ರೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ; ಸಾಮೂಹಿಕ ಅತ್ಯಾಚಾರದ ಶಂಕೆ
ರೈಲಿನ ಕೋಚ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ನವೆಂಬರ್ 4 ರಂದು ಗುಜರಾತ್ನ ವಲ್ಸಾದ್ನಲ್ಲಿ ಪತ್ತೆಯಾಗಿತ್ತು. ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಸಾವನ್ನಪ್ಪಿದ ಯುವತಿಯ ಮೇಲೆ ವಡೋದರಾದಲ್ಲಿ ಸಾಮೂಹಿಕ ಅತ್ಯಾಚಾರ ಎಸಲಾಗಿದೆ ಎಂಬ ಸಂಶಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
18 ವರ್ಷದ ಯುವತಿಯೊಬ್ಬರು ಕೆಲಸ ಮುಗಿಸಿ ಬರೋಡದ ತಮ್ಮ ಹಾಸ್ಟೆಲ್ಗೆ ಹಿಂತಿರುಗುತ್ತಿದ್ದಾಗ ವಡೋದರಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಸಂಶಯವಿದೆ ಎಂದು ವಡೋದರಾದ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಗುಜರಾತ್ನ ನವಸಾರಿ ಮೂಲದ ಕಾಲೇಜು ವಿದ್ಯಾರ್ಥಿನಿಯು ವಡೋದರಾದ ಎನ್ಜಿಒದಲ್ಲಿ ಕೆಲಸ ಮಾಡುತ್ತಿದ್ದರು. ಬರೋಡದ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು. ನವೆಂಬರ್ 4 ಈಕೆಯ ಮೃತದೇಹ ವಲ್ಸಾದ್ನಲ್ಲಿ ಗುಜರಾತ್ ಕ್ವೀನ್ ಎಕ್ಸ್ಪ್ರೆಸ್ನ ಕೋಚ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರೈಲ್ವೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ; ಐಐಟಿ ಪದವೀಧರನ ಬಂಧನ
ವಡೋದರಾದ ಆಟೋ ರಿಕ್ಷಾದಲ್ಲಿ ಇಬ್ಬರು ಆರೋಪಿಗಳು ಆಕೆಯನ್ನು ಅಪಹರಿಸಿ, ಕಣ್ಣುಕಟ್ಟಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿರುವ ಬಗ್ಗೆ ಸಂತ್ರಸ್ತೆಯ ಡೈರಿಯಲ್ಲಿ ನಮೂದಿಸಲಾಗಿದೆ. ಆ ಸ್ಥಳಕ್ಕೆ ಒಬ್ಬ ಬಸ್ ಚಾಲಕ ಬರುತ್ತಿರುವುದನ್ನು ಗಮನಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಚಾಲಕರ ಸಹಾಯದಿಂದ ಆಕೆ ತನ್ನ ಸ್ನೇಹಿತನ ಬಳಿಗೆ ತಲುಪಿದ್ದಾರೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂಬುದರ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
“ಡೈರಿಯಲ್ಲಿ, ಯುವತಿಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ, ಆದರೆ, ಆಕೆಯ ಅಪಹರಣ ಮತ್ತು ಕಣ್ಣುಗಳನ್ನು ಕಟ್ಟಿದ ನಂತರ ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಆಕೆ ವಿವರಿಸಿರುವ ರೀತಿ ನೋಡಿದರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂಬಂತೆ ತೋರುತ್ತಿದೆ. ರಾಜ್ಯ ಸರ್ಕಾರವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ” ಎಂದು ಎಸ್ಪಿ ರಾಥೋಡ್ ತಿಳಿಸಿದ್ದಾರೆ.
ಮೃತ ಯುವತಿಯು ಅಪರಾಧದ ಬಗ್ಗೆ ಸ್ಪಷ್ಟವಾಗಿ ಬರೆದಿಲ್ಲವಾದ್ದರಿಂದ, ಪೊಲೀಸರು ಆಕೆಯ ವೈದ್ಯಕೀಯ ವರದಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಅತ್ಯಾಚಾರದ ಬಗ್ಗೆ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿದೆ. ಆದರೆ, ಆಕೆಯ ಗುಪ್ತಾಂಗಗಳ ಪರೀಕ್ಷೆಯ ವರದಿಯು ಸಾವಿನ ನಿಖರ ಕಾರಣವನ್ನು ತಿಳಿಸಲಿವೆ” ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿಗಳ ಪತ್ತೆಗೆ ವಡೋದರಾ ನಗರ ಪೊಲೀಸರು, ರೈಲ್ವೆ ಪೊಲೀಸರು, ಅಹಮದಾಬಾದ್ ನಗರ ಅಪರಾಧ ವಿಭಾಗ ಎಲ್ಲರೂ ಒಟ್ಟಾಗಿ ಪ್ರತ್ಯೇಕ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತರ ರಾಜ್ಯಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಲು ಕೊಡುತ್ತಿಲ್ಲ ಸಾಕಿದ ಎಮ್ಮೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ರೈತ!