ಪ್ರಾಣಕ್ಕೆ ಕುತ್ತು ತಂದ ಬರ್ತ್ ಡೇ ಪಾರ್ಟಿ : ಸೆಲ್ಫಿ ಕ್ರೇಜ್ ನಲ್ಲಿ ಸ್ನೇಹಿತ ಸಾವು!
ಬೆಂಗಳೂರಿನ ನಿವಾಸಿಯೋರ್ವ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ದುರ್ಘಟನೆ ಚಿಕ್ಕಬಳ್ಳಪುರ ಜಕ್ಕಲುಮಡು ಹಿನ್ನೀರಿನಲ್ಲಿ ನಡೆದಿದೆ.
ಬೆಂಗಳೂರಿನ ಸುಂಕದಕಟ್ಟೆ ನಿವಾಸಿಯಾಗಿದ್ದ ಇಂಜಿನಿಯರ್ ರೋಹಿತ್ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಸಂತೋಷ್ ಎಂಬಾತನ ಬರ್ತ್ ಡೇ ಪಾರ್ಟಿ ಮಾಡಲು ಚಿಕ್ಕಬಳ್ಳಪುರ ಜಕ್ಕಲುಮಡು ಹಿನ್ನೀರಿಗೆ ಹೋಗಿದ್ದಾನೆ. ಸ್ನೇಹಿತರೆಲ್ಲಾ ಸೇರಿ ಗುಂಡು-ತುಂಡು ಪಾರ್ಟಿಯಲ್ಲಿ ಮಿಂದೆದ್ದಿದ್ದಾರೆ. ಬಳಿಕ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮರವನ್ನೇರಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮಂಗನಾಟ ಆಟಿದ್ದಾರೆ. ಬಳಿಕ ರೋಹಿತ್ ಈಜುಬಾರದೇ ಹೋದರೂ ಹಿನ್ನೀರಿಗೆ ಇಳಿದಿದ್ದಾನೆ. ಕುಡಿದ ಅಮಲಿನಲ್ಲಿದ್ದ ರೋಹಿತ ತನ್ನ ಸ್ನೇಹಿತರಂತೆ ಈಜಲು ನೀರಿಗಿಳಿದಿದ್ದಾನೆ.
ರೋಹಿತ್ ಗೆ ಈಜಲು ಬಾರದೇ ಇರುವುದನ್ನ ಕಂಡು ಈಶ್ವರ್ ಹಾಗೂ ಸ್ನೇಹಿತರು ಆತನನ್ನು ದಡಕ್ಕೆ ಕರೆತಂದಿದ್ದಾರೆ. ಬಳಿಕ ರೋಹಿತ್ ಯಾವಾಗ ನೀರಿಗಿಳಿದಿದ್ದಾನೆ ಎಂಬುವುದು ಸ್ನೇಹಿತರಿಗೆ ಗೊತ್ತೇ ಇಲ್ಲ. ಮೋಜು ಮಸ್ತಿಯಲ್ಲಿ ಮೈಮರೆತ ಸ್ನೇಹಿತರಿಗೆ ರೋಹಿತ್ ಮುಳುಗಿದ್ದು ಗೊತ್ತೇ ಆಗಿಲ್ಲ. ಕೊಂಚ ಸಮಯದ ಬಳಿಕ ರೋಹಿತ್ ನನ್ನು ಹುಡುಕಿದ್ದಾರೆ. ಗಾಬರಿಗೊಂಡು ಅಕ್ಕಪಕ್ಕದ ಜನರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಆದರೂ ರೋಹಿತ್ ಪತ್ತೆ ಆಗಿಲ್ಲ. ಹತ್ತಿರದಲ್ಲಿ ಪೊಲೀಸ್ ಠಾಣೆಯೂ ಇಲ್ಲದೇ ರೋಹಿತ್ ಪತ್ತೆ ಹಚ್ಚುವುದು ಕೊಂಚ ತಡವಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ರೋಹಿತ್ ನನ್ನು ಪತ್ತೆ ಹಚ್ಚುವ ಹೊತ್ತಿಗಾಗಲೇ ರೋಹಿತ್ ಸಾವನ್ನಪ್ಪಿದ್ದಾನೆ. ಮೋಜು ಮಸ್ತಿಯಲ್ಲಿ ಮೈಮರೆತು ಸೆಲ್ಫಿಗೀಳಿಗೆ ಬಿದ್ದ ಸ್ನೇಹಿತರು ಸ್ನೇಹಿತನನ್ನೇ ಕಳೆದುಕೊಂಡಿದ್ದಾರೆ
ಕಷ್ಟಪಟ್ಟು ಸಾಕು ಕೂಲಿ ಕೆಲಸ ಮಾಡಿ ಮಗನನ್ನು ಓದಿಸಿ ಬೆಳಸಿದ ಪೋಷಕರು ಕೈಗೆ ಬಂದ ಮಗನನ್ನು ಕಳೆದುಕೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.