ಸಂಪುಟ ಸವಾಲ್ : ಬಿಎಸ್ ಯಡಿಯೂರಪ್ಪ ಕೋಟಾದಡಿ ಯಾರಿಗೆಲ್ಲಾ ಸಚಿವ ಸ್ಥಾನ..?
ರಾಜ್ಯದಲ್ಲಿ ಸಂಪುಟ ರಚನೆ ತೀವ್ರ ಕುತೂಹಲ ಮೂಡಿಸಿದ್ದು, ನೂತನ ಸಿಎಂ ಬಸವರಾಜ್ ಬೊಮ್ಮಾಯಿಗೆ ಸದ್ಯ ಸಂಪುಟದ ಸವಾಲ್ ಎದುರಾಗಿದೆ. ಇದರ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೂಲಕ ಕೆಲವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಬಿಎಸ್ ಯಡಿಯೂರಪ್ಪ ಅವರ ಶ್ಯಾಡೋ ಎಂದು ಸುದ್ದಿಯಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಬಿಎಸ್ ಯಡಿಯೂರಪ್ಪ ಬೆನ್ನು ಬಿದ್ದಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಅಧಿಕಾರದಲ್ಲಿರುವಾಗ ವಲಸೆ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಿದ್ದರು. ಆದರೆ ಈ ಬಾರಿ ವಲಸೆ ಬಿಜೆಪಿಗರನ್ನು ಬೊಮ್ಮಾಯಿ ಸಂಪುಟದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಕೆಲವರಿಗೆ ಮಾತ್ರ ಸ್ಥಾನ ಸಿಗುವ ಮಾತುಗಳು ಕೇಳಿಬಂದಿವೆ. ಹೀಗಾಗಿ ವಲಸೆ ಬಿಜೆಪಿಗರಲ್ಲಿ ಸ್ಥಾನ ಕೈತಪ್ಪುವ ಆತಂಕ ಮನೆ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವಂತೆ ವಲಸೆ ಬಿಜೆಪಿಗರು ಯಡಿಯೂರಪ್ಪ ಅವರ ಬಳಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರೆ, ಇತ್ತ ಮೂಲ ಬಿಜೆಪಿಗರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ ಮಟ್ಟದಲ್ಲಿ ಭಾರೀ ಲಾಬಿ ನಡೆಸಿದ್ದಾರೆ.
ಈಗಾಗಲೇ ಸಿಎಂ ನೂತನ ಸಚಿವರ ಸಾಂಭವ್ಯ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದು ಹೈಕಮಾಂಡ್ ಒಪ್ಪಿಗೆ ಸೂಚಿಸಿದರೇ ಇಂದೇ ಸಂಪುಟ ರಚನೆಗೆ ದಿನಾಂಕ ಫಿಕ್ಸ್ ಆಗಲಿದೆ. ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ತೆಗೆದುಕೊಂಡು ಹೋದ ಸಂಭಾವ್ಯ ಸಚಿವರ ಪಟ್ಟಿಯಲ್ಲಿರುವ ಹೆಸರುಗಳು ಯಾರದ್ದು ಅನ್ನೋದು ತಿಳಿದು ಬಂದಿಲ್ಲ.
ಆದರೆ ಯಡಿಯೂರಪ್ಪ ಮನಸ್ಸು ಮಾಡಿದರೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಸಚಿವಾಕಾಂಕ್ಷಿಗಳು ಯಡಿಯೂರಪ್ಪ ಬೆನ್ನಿಗೆ ಬಿದ್ದಿದ್ದಾರೆ. ಆದರೆ ಬಿಎಸ್ ಯಡಿಯೂರಪ್ಪ ಕೋಟಾದಡಿ ಯಾರಿಗೆಲ್ಲಾ ಸಚಿವ ಸ್ಥಾನ..? ಯಡಿಯೂರಪ್ಪ ಆಯ್ಕೆಯನ್ನು ಹೈಕಮಾಂಡ್ ಪರಿಗಣಿಸುತ್ತಾ ಅನ್ನೋದು ಮಾತ್ರ ಸ್ಪಷ್ಟವಾಗಿಲ್ಲ.
ಮಂಗಳವಾರ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಚಿವರ ಪಟ್ಟಿ ಸಿದ್ಧಗೊಳ್ಳಲಿದ್ದು, ಬುಧವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. ಕೆಲ ಸಚಿವರು ಬುಧವಾರವೇ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಕೆಲ ಸಚಿವರು ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಹಳೆಯ ಸಚಿವರನ್ನು ಈ ಬಾರಿಯ ಸಂಪುಟದಲ್ಲಿ ಸೇರ್ಪಡೆಗೊಳಿಸಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.