ಇಂಧನ ಬೆಲೆ ಏರಿಕೆ ವಿಚಾರ : ಸಚಿವ ಕೆ.ಸಿ.ನಾರಾಯಣಗೌಡ ಉಡಾಫೆ ಹೇಳಿಕೆ..!
ದಿನಕಳೆದಂತೆ ಪೆಟ್ರೋಲ್, ಡಿಸೇಲ್ ಅಡಿಗೆ ಅನಿಲದ ಬೆಲೆ ಏರಿಕೆಯಾಗುತ್ತಿದ್ದ ಈ ಬಗ್ಗೆ ಪ್ರಶ್ನಿಸಿದಕ್ಕೆ ಸಚಿವ ಕೆ.ಸಿ ನಾರಾಯಣ ಗೌಡ ಉಡಾಫೆ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ,” ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೆಲೆ ಏರಿಕೆಯಿಂದಾಗಿ ಬೀದಿಗೆ ಬಂದಿಲ್ಲ. ಬೀದಿಗೆ ಬಂದಿರುವವರು ರಾಜಕಾರಣಿಗಳು” ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು,’ಇಂಧನ ಬೆಲೆ, ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಕೆ ಬಗ್ಗೆ ಎಲ್ಲಿರಿಗೂ ಗೊತ್ತಿದೆ. ಆದರೆ ಇಲ್ಲಿ ರಾಜಕಾರಣ ಮಾಡಲಾಗುತ್ತಿದೆ’ ಎಂದರು.
ಒಂದು ಡ್ರಾಮಾ ನಡೆಯುತ್ತಿದೆ. ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆ ಆಗಿರಲಿಲ್ವಾ? ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ಸಿಲಿಂಡರ್, ಅಡುಗೆ ಎಣ್ಣೆ, ದಿನಸಿ, ಪೆಟ್ರೋಲ್, ವಿದ್ಯುತ್… ಹೀಗೆ ದಿನನಿತ್ಯದ ಬದುಕಿನ ಅಗತ್ಯಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣರಾಗಿದ್ದಾರೆ. ಒಂದು ಕಡೆ ಕೋವಿಡ್ನಿಂದಾಗಿ ಸರಿಯಾಗಿ ಸಂಬಳ, ದಿನಗೂಲಿ ಇಲ್ಲದೇ ಮನೆಯಲ್ಲಿ ಇದ್ದದ್ದರಲ್ಲೇ ಒಂದೊತ್ತಿನ ಹೊಟ್ಟೆ ತುಂಬಿಸಿಕೊಂಡಿದ್ದ ಜನರ ಬದುಕಲ್ಲಂತೂ ಈ ಬೆಲೆ ಏರಿಕೆ ಸಾವು ನೋವಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ.