ಮುಂದಿನ ದಿನಗಳಲ್ಲಿ ಹೊಡೆದಾಟವೂ ಆಗಬಹುದು; ಮುಸ್ಲಿಮರ ವಿರುದ್ದ ಹಿಂಸಾಚಾರಕ್ಕೆ ಕರೆ ಕೊಟ್ಟ ಶರಣ್‌ ಪಂಪ್‌ವೆಲ್‌

ಮುಸ್ಲಿಂ ನಾಯಕರೇ ಎಚ್ಚರವಹಿಸಿ, ನಿಮ್ಮ ಯುವಜನರಿಗೆ ಬುದ್ದಿ ಹೇಳಿ. ಲವ್‌ ಜಿಹಾದ್ದ್ ಪ್ರಕರಣಗಳು ಮುಂದುವೆರೆದರೆ ಬೀದಿಗಳಿದು ಹೋರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹೋರಾಟವೂ ಅಥವಾ ಹೊಡೆದಾಟವೂ ಆಗಬಹುದು ಎಂದು ಮಂಗಳೂರಿನ ಸಂಘಪರಿವಾರದ ನಾಯಕ ಶರಣ್‌ ಪಂಪ್‌ವೆಲ್‌ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ವ್ಯಾಪಕವಾಗಿ ಖಂಡನೆಗಳು ವ್ಯಕ್ತವಾಗುತ್ತಿದ್ದು, ಶರಣ್‌ ವಿರುದ್ದ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಶರಣ್‌, “ಮುಸ್ಲಿಂ ಸಮುದಾಯದ ನಾಯಕರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಸ್ಲಿಂ ಯುವಕರಿಗೆ ಬುದ್ದಿ ಹೇಳಬೇಕು, ಲವ್‌ ಜಿಹಾದ್ ಪ್ರಕರಣ ಮುಂದುವರೆದರೆ ಬೀದಿಗಿಳಿದು ನೇರವಾಗಿ ಅವರ ವಿರುದ್ದ ಹೋರಾಟ ಮಾಡುತ್ತೇವೆ. ಕರಾವಳಿಯಲ್ಲಿ ಶಾಂತಿಯಿರಬೇಕಾದರೆ ಮುಸ್ಲಿಂ ನಾಯಕರು ತಮ್ಮ ಯುವಕರಿಗೆ ಎಚ್ಚರಿಕೆ ಕೊಡುವಂತಹ ಕೆಲಸ ಮಾಡಬೇಕು. ಹಿಂದೂ ಯುವತಿಯರನ್ನು ಸೆಕ್ಸ್‌ ದಂಧೆ ಮತ್ತು ಡ್ರಗ್ಸ್‌ ದಂಧೆಗೆ ಬಳಸಿಕೊಳ್ಳುತ್ತಿದ್ದೀರಿ. ಇಡೀ ಮುಸ್ಲಿಂ ಸಮುದಾಯ ಭಯೋತ್ಪಾದನೆಗೆ ಬೆಂಬಲ ಕೊಡುತ್ತಿದ್ದೀರ ಎಂಬ ಸಂಶಯವಿದೆ” ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ಅದೇ ದಿನ ಮಾಧ್ಯಮಗಳಿಗೆ ನೀಡಿದ ಚುಟುಕು ಸಂದರ್ಶನಲ್ಲಿ, “ಮುಂದಿನ ದಿನಗಳಲ್ಲಿ ಹೋರಾಟವು ಆಗಬಹುದು ಅಥವಾ ಹೊಡೆದಾಟವು ಆಗಬಹುದು” ಎಂದು ಹಿಂಸಾಚಾರ ನಡೆಯುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಇದನ್ನೂ ಓದಿ: ‘ನ್ಯಾಯಾಧೀಶರು ಸರ್ವಜ್ಞರಲ್ಲ’ ಸಿ.ಟಿ. ರವಿ ಹೇಳಿಕೆ ವಿರುದ್ಧ ವಕೀಲರ ಸಂಘ ಆಕ್ಷೇಪ!

