ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ದರು: ಡಿಕೆಶಿ ಆರೋಪ
ನಾನು ಬಿಜೆಪಿಯವರಿಗೆ ಬೆಂಬಲ ನೀಡಲಿಲ್ಲ. ನಾನು ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಅಲ್ಲದೆ, ಇದಕ್ಕೆಲ್ಲಾ ದಾಖಲೆ ಇವೆ ಎಂದೂ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ. ಕಾಂಗ್ರೆಸ್ಅನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇವೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಅವರಿಗೆ ಆಗಿರುವ ನೋವಿನ ಆಕ್ರೋಶವನ್ನು ಬಿಜೆಪಿ ಮೇಲೆ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ತಮ್ಮ ಕೋಪವನ್ನು ಕಾಂಗ್ರೆಸ್ ವಿರುದ್ದ ಹೊರ ಹಾಕುತ್ತಿದ್ದಾರೆ. ಅಲ್ಲದೆ, ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ, ಅವರ ಪಕ್ಷದಲ್ಲೇ ಏನಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಅಸ್ಥಿರತೆ ಇದೆ. ಆ ಅಸ್ಥಿರತೆಯನ್ನು ನಾವು ಸೃಷ್ಟಿಸಿಲ್ಲ. ಅವರ ಪಕ್ಷದವರೇ ಸೃಷ್ಟಿಸುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗುತ್ತಿದೆ. ಈ ಒಗ್ಗಟ್ಟೇ ಕಾಂಗ್ರೆಸ್ನ ಗೆಲುವು. ಆದರೆ, ಬಿಜೆಪಿಯಲ್ಲಿ ಎಲ್ಲದಕ್ಕೂ ವಿರೋಧ, ಭಿನ್ನಾಭಿಪ್ರಾಯ, ಒಡಕುಗಳಿವೆ ಎಂದು ಬಿಜೆಪಿಗರಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿಗರಿಗೆ ಅಧಿವೇಶನ ಮಾಡುವ ಇಚ್ಚೆಯೂ ಇಲ್ಲ. ನಾವು ಪ್ರತಿಭಟನೆ ಮಾಡಿದ ನಂತರ ಚಳಿಗಾಲದ ಅಧಿವೇಶನ ಕರೆದಿದ್ದಾರೆ. ಅದನ್ನೂ ಮುಂದೂಡಲು ಯತ್ನಿಸುತ್ತಿದ್ದಾರೆ. ಅದಕ್ಕೆ ಆಸ್ಪದ ಕೊಡುವುದಿಲ್ಲ. ಭಾನುವಾರ, ರಾಯಭಾಗದಲ್ಲಿ ಪ್ರವಾಹದಿಂದ ತತ್ತರಿಸಿಹೊದ 40 ಹೆಣ್ಣುಮಕ್ಕಳು ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ ಆ ಬಗ್ಗೆ ಸದನದಲ್ಲಿ ವಿಚಾರ ಮಂಡಿಸುತ್ತೇವೆ. ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸದನದಿಂದ 12 ಸಂಸದರ ಅಮಾನತು: ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ಸಂಸದೆ ಪ್ರಿಯಾಂಕ ಚತುರ್ವೇದಿ ರಾಜೀನಾಮೆ!