ಯುಪಿಯಲ್ಲಿ ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಓವೈಸಿ ಜನಿವಾರ ಧರಿಸಿ ರಾಮ ಜಪ ಮಾಡುತ್ತಾರೆ: ಬಿಜೆಪಿ ಸಚಿವ
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣರಯಲ್ಲಿ ಬಿಜೆಪಿ ಗೆಲುವು ಸಾಧಿಸಿ, ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.
ರಾಹುಲ್ ಗಾಂಧಿ ಜನಿವಾರ ಧರಿಸಿದ್ದು, ಅಖಿಲೇಶ್ ಯಾದವ್ ಹನುಮಾನ್ ದೇಗುಲಕ್ಕೆ ಭೇಟಿ ಕೊಟ್ಟ ಘಟನೆಗಳ ಸಾಲಿಗೆ, ಓವೈಸಿ ಜನಿವಾರ ಧರಿಸಿ, ರಾಮನಾಮ ಜಪಿಸುವುದೂ ಸೇರಲಿದೆ ಎಂದು ಅವರು ಟೀಕಿಸಿದ್ದಾರೆ.
ಖಂಡಿತವಾಗಿಯೂ ನಾನು ಹೇಳಿದ್ದು ಆಗಿಯೇ ಆಗುತ್ತದೆ. ನಾವು ಬಿಜೆಪಿ ಅಜೆಂಡಾ ಮುಂದುವರಿಸುತ್ತೇವೆ. ನಮ್ಮ ಅಜೆಂಡಾದಿಂದಾಗಿಯೇ ಅಂದು ರಾಹುಲ್ ಗಾಂಧಿ ಜನಿವಾರ ಹಾಕಿದ್ದು, ಅಖಿಲೇಶ್ ಯಾದವ್ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದು ಎಂದು ಅವರು ಹೇಳಿದ್ದಾರೆ.
ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವವರು ರಾಮನ ಅಸ್ತಿತ್ವವನ್ನೇ ಒಪ್ಪಿಕೊಳ್ಳದೆ, ಅವನನ್ನು ಕಾಲ್ಪನಿಕ ಎಂದವರೆಲ್ಲ ಈಗ ಜನಿವಾರ ಧರಿಸುತ್ತಿದ್ದಾರೆ.ದೇಗುಲಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ದ ಕಿಡಿ ಕಾರಿದ್ದಾರೆ.