ಸಚಿವ ಡಾ. ಸುಧಾಕರ್ ಬಹಳ ಬುದ್ಧಿವಂತರು; ಬಹಳ ಬುದ್ಧಿವಂತರಾದರೂ ನಮಗೆ ಸಮಸ್ಯೆಯೇ: ಸಿಎಂ ಬೊಮ್ಮಾಯಿ
ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಬಹಳ ಬುದ್ಧಿವಂತರು. ಬಹಳ ಬುದ್ಧಿವಂತರಾದರೂ ನಮಗೆ ಸಮಸ್ಯೆಯೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವ ಸುಧಾಕರ್ ಕಾಲೆಳೆದಿದ್ದಾರೆ.
ವಿಧಾನಸೌಧದಲ್ಲಿ ನಡೆದ ಆರೋಗ್ಯ ಇಲಾಖೆಯ 120 ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ 1 ಲಕ್ಷ ಜನರಿಗೆ ಒಂದು ಆಂಬುಲನ್ಸ್ ರೀತಿಯಲ್ಲಿ ಸೇವೆ ಲಭ್ಯವಿದೆ. ಅದನ್ನು ಮುಂದಿನ ದಿನಗಳಲ್ಲಿ 40 ಸಾವಿರ ಜನರಿಗೆ ಒಂದು ಆಂಬುಲೆನ್ಸ್ ನಂತೆ ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಅದೇ ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವರು ಬಹಳ ಬುದ್ಧಿವಂತರು. ಬಹಳ ಬುದ್ಧಿವಂತಿಕೆ ಕೂಡ ನಮಗೆ ಸಮಸ್ಯೆಯಾಗುತ್ತದೆ. ಕಾರಣ, ಮುಂದಿನ ದಿನಗಳಲ್ಲಿ 40 ಸಾವಿರ ಜನರಿಗೆ ಒಂದು ಆಂಬುಲೆನ್ಸ್ ನಂತೆ ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳುವ ಮೂಲಕ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನಕ್ಕೆ ಪರೋಕ್ಷ ಪ್ರಸ್ತಾಪ ಇಟ್ಟಿದ್ದಾರೆ. ಹೀಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ಮುಂಬರುವ ದಿನಗಳಲ್ಲಿ ಆರೋಗ್ಯ ಇಲಾಖೆಯಲ್ಲಿಯೂ ಸಾಕಷ್ಟು ಬದಲಾವಣೆ ತರಲಾಗುವುದು ಎಂದು ಅವರು ಹೇಳಿದ್ದಾರೆ.