಗಳೆರಡೂ ಕೈಗೂಡಿಸಿ ಕೊಂದುಹಾಕಿದೆ.
ಬ್ರೆಜಿಲ್‌ನ ಆರ್ಕ್ ಬಿಷಪ್ ಕಮಾರ ಎಂದರೆ ಫ಼ಾದರ ಸ್ವಾಮಿಗೆ ಅಚ್ಚುಮೆಚ್ಚು. ಕಮಾರ ಅವರು ಸಮಾಜ ಹಾಗೂ ಸರ್ಕಾರಗಳ ಸೋಗಲಾಡಿತನಗಳ ಬಗ್ಗೆ ಒಮ್ಮೆ ಹೀಗೆ ಹೇಳಿದ್ದರು:
ಹಸಿದು ಬಂದವರಿಗೆ ಉಣಬಡಿಸಿದರೆ
ನನ್ನನ್ನು ಸಂತನೆಂದರು….
ಅವರೇಕೆ ಬಡವರಾಗಿದ್ದಾರೆಂದು ಕೇಳಿದರೆ
ನಾನು ಕಮ್ಯುನಿಸ್ಟನೆಂದರು
ಫಾದರ್ ಸ್ವಾಮಿ ಕೇಳಿದ್ದೂ ಅದನ್ನೇ.
ಬೆಂಗಳೂರಿನಲ್ಲಿ ಹಾಗೂ ಇತರ ಮೆಟ್ರೋ ನಗರಗಳಲ್ಲಿ ಶಾಂತಿ ಬೋಧನೆಯ ಫ಼ಾದರ್‌ಗಿರಿಯನ್ನು ಮಾಡುವುದಕ್ಕಿಂತ ಅತ್ಯಂತ ನಿರ್ಲಕ್ಷ್ಯ ಹಾಗೂ ಬಡತನಗಳನ್ನು ಅನುಭವಿಸುತ್ತಿರುವ ಜಾರ್ಖಂಡ್ನ ಆದಿವಾಸಿ ಜನಗಳ ಹಕ್ಕುಗಳಿಗಾಗಿ ಹೋರಾಡುವ ಜೀವಪರ ಸಂತಗಿರಿಯನ್ನು ಅಪ್ಪಿಕೊಂಡವರು  ಫ಼ಾದರ್ ಸ್ಟಾನ್ ಸ್ವಾಮಿಯವರು.
 ಐದನೇ ಶೆಡ್ಯೂಲ್ ಜಾರಿಯಲ್ಲಿದ್ದರೂ, 2006ರ ಫಾರೆಸ್ಟ್ ಅಕ್ಟ್ ಹಕ್ಕುಗಳನ್ನು ನೀಡಿದರೂ, ಆದಿವಾಸಿಗಳ ಹಕ್ಕುಗಳನ್ನೆಲ್ಲಾ ಕಸಿದುಕೊಂಡು ಇಡೀ ಅರಣ್ಯ ಸಂಪತನ್ನು ಸಂವಿಧಾನ ಹಾಗೂ ಕಾನೂನುಗಳಿಗೆ ವಿರುದ್ಧವಾಗಿ ಕಾರ್ಪೊರೇಟುಗಳಿಗೆ ಪರಭಾರೆ ಮಾಡಿ ಆದಿವಾಸಿಗಳನ್ನು ಎತ್ತಂಗಡಿ ಮಾಡುತ್ತಿರುವುದರ ವಿರುದ್ಧ ಅಹಿಂಸಾತ್ಮಕ ಹೋರಾಟಗಳನ್ನು ಕಟ್ಟಿದರು. ಕಾರ್ಪೊರೇಟುಗಳ ಹಿತಾಸಕ್ತಿಗಳಿಗೆ ಅಡ್ಡಿಬಂದಿದ್ದಕ್ಕೆ ೪೦೦೦ ಕ್ಕೂ ಹೆಚ್ಚು ಆದಿವಾಸಿಗಳನ್ನು ಭಯೋತ್ಪಾದಕರೆಂದು ಜೈಲುಪಾಲು ಮಾಡಿದರ ವಿರುದ್ಧ ಎದೆಯನ್ನು, ದನಿಯನ್ನು ಎತ್ತಿದರು.