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶಗಳೆದ್ದಿದ್ದು, ಶರಣ್‌ ಪಂಪ್‌ವೆಲ್ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಗಳು ಕೇಳಿ ಬರುತ್ತಿದೆ. ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನವು, “ಮಾನ್ಯರೆ, ಈ ರಾಜ್ಯದ ಪ್ರಜೆಗಳಾದ ನಮಗೆ ಶಿಕ್ಷಣ, ಆಹಾರ, ಮಹಿಳೆಯರ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಆರೋಗ್ಯ ಬೇಕು. ನಾವು ಈ ಕೋಮುವಾದಿ ರಾಜಕೀಯವನ್ನು ತಿರಸ್ಕರಿಸುತ್ತೇವೆ. ಶರಣ್ ಪಂಪ್‌ವೆಲ್ ವಿರುದ್ಧ ನೀವು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ಮುಖ್ಯಮಂತ್ರಿ ಮತ್ತು ರಾಜ್ಯದ ಡಿಜಿಪಿಗೆ ಆಗ್ರಹಿಸಿದೆ.

ಪರ್ಯಾಯ ಕಾನೂನು ವೇದಿಕೆಯ ಸಂಚಾಲಕರಾದ ವಿನಯ್‌ ಶ್ರೀನಿವಾಸ್ ಅವರು, “ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕರ್ನಾಟಕದ ಡಿಜಿಪಿ ಅವರೇ, ಶರಣ್ ಪಂಪ್‌ವೆಲ್‌ ಸತ್ಯವನ್ನು ತಿರುಚುತ್ತಿದ್ದಾರೆ. ಅಲ್ಲದೆ ಮುಸ್ಲಿಮರ ವಿರುದ್ದ ಬಹಿರಂಗವಾಗಿ ಹಿಂಸೆಗೆ ಕರೆ ನೀಡುತ್ತಿದ್ದಾರೆ. ದಯವಿಟ್ಟು ಅವರ ವಿರುದ್ದ 153A, 295A, 505 (2) ಅಡಿಯಲ್ಲಿ ತಕ್ಷಣವೆ ಎಫ್ಐಆರ್ ಅನ್ನು ದಾಖಲಿಸಿರುವುದನ್ನು ಖಚಿತ ಪಡಿಸಿ” ಎಂದು ಕೇಳಿದ್ದಾರೆ.

ಶರಣ್ ಪಂಪ್‌ವೆಲ್ ಹಲವಾರು ಪಕ್ರರಣಗಳ ಆರೋಪಿಯಾಗಿದ್ದು, ಸದಾ ವಿವಾದಾತ್ಮಕವಾದ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಈಗಿನ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಯಡಿಯೂರಪ್ಪರ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದಾಗ ಶರಣ್ ಪಂಪ್‌ವೆಲ್ ಮೇಲಿನ ಎಲ್ಲಾ ಕೇಸುಗಳನ್ನು ತೆಗೆಯುವುದಾಗಿ ಭರವಸೆ ನೀಡಿದ್ದು ವಿಡಿಯೊದಲ್ಲಿ ದಾಖಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: ಶೃಂಗೇರಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳು ಸಂಘಪರಿವಾರದವರು!

ಇದೀಗ ಬೊಮ್ಮಾಯಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರದಂದು ಪ್ರಸ್ತುತ ರಾಜ್ಯದ ಗೃಹಮಂತ್ರಿಯಾಗಿರುವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರ ವಿರುದ್ದ ಇರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಕೇಳಿಕೊಂಡಿದ್ದಾರೆ.

ಬಿಜೆಪಿಯ ಹೊಸ ಸಂಪುಟ ರಚನೆಯಾಗುತ್ತಿದ್ದಂತೆ ಸಂಘಪರಿವಾರ ಮತ್ತು ಬಿಜೆಪಿಯ ಕಾರ್ಯಕರ್ತರ ವಿರುದ್ದದ ಪ್ರಕರಣಗಳನ್ನು ರದ್ದು ಪಡಿಸುವಂತೆ ಸಚಿವರೊಬ್ಬರೇ ಖುದ್ದಾಗಿ ಗೃಹ ಸಚಿವರಿಗೆ ಮನವಿ ಮಾಡುತ್ತಿದ್ದಾರೆ. ಇದರ ಜೊತೆಗೆ ಹಲವು ಪ್ರಕರಣಗಳ ಆರೋಪಿಯಾಗಿರುವ ಶರಣ್ ಪಂ‌ಪ್‌ವೆಲ್‌ ಬಹಿರಂಗವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ, ಇದು ಏನನ್ನು ಪ್ರತಿಬಿಂಬಿಸುತ್ತದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಗುಜರಾತ್ ಕೋಮು ಸಂಘರ್ಷ: 2 ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights