ಖಡ್ಗ ಹಿಡಿದು ಟಿವಿ ಚಾನೆಲ್ ಕಚೇರಿಯಲ್ಲಿ ರೌಡಿಸಂ : ಸಿಸಿಟಿವಿಯಲ್ಲಿ ದೃಶ್ಯ ಸೆರೆ..!
ಖಡ್ಗವನ್ನು ಹಿಡಿದ ಅಪರಿಚಿತ ವ್ಯಕ್ತಿಯೊಬ್ಬ ಟಿವಿ ಚಾನೆಲ್ ಗೆ ನುಗ್ಗಿ ಪುಂಡಾಟ ಮೆರೆದಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಮಂಗಳವಾರ ಚೆನ್ನೈನ ಜನಪ್ರಿಯ ಚಾನೆಲ್ ಸತ್ಯಂ ಟಿವಿಯ ಪ್ರಧಾನ ಕಚೇರಿಗೆ ಪ್ರವೇಶಿಸಿದ ರೌಡಿ ಖಡ್ಗದಿಂದ ಚಾನೆಲ್ ನ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾನೆ. ಚಾನೆಲ್ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿ ಕತ್ತಿ ಮತ್ತು ಗುರಾಣಿಯನ್ನು ಹಿಡಿದು ಸಿಬ್ಬಂದಿಗಳನ್ನು ಹೆದರಿಸಿದ್ದಾನೆ.
“ಆರೋಪಿ ಕಾರ್ ಪಾರ್ಕಿಂಗ್ ಪ್ರದೇಶದ ಮೂಲಕ ಕಚೇರಿ ಆವರಣವನ್ನು ಪ್ರವೇಶಿಸಿದ್ದಾನೆ. ಗಿಟಾರ್ ಚೀಲದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರು” ಎಂದು ಚಾನೆಲ್ನ ವ್ಯವಸ್ಥಾಪಕ ನಿರ್ದೇಶಕ ಐಸಾಕ್ ಲಿವಿಂಗ್ಸ್ಟೋನ್ ತಿಳಿಸಿದ್ದಾರೆ.
”ಆತ ನನ್ನನ್ನು ಕೇಳಿಕೊಂಡು ಚಾನೆಲ್ ಗೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಸಿಬ್ಬಂದಿ ನನ್ನನ್ನು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿದ್ದಾರೆ. ನಾವು ಯಾವುದೇ ವ್ಯಕ್ತಿಯ ವಿರುದ್ಧ ಯಾವುದೇ ಸ್ಟೋರಿಯನ್ನು ಮಾಡಿಲ್ಲ. ಇದರ ಹಿಂದೆ ಏನಿದೆ ಎಂದು ನಮಗೆ ಗೊತ್ತಿಲ್ಲ” ಎಂದು ಲಿವಿಂಗ್ಸ್ಟೋನ್ ಅವರು ಹೇಳಿದರು.
ರಾಯಪುರಂ ಪೊಲೀಸ್ ಠಾಣೆಯ ಪೋಲಿಸರು ಆರೋಪಿಯನ್ನು ರಾಜೇಶ್ ಕುಮಾರ್ ಎಂದು ಗುರುತಿಸಿದ್ದು ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.
ಚೆನ್ನೈ ಪ್ರೆಸ್ ಕ್ಲಬ್ ದಾಳಿಯನ್ನು ಖಂಡಿಸಿದೆ. ಚೆನ್ನೈ ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಶ್ರೀ ಭಾರತಿ ತಮಿಳನ್, ಪತ್ರಕರ್ತರು ಮತ್ತು ಅವರ ಕಚೇರಿಗಳ ಸುರಕ್ಷತೆಗಾಗಿ ಕಾನೂನು ರೂಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.