ಹಸಿದವರಿಗೆ ಶಾಂತಿ ಬೋಧನೆ ಮಾಡದೇ   ಸಂವಿಧಾನದ ಹಕ್ಕುಗಳನ್ನು ಬೋಧನೆ ಮಾಡಿದ್ದೇ ಪಾದ್ರಿ ಮಾಡಿದ ತಪ್ಪಾಗಿತ್ತು.
ಹೀಗಾಗಿ ಮೋದಿ ಸರ್ಕಾರ ಸ್ಟಾನ್ ಸ್ವಾಮಿಯವರನ್ನು ಕೇವಲ ಕಮ್ಯುನಿಸ್ಟ್ ಎಂದು ಮಾತ್ರವಲ್ಲದೆ ಮಾವೋಯಿಸ್ಟ್ ಭಯೋತ್ಪಾದಕನೆಂದೂ ಹಣೆಪಟ್ಟಿ ಕಟ್ಟಿ 2018ರಿಂದಲೇ ಬೇಟೆಯಾಡಲು ಪ್ರಾರಂಭಿಸಿತ್ತು.
 2019ರಲ್ಲಿ ಅವರ ಆಫ಼ೀಸು, ಕಚೇರಿಗಳ ಮೇಲೆ ದಾಳಿ ಮಾಡಿ ಬೀಭತ್ಸ ಸೃಷ್ಟಿಸಿತು.
ಕವಿಯೊಬ್ಬ  ಹಿಂದೊಮ್ಮೆ ಹೇಳಿದಂತೆ:
ಅವರು ಮುತ್ತಿಟ್ಟ ಹಸುಕಂದಮ್ಮಗಳ ಕೆನ್ನೆಯನ್ನು
ಕತ್ತರಿಸಿ
ಬಚ್ಚಿಟ್ಟ ರಹಸ್ಯಗಳಿಗೆ ಹುಡುಕಾಡಿದರು.
ಅಂತಿಮವಾಗಿ ಈ ಬಗೆಯ ಹೋರಾಟಗಾರರನ್ನು, ಈ ದೇಶದ ಜನಧ್ವನಿಗಳನ್ನು , ಅಂತಸ್ಸಾಕ್ಷಿಗಳನ್ನು ಅಣಗಿಸಲೆಂದೇ ರೂಪಿಸಲಾದ ಭೀಮ ಕೊರೆಗಾಂವ್ ಪ್ರಕರಣದಲ್ಲಿ ಮೋದಿಯನ್ನು ಕೊಲ್ಲಬಯಸಿದ ಭಯೋತ್ಪಾದಕ ಗುಂಪಿನವನೆಂಬ ಆರೋಪ ಹೊರಿಸಿದರು. ಕರಾಳ UAPA ಕಾಯಿದೆಯಡಿ ಜನರ ಪಾದ್ರಿ ನೈಜ ಕ್ರಿಸ್ತುರೂಪಿ 83 ವಯಸ್ಸಿನ ವಯೋವೃದ್ಧ ಸ್ಟಾನ್ ಸ್ವಾಮಿಯವರನ್ನು 2020ರಲ್ಲಿ ಅರೆಸ್ಟು ಮಾಡಿ ಜೈಲಿಗಟ್ಟಿತು.
ಆದರೆ,  ಈ ಬಗೆಯ ದಮನಕ್ಕೆ ಫಾದರ್ ಸ್ವಾಮಿಯವರು ಹೆದರಲಿಲ್ಲ.
ಅರೆಸ್ಟಾಗುವ ಕೆಲ ದಿನಗಳ ಮೊದಲು:
“ನಾನು ಇಂಥಾ ದಮನ ಎದುರಿಸುತ್ತಿರುವ ಮೊದಲಿಗನೂ ಅಲ್ಲ. ಕೊನೆಯವನೂ ಆಲ್ಲ. ಎಲ್ಲಿಯತನಕ ಈ ದೇಶದಲ್ಲಿ ನಿಜವಾದ ಜನತಂತ್ರ ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯತನಕ ಈ ದಮನ ದಬ್ಬಾಳಿಕೆ ತಪ್ಪುವುದಿಲ್ಲ. ಹೀಗಾಗಿ ಜನಹಿತವೇ ನಿಜಧರ್ಮ ಎಂದು ಭಾವಿಸಿರುವ ನಾನು ಇದಕ್ಕೆ ಹದರುವುದೂ ಇಲ್ಲ” ಎಂದು ನುಡಿದಿದ್ದರು.
ಸ್ಟಾನ್ ಸ್ವಾಮಿಯವರು 2020ರ ಅಕ್ಟೋಬರ್‌ನಲ್ಲಿ NIA ಬಂಧಿಸಿದಾಗ ಅವರಿಗೆ 83 ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಖಾಯಿಲೆಯಿತ್ತು. ನೀರು ಕುಡಿಯಲೂ ಆಗದಷ್ಟು ಕೈ ನಡುಗುತ್ತಿತ್ತು. ಹೀಗಾಗಿ ಕುಡಿಯಲಲು ಸ್ಟಾ ಒದಗಿಸಬೇಕೆಂದು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದರು. ಅವರು ನ್ಯಾಯಾಲಯದ ಅನುಮತಿ ಬೇಕೆಂದರು. ನ್ಯಾಯಾಲಯ ಅದಕ್ಕೆ NIA  ಗೆ ಏನಾದರೂ ಆಕ್ಶೇಪಣೆ ಇದೆಯೇ ಎಂದು ಕೇಳಿತು. NIA  ತನ್ನ ಆಕ್ಷೇಪಣೆ ಇಲ್ಲ ತಿಳಿಸಲು ಒಂದು ತಿಂಗಳು ತೆಗೆದುಕೊಂಡಿತು!!
 (ಇದೇ ಬಗೆಯ ಕಿರುಕುಳವನ್ನು ಎರಡು ವರ್ಷ ಮುಂಚೇ ಇದೇ ಕಾರಣಕ್ಕೆ ಹಾಗೂ ಇದೇ ಕೇಸಿನಲ್ಲಿ ಬಂಧನಕ್ಕೊಳಗಾಗಿದ್ದ ಪ್ರಖ್ಯಾತ ಕ್ರಾಂತಿಕಾರಿ ಕವಿ ವರವರರಾವ್ ಅವರಿಗೂ ನೀಡಿತ್ತು. ಇದೀಗ ಅವರು ಸಾವಿನ ದವಡೆಯಿಂದ ಪವಾಡ ಸದೃಶವಾಗಿ ಬಚಾವಾಗಿ ಆರು ತಿಂಗಳ ಮೆಡಿಕಲ್ ಜಾಮೀನಿನ ಮೇಲಿದ್ದಾರೆ. ಆರು ತಿಂಗಳ ನಂತರ???)
ಈ ರೀತಿ  ಭಾರತದ ನಿಜವಾದ ಅಂತಸ್ಸಾಕ್ಷಿಗಳಾದ ಸ್ಟಾನ್ಸ್ವಾಮಿ ಹಾಗೂ ಇನ್ನಿತರ ಹದಿನಾರು Prisoners Of Conscience ಗಳನ್ನು ನಿಧಾನವಾಗಿ ಕೊಂದುಹಾಕಬೇಕೆಂಬ ತೀರ್ಮಾನವನ್ನು ಸರ್ಕಾರ ಮಾಡಿದೆ.
ಸ್ವತಂತ್ರ ನ್ಯಾಯಾಂಗ ಪ್ರತ್ಯಕ್ಶವಾಗಿ ಮತ್ತು ಪರೋಕ್ಷವಾಗಿ ನಡುಹಗಲಲ್ಲಿ ಸರ್ಕಾರ ನಡೆಸುತ್ತಿರುವ ತಣ್ಣನೆಯ ಕೊಲೆಗಳಿಗೆ ನ್ಯಾಯದ ಮತ್ತು ಕಾನೂನಿನ ಒಪ್ಪಿಗೆಯನ್ನು ನೀಡುತ್ತಿದೆ.
