ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರ ಪ್ರತಿಭಟನೆ ಕೂಗು : ಬಸ್ ಸಂಚಾರ ಬಂದಾಗುವ ಸಾಧ್ಯತೆ..!
ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗುವ ಸಾಧ್ಯತೆ ಇದ್ದು ಬಸ್ ಸಂಚಾರ ಬಂದ್ ಆಗುವ ಲಕ್ಷಣಗಳು ದಟ್ಟವಾಗಿವೆ.
ಈ ಹಿಂದೆ ಸಾರಿಗೆ ನೌಕರರು ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ದೀರ್ಘಾವಧಿ ಮುಷ್ಕರ ನಡೆಸಿದ್ದರು. ಸರ್ಕಾರದ ಮಾತಿಗೂ ಜಗ್ಗದ ನೌಕರರು ಕಡೆಗೆ ಕೋರ್ಟ್ ಮಧ್ಯಪ್ರವೇಶಕ್ಕೆ ಬಗ್ಗಿ ಕೆಲಸದಲ್ಲಿ ತೊಡಗಿದ್ದರು. ಮೂರು ತಿಂಗಳು ಕಳೆದ ಬಳಿಕ ಇದೀಗ ಮತ್ತೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಕಡೆಯಿಂದ ಫ್ರೀಡಂ ಪಾರ್ಕ್ನಲ್ಲಿ ಸೆಪ್ಟೆಂಬರ್ 20ರಂದು ಧರಣಿ ನಡೆಸಲು ನಿರ್ಧರಿಸಲಾಗಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಧರಣಿಯಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಸೋಮವಾರ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ.
ಏಪ್ರಿಲ್ 2021ರ ಮುಷ್ಕರದ ವೇಳೆ ಸೇವೆಯಿಂದ ವಜಾ ಮಾಡಿರುವ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಿಸಬೇಕು ಎಂದು ಒತ್ತಾಯಿಸಿ ಜೊತೆಗೆ ಟ್ರೈನಿ ನೌಕರರನ್ನು ಸೇವೆಯಿಂದ ಕೈಬಿಡಲಾಗಿದ್ದು, ಎಲ್ಲರನ್ನೂ ಪುನರ್ ನೇಮಕ ಮಾಡುವಂತೆ ಮತ್ತು ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಮಾಡಿರುವ ನೌಕರರನ್ನು ತೆರವು ಮಾಡಬೇಕು ಹಾಗೂ ಎಲ್ಲ ಶಿಸ್ತು ಕ್ರಮಗಳನ್ನು ರದ್ದು ಮಾಡುವಂತೆ ಒತ್ತಾಯಿಸಲು ನಿರ್ಧರಿಸಿಲಾಗಿದೆ.
ಜೊತೆಗೆ ಮುಷ್ಕರದ ಅವಧಿಯಲ್ಲಿ ಕಾರ್ಮಿಕರಿಗೆ ಅಪಾದನಾ ಪತ್ರ ನೀಡಲಾಗುತ್ತಿದೆ. ಇದನ್ನು ರದ್ದುಪಡಿಸಿ ಎಲ್ಲ ಶಿಸ್ತು ಪ್ರಕ್ರಿಯೆಗಳನ್ನ ನಿಲ್ಲಿಸುವಂತೆ ಒತ್ತಾಯ ಹೇರಲಾಗುತ್ತಿದೆ. ವೇತನಬಡ್ತಿ ತಡೆ ಹಿಡಿಯಲಾಗಿದ್ದು, ಅದನ್ನು ಸರಿಪಡಿಸುವ ಹಾಗೂ ದಂಡ ವಿಧಿಸುವುದನ್ನು ನಿಲ್ಲಿಸಬೇಕು. ಮಾತ್ರವಲ್ಲದೇ ಸಿಬ್ಬಂದಿಯ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಿದ್ದಾರೆ.