ಸಿಎಂ ಆದಿತ್ಯನಾಥ್ ಭೇಟಿ ನೀಡಿದ್ದ ಸ್ಥಳಗಳನ್ನು ಶುದ್ದೀಕರಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡಿದ್ದ ಸಂಭಾಲ್ ಜಿಲ್ಲೆಯಲ್ಲಿ ಹಲವು ಸ್ಥಳಗಳನ್ನು ಸಮಾಜವಾದಿ ಪಕ್ಷದ ಯುವ ಕಾರ್ಯಕರ್ತರು ‘ಗಂಗಾಜಲ’ ಸಿಂಪಡಿಸುವ ಮೂಲಕ ಶುದ್ದೀಕರಿಸಿದ್ದಾರೆ.
ಕಾರ್ಯಕರ್ತರು ಬುಧವಾರ ಶುದ್ಧೀಕರಣ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
ನಂತರ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಸಮಾಜವಾದಿ ಪಕ್ಷದ ಯುವಜನ ಸಭಾ ರಾಜ್ಯಾಧ್ಯಕ್ಷ ಭಾವೇಶ್ ಯಾದವ್ ಮತ್ತು 8-10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಗುರುವಾರ ತಿಳಿಸಿದ್ದಾರೆ.
275 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಕಾರ್ಯಕ್ರಮದಲ್ಲಿ ಸಿಎಂ ಆದಿತ್ಯಾನಾಥ್ ಅವರು ಮಂಗಳವಾರ ಸಂಭಾಲ್ ಜಿಲ್ಲೆಯ ಕೈಲಾ ದೇವಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.
ಅವರ ಭೇಟಿಯ ಒಂದು ದಿನದ ನಂತರ, ಯಾದವ್ ಮತ್ತು ಎಸ್ಪಿ ಯುವಜನ ಸಭಾದ ಕಾರ್ಯಕರ್ತರು ಗಂಗಾ ನದಿಯ ನೀರನ್ನು ತಂದು ಸಿಂಪಡಿಸುವ ಮೂಲಕ ಆದಿತ್ಯಾನಾಥ್ ಸಾರ್ವಜನಿಕ ಸಭೆ ನಡೆದ ಸ್ಥಳ ಮತ್ತು ಹೆಲಿಪ್ಯಾಡ್ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ್ದಾರೆ.
ಶುದ್ದೀಕರಣದ ವೇಳೆ ಮಾತನಾಡಿದ ಯಾದವ್, ಆದಿತ್ಯನಾಥ್ ಮಾಲಾ ಕೈಲಾ ದೇವಸ್ಥಾನಕ್ಕೆ ಭೇಟಿ ನೀಡದೇ “ಅವಮಾನ” ಮಾಡಿದ್ದಾರೆ. ಹೀಗಾಗಿ ಅವರು ಭೇಟಿ ನೀಡಿದ್ದ ಸ್ಥಳಗಳನ್ನು ಶುದ್ಧೀಕರಣ ಮಾಡುವ ಅಭಿಯಾನವನ್ನು ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಯಾದವ್ ಅವರ ಈ ನಡೆಯಿಂದಾಗಿ ಧಾರ್ಮಿಕ ಮುಖಂಡರೂ ಮತ್ತು ಆದಿತ್ಯಾನಾಥ್ ಅವರ ಅನುಯಾಯಿಗಳು ಅಸಮಾಧಾನಗೊಂಡಿದ್ದಾರೆ ಎಂದು ಸಂಭಾಲ್ ನಿವಾಸಿಯೊಬ್ಬರು ಬಹಜೋಯ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲರಾದ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯ ಅಧಿಕೃತ ನಿವಾಸ ಲಖನೌದ ಕಾಳಿದಾಸ್ ಮರ್ಗ್ನ ಬಂಗಲೆಯನ್ನು ಖಾಲಿ ಮಾಡಿದರು. ಈ ವೇಳೆ ಆ ಬಂಗಲೆಯನ್ನು ಯೋಗಿ ಆದಿತ್ಯನಾಥ್ಗಾಗಿ ಸಿದ್ಧಗೊಳಿಸಲು ದಾರ್ಶನಿಕರು ಮತ್ತು ಪುರೋಹಿತರು “ಶುದ್ಧೀಕರಣ” ಮಾಡಿದ್ದರು ಎಂದು ಯಾದವ್ ಆಗಾಗ್ಗೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತದ ಕೃಷಿ ಕ್ಷೇತ್ರದ ಮೇಲೆ ಅಮೆಜಾನ್, ಮೈಕ್ರೋಸಾಫ್ಟ್ ಆಕ್ರಮಣ; ಅಮೆರಿಕಾದಲ್ಲಾಗಿದ್ದು, ಭಾರತದಲ್ಲಾಗುವುದಿಲ್ಲವೇ?