ಪಾರ್ಕಿನ್ಸನ್ ಖಾಯಿಲೆಯ ಜೊತೆಗೆ ಕಳೆದ ಹಲವಾರು ತಿಂಗಳಿಂದ ಕೋವಿಡ್ ಖಾಲೆಯಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ವೃದ್ಧ ಪಾದ್ರಿ ಸ್ಟಾನ್ ಸ್ವಾಮಿಯವರಿಗೆ ಖಾಲೆಯಿದೆಯೆಂಬುದನ್ನೇ  NIA   ನಿರಾಕರಿಸುತ್ತಾ ಬಂದಿತು. ಬದಲಿಗೆ ತನ್ನದೇ ಆದ ವೈದ್ಯಕೀಯ ತನಿಖೆಯನ್ನೂ ಮಾಡಿಸದೆ ಕೊಲೆಗಡುಕ ನಿರ್ಲಕ್ಷ್ಯದಲ್ಲಿ ತಿಂಗಳುಗಳನ್ನು ಕಳೆಯಿತು.
ಜಾಮೀನು ಪಡೆದುಕೊಳ್ಳುವ  “ದುರುದ್ದೇಶದಿಂದ” ಪಾದ್ರಿ ಸ್ವಾಮಿ ನಾಟಕವಾಡುತ್ತಿದ್ದಾರೆಂದು ನ್ಯಾಯಾಲಯದಲ್ಲಿ ಸಬೂಬು ಹೇಳಿತು.
 ನ್ಯಾಯಾಲಯ ಕಣ್ಣುಮುಚ್ಚಿಕೊಂಡು ಅವರು  ಹೇಳಿದ್ದನ್ನೆಲ್ಲಾ ಒಪ್ಪಿಕೊಂಡಿತು. ಪದೇಪದೇ ಸ್ಟಾನ್ ಸ್ವಾಮಿಯವರ ಜಾಮೀನನ್ನು ನಿರಾಕರಿಸುತ್ತಲೇ ಹೋಯಿತು.
ಇತೀಚೆಗೂ ಕೂಡ 84 ವರ್ಷದ ರೋಗಗ್ರಸ್ಥ ಪಾದ್ರಿಯ ಜಾಮೀನು ಅರ್ಜಿಯನ್ನು ನಿರಾಕರಿಸುತ್ತಾ ಕೋರ್ಟು  ಹೇಳಿದ್ದೇನೆಂದರೆ:
 “ಆರೋಪಿಯ ಮೇಲಿರುವ ಆರೋಪದ ಗಂಭೀರತೆಯ ದೃಷ್ಟಿಯಿಂದ ನೋಡುವುದಾದರೆ,  ಖಾಯಿಲೆಯಿಂದ ಬಳಲುತ್ತಿದ್ದಾರೆಂದು ಹೇಳಲ್ಪಟ್ಟ ಆರೋಪಿಗೆ ಜಾಮೀನು ನೀಡುವುದಕ್ಕಿಂತ ಸಮಾಜದ ಸಾಮೂಹಿಕ ಹಿತಾಸಕ್ತಿಯು ಮಹತ್ವದ್ದೆಂದು ಕಂಡುಬರುತ್ತದೆ. ಆದ್ದರಿಂದ , ಜಾಮೀನು ನಿರಾಕರಿಸಲಾಗಿದೆ”*
  ಎಂದೇ ಹೇಳಿತ್ತು.
ಇದೇ ನ್ಯಾಯಾಲಯವೇ. ದೆಹಲಿ ಗಲಭೆಗಳಲ್ಲಿ ಹಿಂಸಾತ್ಮಕ ಪ್ರಚೋದನೆ ನೀಡಿದವರಿಗೆ, ಕಗ್ಗೊಲೆಗಳಿಗೆ ಭಾಗವಹಿಸಿದ ಕೊಲೆಗಡುಕರಿಗೆ ಮರುಮಾತಿಲ್ಲದೆ ಜಾಮೀನನ್ನು ನೀಡಿತ್ತು ಎಂಬುದನ್ನು ಮರೆಯಬಾರದು.
ಹೀಗಾಗಿ ಸ್ಟಾನ್ ಸ್ವಾಮಿಯವರದ್ದು ವಯೋಸಹಜ ಸಾವಲ್ಲ.
ಭಾರತ ಸರ್ಕಾರ ಹಾಗೂ ಭಾರತದ ನ್ಯಾಯಾಂಗಗಳು ಜೊತೆಸೇರಿ  ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ನಡುಹಗಲಿನಲ್ಲಿ ನಡೆಸಿದ ಸಾಂಸ್ಥಿಕ ಕಗ್ಗೊಲೆ.
ನಮ್ಮ ನಿಮ್ಮೆಲ್ಲರ ಹೆಸರಿನಲ್ಲಿ ನಡೆದ ಪ್ರಜಾತಂತ್ರದ, ಮನುಷ್ಯತ್ವದ ಕೊಲೆ.
ಹೀಗಾಗಿ ನಮ್ಮೆಲ್ಲರ ಕೈಗಳ ಮೇಲೂ ರಕ್ತವಿದೆ. ಇಡೀ ಗಂಗಾನದಿಯ ನೀರು ಈ  ರಕ್ತದ ಕಲೆಯನ್ನೂ ತೊಳೆಯಲಾರದು.
ಸಂತರು ಭಯೋತ್ಪಾದಕರಂತೆ ಕಾಣುವ ಈ ಸೈತಾನರ ರಾಜ್ಯದಲ್ಲಿ ಸಂತ ಸ್ಟಾನ್ ಸ್ವಾಮಿಯನ್ನು ಬಲಿತೆಗೆದುಕೊಂಡ ಮೋದಿ ಸರ್ಕಾರದ ಬಲಿಪಟ್ಟಿ  ಇನ್ನು ತುಂಬಾ ದೊಡ್ಡದಿದೆ..
ಭೀಮಾ ಕೋರೆಗಾಂವ ಪ್ರಕರಣದಲ್ಲಿ  ಸಂತ ಸ್ಟಾನ್ ಸ್ವಾಮಿಯವರ ಜೊತೆಸಹ ನಿಂದಿತರಾದ ಈ ದೇಶದ ಅಂತಸ್ಸಾಕ್ಷಿಗಳು… :
ಜನ ಕಲಾವಿದೆ – ಜ್ಯೋತಿ  ಜಘೋಬಾ ಜಗ್ತಾಪ್
ಜನ ಕಲಾವಿದ – ಸಾಗರ್ ತಾತ್ಯಾರಾಮ್ ಗೊರ್ಖೆ
ಜನ ಕಲಾವಿದ- ರಮೇಶ್ ಮುರಳೀಧರ್ ಗಾಯ್ಚೋರ್
ಸಾಮಾಜಿಕ ಕಾರ್ಯಕರ್ತ- ಸುಧೀರ್ ಧವಾಲೆ
ವಕೀಲ- ಸುರೇಂದ್ರ ಗಾಡ್ಲಿಂಗ್
ಯುವ ವಿದ್ವಾಂಸ- ಮಹೇಶ್  ರಾವತ್
ಅಧ್ಯಾಪಕಿ- ಶೋಮಾ ಸೆನ್
ವಿದ್ವಾಂಸ – ರೋನಾ ವಿಲ್ಸನ್
ಕಾರ್ಯಕರ್ತ – ಅರುಣ್ ಪೆರೀರಾ
ಪ್ರಖ್ಯಾತ  ವಕೀಲೆ- ಸುಧಾ ಭಾರದ್ವಾಜ್
ಪ್ರಖ್ಯಾತ ಹಿರಿಯ ಜನಕವಿ- ವರವರರಾವ್
ಪ್ರಖ್ಯಾತ ಕಾರ್ಯಕರ್ತ- ವೆರ್ನೆನ್ ಗೋನ್ಸಾಲ್ವೇಜ್
ಪ್ರಖ್ಯಾತ ವಿದ್ವಾಂಸ- ಆನಂದ್ ತೇಲ್ತುಂಬ್ಡೆ
ಮಾನವ ಹಕ್ಕು ಕಾರ್ಯಕರ್ತ- ಗೌತಮ್ ನವಲಾಖ
ಅಧ್ಯಾಪಕ- ಪ್ರೊ. ಹನಿ ಬಾಬು
ಮತ್ತು
ಹೃದಯವಂತರಾಗಿದ್ದರೆ ಮತ್ತು ಪ್ರಜಾತಂತ್ರವಾದಿಗಳಾಗಿದ್ದರೆ
ನಾನು …ಮತ್ತು ನೀವು ಕೂಡಾ ..
ಆದ್ದರಿಂದ,
ಮುಂದೊಂದು ಮಧ್ಯಾಹ್ನ ಇವರುಗಳನ್ನು  ಕಳೆದುಕೊಳ್ಳುವ ಮುಂಚೆ ಈಗಲಾದರೂ  ಎಚ್ಚೆತ್ತುಕೊಳ್ಳಬೇಕಿದೆ.
ಸ್ಟಾನ್ ಸ್ವಾಮಿ ಯವರನ್ನು ನೆನೆದು ಮೊಂಬತ್ತಿ ಹಚ್ಚುವ ಮುನ್ನ ಒಕ್ಕೊರಲಿನಿಂದ ಕೂಗಿ ಹೇಳಬೇಕಿದೆ
– UAPA ರದ್ದಾಗಲಿ
– ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಲ್ಲರೂ ಬೇಷರತ್ ಬಿಡುಗಡೆಯಾಗಲಿ..
– ಫಾದರ್ ಸ್ಟಾನ್ ಸ್ವಾಮಿಯವರಿಗೆ ಸೂಕ್ತ ವೈದ್ಯೋಪಚಾರ ನೀಡದ ಅಧಿಕಾರಿಗಳ  ಬಂಧನವಾಗಲಿ..
– ಸುಳ್ಳು ಕೇಸುಗಳನ್ನು ಹೇರುವ ಸರ್ಕಾರೀ ಅಧಿಕಾರಿಗಳನ್ನು ಬಂಧಿಸಿ ಮೊಕದ್ದಮೆ ಹೂಡಿ
– ಭೀಮಾ ಕೋರೆಗಾಂವ ನಲ್ಲಿ ಹಿಂಸಾಚಾರ ನಡೆಸಿದ ಮೋದಿಯ ಆಪ್ತರಾದ ಸಾಂಭಾಜಿ ಭಿಡೆ ಮತ್ತು ಮಿಲಿಂದ್ ಎಕ್ಬೋಟೆ ಗಳನ್ನೂ ಕೂಡಲೇ ಬಂಧಿಸಿ
–  ಜಾರ್ಖಂಡ್- ಛತೀಸ್ ಘಡ್ ಗಳನ್ನೂ ಒಳಗೊಂಡಂತೆ  ಈ ದೇಶದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ಲೂಟಿ ನಿಲ್ಲಲೇಬೇಕು
–  ಅರಣ್ಯ ಆದಿವಾಸಿಗಳದ್ದು .. ಕಾರ್ಪೊರೇಟ್ ಕಂಪೆನಿಗಳದ್ದಲ್ಲ.
– ಆದಿವಾಸಿಗಳ ಜಲ್-ಜಂಗಲ್-ಜಮೀನ್-ಅಧಿಕಾರ್ ಗಳಿಗಾಗಿ ಹೋರಾಡೋಣ
 ಈಗಲಾದರೂ ಒಂದುಗೂಡೋಣ …
ಒಕ್ಕೊರಲಿಂದ ದನಿ ಎತ್ತೋಣ …
ಸ್ಟಾನ್ ಸ್ವಾಮಿಯವರಿಗೆ ನಿಜವಾದ ನಮನ ಸಲ್ಲಿಸೋಣ
– ಶಿವಸುಂದರ್
(ಅಭಿಪ್ರಾಯಗಳು ಲೇಖಕರವು)
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights