ಸಾರಿಗೆ ಸಚಿವರ ತವರು ಕ್ಷೇತ್ರದಲ್ಲಿ ಸಾರಿಗೆ ವ್ಯವಸ್ಥೆ : ಸ್ಥಳೀಯರಲ್ಲಿ ಸಂತಸ!
ಸಾರಿಗೆ ಸಚಿವರ ತವರು ಕ್ಷೇತ್ರದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದರ ಬಗ್ಗೆ ಕಳೆದ 2 ದಿನಗಳ ಹಿಂದೆ ಸುದ್ದಿ ಪ್ರಸಾರ ಮಾಡಲಾಗಿದ್ದರ ಬೆನ್ನಲ್ಲೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಹೌದು… ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲುಕು ಕಣಕುಪ್ಪೆದಲ್ಲಿ ಜನ ಸಾರಿಗೆ ಬಸ್ ಇಲ್ಲದೇ ಮೂರು ನಾಲ್ಕು ಕಿ.ಮೀ ವರೆಗೂ ನಡೆದುಕೊಂಡು ಹೋಗುವ ಪರಿಸ್ಥಿತಿ ಇತ್ತು.
ಕೊರೊನಾದಿಂದಾಗಿ ಬಂದ್ ಆಗಿದ್ದ ಶಾಲಾ ಕಾಲೇಜುಗಳನ್ನು ತೆರೆಯಲಾಗಿದ್ದು ವಿದ್ಯಾರ್ಥಿಗಳು ಬಸ್ ಇಲ್ಲದೇ ಶಾಲಾ-ಕಾಲೇಜುಗಳಿಗೆ ನಾಲ್ಕಾರು ಕಿ.ಮೀ ನಡೆದುಕೊಂಡೇ ಹೋಗಬೇಕಾಗಿತ್ತು. ಸ್ವಂತ ವಾಹನ ಅಥವಾ ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿಕೊಂಡು ಹೋಗುವ ಸ್ಥಿತಿ ಗ್ರಾಮಸ್ಥರು ಅನುಭವಿಸುತ್ತಿದ್ದರು. ಬಸ್ ಗಾಗಿ ಮನವಿ ಇಟ್ಟರೂ ಈವರೆಗೆ ಪ್ರಯೋಜನವಾಗಿಲ್ಲವಾದ್ರಿಂದ ಸರ್ಕಾರ, ಸಚಿವ ಹಾಗೂ ಜಿಲ್ಲಾಡಳಿತದ ವಿರುದ್ಧ ಜನ ಕಿಡಿ ಕಾರಿದ್ದರು.
ಈ ಬಗ್ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡಿದೆ. ದಿನನಿತ್ಯ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗುತ್ತಿದ್ದಾರೆ.