ಫ್ಯಾಕ್ಟ್ಚೆಕ್: ಮುಸ್ಕಾನ್ ಖಾನ್ ನಿಧನ ಎಂದು ವದಂತಿ ಹಬ್ಬಿಸಿದ ಕಿಡಿಗೇಡಿಗಳು
ಕರ್ನಾಟಕದಲ್ಲಿ ಕೆಲ ತಿಂಗಳಿನಿಂದ ನಡೆಯುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಎಲ್ಲರಿಗೂ ತಿಳಿದೇ ಇದೆ. ಮಂಡ್ಯದ ಕಾಲೇಜೊಂದರಲ್ಲಿ ಜೈ ಶ್ರೀರಾಮ್ ಎಂದು ಕೂಗಿಗೊಂಡು ಮೃಗಗಳಂತೆ ಎರಗಿ ಬಂದ ಪುಂಡರ ಗುಂಪನ್ನು ‘ಅಲ್ಲಾ ಊ ಅಕ್ಬರ್’ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದ ಮುಸ್ಕಾನ್ ಖಾನ್ ಹೆಚ್ಚು ಸುದ್ದಿಯಲ್ಲಿದ್ದರು.
ಆದರೆ ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ವಿದ್ಯಾರ್ಥಿನಿ ಮುಸ್ಕಾನ್ ಖಾನ್ ನಿಧನರಾಗಿದ್ದಾರೆ ಎಂಬ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ಹುಡುಗಿಯೊಬ್ಬಳನ್ನು ಜನರು ಹೊತ್ತೊಯ್ಯುತ್ತಿರುವ ಫೋಟೊವನ್ನು ಹಂಚಿಕೊಂಡು ‘ಅಲ್ಲಾ ಉ ಅಕ್ಬರ್’ ಘೋಷಣೆ ಕೂಗಿದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ನಿಧನ ಹೊಂದಿದ್ದಾಳೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ನಿಧನ ಹೊಂದಿದ್ದಾರೆ ಎಂಬ ಪೋಸ್ಟ್ನ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಪೋಸ್ಟ್ ಮಾಡಿದ ದೃಶ್ಯವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಅದೇ ಫೋಟೋವನ್ನು 2017 ರಲ್ಲಿ ಕೆಲವು ಸುದ್ದಿ ಸಂಸ್ಥೆಗಳು ಪ್ರಕಟಿಸಿರುವುದು ಕಂಡುಬಂದಿದೆ. ‘Rediff.com’ ವೆಬ್ಸೈಟ್ ಅದೇ ಫೋಟೋವನ್ನು ಅಪ್ಲೋಡ್ ಮಾಡಿದೆ ಲೇಖನದ ಶೀರ್ಷಿಕೆಯಲ್ಲಿ “ ಕಾಶ್ಮೀರದಲ್ಲಿ ವಿದ್ಯಾರ್ಥಿಗಳು ಭದ್ರತಾ ಪಡೆಗಳೊಂದಿಗೆ ಘರ್ಷಣೆ ” ಎಂದು ಹೇಳಿವೆ. ಇದನ್ನು 2017 ರಲ್ಲಿ ಪ್ರಕಟಿಸಲಾಗಿದೆ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಮುಸ್ಕಾನ್ ಖಾನ್ ಅವರು ನಿಜವಾಗಿಯೂ ನಿಧನರಾಗಿದ್ದರೆ, ಹೆಚ್ಚಿನ ಮಾಧ್ಯಮಗಳು ಅದರ ಬಗ್ಗೆ ವರದಿ ಮಾಡುತ್ತಿದ್ದವು. ಆದರೆ ಯಾವುದೇ ಪ್ರತಿಷ್ಠಿತ ಸುದ್ದಿ ಸಂಸ್ಥೆ ಮುಸ್ಕಾನ್ ಖಾನ್ ಸಾವಿನ ಬಗ್ಗೆ ವರದಿ ಮಾಡಿಲ್ಲ. ಬಾಂಗ್ಲಾದೇಶದ ಸುದ್ದಿ ಸಂಸ್ಥೆಯಾದ ‘ಜಮುನಾ ಟಿವಿ’ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿರುವ ನಿಧನದ ಹೇಳಿಕೆಯು ಕೇವಲ ವದಂತಿಯಾಗಿದ್ದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಹೇಳಲಾಗಿದೆ.
ಅಲ್ಲದೆ, ಮುಸ್ಕಾನ್ ಖಾನ್ ಕ್ಷೇಮವಾಗಿದ್ದಾರೆ ಎಂದು ಆಕೆಯ ಕುಟುಂಬದವರು ‘ಬೂಮ್ ಲೈವ್’ಗೆ ಮಾಹಿತಿ ನೀಡಿದ್ದಾರೆ. ವಾಸ್ತವದಲ್ಲಿ ಮುಸ್ಕಾನ್ ಮತ್ತು ಅವರ ಕುಟುಂಬ ರಂಜಾನ್ ಸಮಯದಲ್ಲೇ ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮಕ್ಕಾಗೆ ತೀರ್ಥ ಯಾತ್ರೆಗೆ ಹೋಗಿರುವುದು ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಕಾನ್ ಖಾನ್ ನಿಧನರಾಗಿದ್ದಾರೆ ಎಂಬುದೆಲ್ಲ ಸುಳ್ಳು ಮತ್ತು ಅವರು ತಮ್ಮ ಕುಟುಂಬದವರೊಂದಿಗೆ ಆರೋಗ್ಯವಾಗಿದ್ದಾರೆ ಎಂದು ಬೂಮ್ಲೈವ್ ವರದಿ ಮಾಡಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ರಂಜಾನ್ ಆಚರಣೆ ವೇಳೆ ಮುಸ್ಲಿಮರು ಮುಂಬೈನ ನಡುರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಹಳೆಯ ಘಟನೆ