ರಾಯಚೂರನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಲು ಕರ್ನಾಟಕ ಬಿಜೆಪಿ ಶಾಸಕರ ಒತ್ತಾಯ!
ರಾಯಚೂರು ಜಿಲ್ಲೆಯನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕು ಎಂದು ರಾಯಚೂರಿನ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಸಚಿವ ಪ್ರಭು ಚೌಹಾಣ್ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ಉತ್ತರ ಕರ್ನಾಟಕ ಭಾಗದಲ್ಲಿರುವ ಹುಬ್ಬಳ್ಳಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳನ್ನು ಅಭಿವೃದ್ದಿಪಡಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಆದರೆ, ರಾಯಚೂರ ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ರಾಯಚೂರನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಿ ಎಂದು ಒತ್ತಾಯಿಸಿದ್ದಾರೆ ಎಂದು TNIE ವರದಿ ಮಾಡಿದೆ.
ಈ ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, ರಾಯಚೂರು ತೆಲಂಗಾಣದೊಂದಿಗೆ ವಿಲೀನಗೊಂಡರೆ ಈ ಪ್ರದೇಶ ಪ್ರಗತಿ ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಪಾಟೀಲ್ ಮಾತನಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರ ವಿಡಿಯೋವನ್ನು ರೀಟ್ವೀಟ್ ಮಾಡಿದ ಎಂಎಯುಡಿ ಸಚಿವ ಕೆಟಿ ರಾಮರಾವ್, “ಗಡಿಯಾಚೆಗಿನಿಂದ ತೆಲಂಗಾಣಕ್ಕೆ ಮಾನ್ಯತೆ; ಕರ್ನಾಟಕ ಬಿಜೆಪಿ ಶಾಸಕರು ರಾಯಚೂರು ಅನ್ನು ತೆಲಂಗಾಣದಲ್ಲಿ ವಿಲೀನಗೊಳಿಸಬೇಕು ಎಂದಿದ್ದಾರೆ. ಅವರ ಸಲಹೆಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
https://twitter.com/KTRTRS/status/1447523399291396097?s=20
ಈ ಹಿಂದೆ, ಮಹಾರಾಷ್ಟ್ರದ ಹಲವು ಗ್ರಾಮಗಳು ಕೂಡ ತೆಲಂಗಾಣದೊಂದಿಗೆ ವಿಲೀನಗೊಳ್ಳಬೇಕೆಂದು ಬೇಡಿಕೆ ಇಟ್ಟಿದ್ದವು. ಇದೀಗ ರಾಯಚೂರಿನ ಹಲವಾರು ಜನರು ತೆಲಂಗಾಣದೊಂದಿಗೆ ವಿಲೀನಗೊಳ್ಳಲು ಬಯಸಿದ್ದಾರೆ. ಇದರಿಂದ ಅವರು ರೈತ ಬಂಧು, ರೈತ ಬಿಮಾ, ಆಸರಾ ಪಿಂಚಣಿ, ಕಲ್ಯಾಣ ಲಕ್ಷ್ಮಿ ಮತ್ತು ಇತರ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಕೆಟಿ ರಾಮರಾವ್ ಅವರ ಟ್ವೀಟ್ಗೆ ಹಲವು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಬೊಕ್ಕಸವೇ ಖಾಲಿ ಆಗುತ್ತಿದೆ: ಆರ್ ಅಶೋಕ್