ಕೆಜಿ ಬಾಳೆ ಹಣ್ಣಿನ ಬೆಲೆ 2 ರಿಂದ 5 ರೂ.ಗೆ ಕುಸಿತ; ಬಾಳೆ ತೋಟಕ್ಕೆ ಬೆಂಕಿ ಹಚ್ಚಿದ ರೈತ
ಬಾಳೆ ಬೆಳೆ ಬೆಳೆದಿದ್ದ ರೈತರೊಬ್ಬರು ಬೆಳೆ ಬೆಳೆಯುವುದಕ್ಕಾಗಿ ತಾವು ಖರ್ಚು ಮಾಡಿದ್ದ ಹಣವನ್ನೂ ಬಾಳೆ ಬೆಳೆಯಿಂದ ಪಡೆಯಲಾಗದೇ ಬೇಸತ್ತು, ತನ್ನ ಬಾಳೆ ತೋಟವನ್ನು ಸುಟ್ಟು ಹಾಕಿರುವ ಘಟನೆ ಆಂಧ್ರ ಪ್ರದೇಶದ ಢೋಣೆ ಮಂಡಲದ ಧರ್ಮಾವರಂನಲ್ಲಿ ನಡೆದಿದೆ.
ಮಲ್ಲಿಕಾರ್ಜುನ ಎಂಬ ರೈತ, ತಮ್ಮ 3 ಎಕರೆ ಕೃಷಿ ಭೂಮಿಯಲ್ಲಿ ಬಾಳೆ ಬೆಳೆಯಲು 5 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಬೆಳೆಯನ್ನು ಮೂರು ಬಾರಿ ಮಾರಾಟ ಮಾಡಿ ಕೇವಲ 1,50,000 ರೂ. ಗಳಿಸಿದ್ದರು. ಇದರಿಂದ ನಿರಾಸೆಗೊಂಡ ಮಲ್ಲಿಕಾರ್ಜುನ ಅವರು, ಪರ್ಯಾಯ ಬೆಳೆ ಬೆಳೆಯಲು ಬಾಳೆ ಬೆಳೆಯನ್ನು ಸಂಪೂರ್ಣ ಸುಟ್ಟು ಹಾಕಿದ್ದಾರೆ.
ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಟನ್ ಬಾಳೆಗೆ 2,000-5,000 ರೂ.ಗೆ ಕುಸಿದಿರುವುದರಿಂದ ಜಿಲ್ಲೆಯ ಬಹುತೇಕ ಎಲ್ಲಾ ಬಾಳೆ ರೈತರ ಪರಿಸ್ಥಿತಿ ಇದೇ ಆಗಿದೆ. ಮಳೆಯಿಂದಾಗಿ ಬಾಳೆ ಬೆಳೆ ಹಾನಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಳೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹಿಂದಿನ ವರ್ಷ 5,500 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿತ್ತು. ಈ ವರ್ಷ 7,000 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. ಸಾಮಾನ್ಯವಾಗಿ, ಮೂರರಿಂದ ನಾಲ್ಕು ಬಾರಿ ಕಟಾವು ಮಾಡಲಾಗುತ್ತದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ರಘುನಾಥರೆಡ್ಡಿ ತಿಳಿಸಿದ್ದಾರೆ.
ಮೊದಲ ಮತ್ತು ಎರಡನೆ ಕಟಾವು ರೈತರಿಗೆ ಗರಿಷ್ಠ ಬೆಲೆಗಳನ್ನು ತರುತ್ತದೆ. ಇದೀಗ ಸಗಟು ಮಾರುಕಟ್ಟೆಗಳಲ್ಲಿ ಬಾಳೆಹಣ್ಣಿನ ಬೆಲೆ ಕೆಜಿಗೆ 2ರಿಂದ 5 ರೂ.ಗೆ ತಲುಪಿದೆ.
ಸರ್ಕಾರ ತಮ್ಮ ಉತ್ಪನ್ನಗಳಿಗೆ ಗುಣಮಟ್ಟದ ಆಧಾರದ ಮೇಲೆ ಟನ್ಗೆ ಕನಿಷ್ಠ 6 ರಿಂದ 8 ಸಾವಿರ ಬೆಂಬಲ ಬೆಲೆ ನೀಡಿ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಬೇಕು ಎಂದು ಮತ್ತೋರ್ವ ರೈತ ತಮ್ಮಡಪಲ್ಲಿಯ ಮುರಳಿಕೃಷ್ಣ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗುಜರಾತಿಯೊಬ್ಬ ದೇಶದಾದ್ಯಂತ ಹೋಗಬಹುದಾದರೆ; ಬಂಗಾಳಿ ಏಕೆ ಹೋಗಬಾರದು: ಮಮತಾ ಬ್ಯಾನರ್ಜಿ