ಫ್ಯಾಕ್ಟ್ಚೆಕ್: ಆಂಧ್ರದಲ್ಲಿ ನಡೆದ ಕರಡಿ ದಾಳಿಯನ್ನು ಜಾರ್ಖಂಡ್ನಲ್ಲಿ ಹುಲಿ ದಾಳಿ ಎಂದು ತಪ್ಪಾಗಿ ಹಂಚಿಕೆ
ಜಾರ್ಖಂಡ್ನ ಪಲಾಜೋರಿಯಲ್ಲಿ ಹುಲಿ ದಾಳಿಯ ಚಿತ್ರಗಳು ಎಂದು ಹೇಳುವ ಪೋಸ್ಟ್ ಮೂಲಕ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮೂರು ಜನರ ಮೇಲೆ ದಾಳಿ ಮಾಡಿರುವ ಹುಲಿಯು ನಂತರ ಗೋವಿನ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಇದೇ ರೀತಿಯ ಚಿತ್ರಗಳನ್ನು ಹೊಂದಿರುವ ತೆಲುಗು ಲೇಖನ ಲಭ್ಯವಾಗಿದೆ. ಲೇಖನದ ಪ್ರಕಾರ, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ವಜ್ರಪುಕೊಟ್ಟೂರಿನಲ್ಲಿ ಕರಡಿ ದಾಳಿ ಮಾಡಿದ ಚಿತ್ರಗಳು ಎಂದು ಹೇಳಲಾಗಿದೆ. 19 ಜೂನ್ 2022 ರಂದು, ಕಿಡಿಸಿಂಗಿ ಗ್ರಾಮದಲ್ಲಿ ಕರಡಿಯೊಂದು 72 ವರ್ಷದ ವ್ಯಕ್ತಿಯನ್ನು ಕೊಂದಿತ್ತು. ಮರುದಿನವೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಆರು ಜನರ ಮೇಲೆ ಮತ್ತೆ ದಾಳಿ ಮಾಡಿದೆ ಎಂದು ವರದಿಯಾಗಿತ್ತು.
ಸಂಬಂಧಿತ ಕೀವರ್ಡ್ಗಳೊಂದಿಗೆ ಇಂಟರ್ನೆಟ್ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳನ್ನು ಸುದ್ದಿ ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂದಿದೆ (ಇಲ್ಲಿ ಮತ್ತು ಇಲ್ಲಿ). 20 ಜೂನ್ 2022 ರಂದು ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಕರಡಿ ದಾಳಿಯಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡ ಕೆಲವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಅರಣ್ಯ ಇಲಾಖೆಯ ಸಿಬ್ಬಂದ್ದಿಗಳು ಗ್ರಾಮಸ್ಥರ ಸಹಾಯದಿದಂದ ಕರಡಿಯನ್ನು ಸೆರೆಹಿಡಿಯಲಾಯಿತು. ವೈಜಾಗ್ ಮೃಗಾಲಯಕ್ಕೆ ತೆರಳುವ ಮಾರ್ಗ ಮಧ್ಯೆ ಕರಡಿ ಸಾವನ್ನಪ್ಪಿದ್ದು, ಅದರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಜಾರ್ಖಂಡ್ನ ಪಲಾಜೋರಿ ಪ್ರದೇಶದಲ್ಲಿ ಹುಲಿ ದಾಳಿ ಮಾಡಿದೆ ಎಂಬ ಇತ್ತೀಚಿನ ಸುದ್ದಿ ಲೇಖನಗಳು ನಮಗೆ ಕಂಡುಬಂದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರಪ್ರದೇಶದಲ್ಲಿ ಕರಡಿ ದಾಳಿಯ ಫೋಟೋಗಳನ್ನು ಜಾರ್ಖಂಡ್ನಲ್ಲಿ ಹುಲಿ ದಾಳಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಜಾರ್ಖಂಡ್ನ ಪಲಾಜೋರಿಯಲ್ಲಿ ಹುಲಿ ಜನರ ಮೇಲೆ ದಾಳಿ ಮಾಡಿದೆ ಎಂಬ ಇತ್ತೀಚಿನ ಸುದ್ದಿ ಲೇಖನಗಳು ನಮಗೆ ಕಂಡುಬಂದಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ರಾಹುಲ್ ಗಾಂಧಿ ಬಗ್ಗೆ ಸುಳ್ಳು ಸುದ್ದಿ ಹರಡಿದ Zee News