ರಜನಿಕಾಂತ್ ಜೊತೆ ನಟಿಸಿದ್ದ ಸಿನಿಮಾದಲ್ಲಿ ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಲು ಹೇಳಿದ್ದರು ಸುದೀಪ್!
ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಸಿನಿಮಾ ಒಂದರಲ್ಲಿ ನಟಿಸಿದ್ದ ಕಿಚ್ಚ ಸುದೀಪ್, ಆ ಸಿನಿಮಾದಲ್ಲಿ ತಾವು ಅಭಿನಯಿಸಿರುವ ದೃಶ್ಯಗಳನ್ನು ತೆಗೆದು ಹಾಕುವಂತೆ ಸ್ವತಃ ಸುದೀಪ್ ಅವರೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಅಭಿನಯಿಸಿದ್ದ ಸುದೀಪ್, ಸಿನಿಮಾ ಚಿತ್ರೀಕರಣ ಮುಗಿದ ನಂತರ, ಸಿನಿಮಾದಲ್ಲಿ ತಮ್ಮ ದೃಶ್ಯಗಳನ್ನು ತೆಗೆದುಹಾಕುವಂತೆ ನಾನೇ ಹೇಳಿದ್ದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುದೀಪ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸುದೀಪ್ ಅವರಿಗೆ ಹಲವು ಫೋಟೋಗಳನ್ನು ತೋರಿಸಿ ಅದರ ಬಗ್ಗೆ ಮಾತನಾಡಲು ಕೇಳಲಾಗಿತ್ತು. ಈ ವೇಳೆ, ರಜನಿಕಾಂತ್ ಅವರ ಜೊತೆ ಇರುವ ಒಂದು ಫೋಟೋವನ್ನು ನೋಡಿ, ಆ ಬಗ್ಗೆ ಮಾತನಾಡಿದ ಸುದೀಪ್, ಲಿಂಗ ಸಿನಿಮಾದಲ್ಲಿ ರಜನಿಕಾಂತ್ ಅವರ ಜೊತೆ ತಾವು ಕೂಡ ಒಂದು ದೃಶ್ಯದಲ್ಲಿ ನಟಿಸಿದ್ದರ ಬಗ್ಗೆ ಮಾತನಾಡಿದ್ದಾರೆ.
ಆದರೆ ಆ ದೃಶ್ಯ ನೋಡಿದಾಗ, ಸಿನಿಮಾದಲ್ಲಿ ಆ ದೃಶ್ಯದ ಅವಶ್ಯಕತೆ ಇಲ್ಲ, ಸಿನಿಮಾ ಕಥೆಗೂ ಆ ದೃಷ್ಯಕ್ಕೂ ಸಂಬಂಧ ಇರುವಂತೆ ಕಾಣಲಿಲ್ಲ ಎಂದೆನಿಸಿತು. ಹಾಗಾಗಿ ಸಾಧ್ಯವಾದಲ್ಲಿ ಆ ದೃಶ್ಯಕ್ಕೆ ಕತ್ತರಿ ಹಾಕಲು ನಿರ್ದೇಶಕರಿಗೆ ನಾನೇ ತಿಳಿಸಿದ್ದೆ ಎಂದು ಸುದೀಪ್ ಹೇಳಿದ್ದಾರೆ.
ಕೆಲ ದಿನಗಳ ನಂತರ ಸ್ವತಃ ರಜನಿಕಾಂತ್ ಅವರೇ ಸುದೀಪ್ ಅವರಿಗೆ ಫೋನ್ ಮಾಡಿ, ನೀವು ಹೇಳಿದ್ದು ಸರಿಯಾಗಿದೆ. ಸಿನಿಮಾ ಕಥೆಗೂ ದೃಶ್ಯಕ್ಕೂ ಸಂಬಂಧ ಇರುವ ಹಾಗೆ ಕಾಣಿಸುತ್ತಿಲ್ಲ, ದೃಶ್ಯವನ್ನು ಕತ್ತರಿಸಿದರೆ ನಿಮಗೆ ಬೇಸರ ಇಲ್ಲವೇ ಎಂದು ಕೇಳಿದ್ದರು. ನಾನು ಸಂತೋಷವಾಗಿಯೇ ಅದಕ್ಕೆ ಒಪ್ಪಿಕೊಂಡೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಅಪ್ಪು ನೆನಪಿನಲ್ಲಿ ಒಂದುಗೂಡಲಿದೆ ದಕ್ಷಿಣ ಭಾರತೀಯ ಚಿತ್ರರಂಗ; ನ. 16 ರಂದು ‘ಪುನೀತ್ ನಮನ’ ಕಾರ್ಯಕ್ರಮ