ಫ್ಯಾಕ್ಟ್ಚೆಕ್: ಅತ್ಯಾಚಾರಕ್ಕೆ ಯತ್ನಿಸಿ ತನ್ನ ತುಟಿಯನ್ನೆ ಕಳೆದುಕೊಂಡ ಆರೋಪಿ ಮುಸ್ಲಿಮನಲ್ಲ, ಬದಲಿಗೆ ಹಿಂದೂ
ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ಬಲತ್ಕಾರದಿಂದ ಚುಂಬಿಸಲು ಬಂದ ವ್ಯಕ್ತಿಯ ತುಟಿಯನ್ನು ಕಚ್ಚಿ ಗಾಯಗೊಳಿಸಿದ್ದ ಘಟನೆ ವರದಿಯಾಗಿತ್ತು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಸಂತ್ರಸ್ಥೆಯಿಂದ ತುಟಿಯನ್ನು ಕತ್ತರಿಸಿಕೊಂಡ ವ್ಯಕ್ತಿ ಮುಸ್ಲಿಂ ಎಂದು ಪ್ರತಿಪಾದಿಸಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
“ಅತ್ಯಾಚಾರ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನು ಕಚ್ಚಿದ್ದಲ್ಲದೆ, ಹಲ್ಲುಗಳಿಂದ ಅವನ್ನು ಕತ್ತರಿಸಿ ಹಾಕುವ ಮೂಲಕ ಉತ್ತರ ಪ್ರದೇಶದ ಮೀರತ್ನಲ್ಲಿ ಯುವತಿಯೊಬ್ಬಳು ಸಾಹಸ ಮಾಡಿದ್ದಾಳೆ. ಯುವತಿ ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ಪಾಪಿ ಅತ್ಯಾಚಾರ ಎಸಗಲು ಬಂದಿದ್ದ. ಅತ್ಯಾಚಾರಕ್ಕೆ ಪ್ರಯತ್ನಿಸುವ ಪರಭಕ್ಷಕನಿಗೆ ಪಾಠ ಕಲಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
ಆರೋಪಿಯ ಹೆಸರು ಮೊಹಮ್ಮದ್ ಇಸ್ರಾರ್”
ಇದೇ ಪ್ರತಿಪಾದನೆಯೊಂದಿಗೆ ಟ್ವಿಟರ್ನಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದ್ದು, ಇಲ್ಲಿ ನೋಡಬಹುದು. ಹಾಗಿದ್ದರೆ ಆರೋಪಿ ಮುಸಲ್ಮಾನನೆಂದು ಅವನ ಹೆಸರು ಮೊಹಮ್ಮದ್ ಇಸ್ರಾರ್ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಫೆಬ್ರವರಿ 5, 2023 ರಂದು ಪ್ರಕಟವಾದ ಅಮರ್ ಉಜಾಲಾ ವರದಿ ಲಭ್ಯವಾಗಿದ್ದು, ವರದಿಯ ಪ್ರಕಾರ, ದೌರಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೀರತ್ನ ಅಜ್ಹೋಟಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದಾಗ ಅವನ ತುಟಿಗಳನ್ನು ಕಚ್ಚಿದ್ದಾರೆ. ವರದಿಯಲ್ಲಿ ಆರೋಪಿಯ ಹೆಸರನ್ನು ಲಾವಡ್ ನಿವಾಸಿ ಮೋಹಿತ್ ಸೈನಿ ಎಂದು ಉಲ್ಲೇಖಿಸಲಾಗಿದೆ. ಆ ಬಳಿಕ ಸೈನಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ,
ಸಂತ್ರಸ್ಥೆಯ ಹೇಳಿಕೆಯ ಪ್ರಕಾರ:
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸುತ್ತಮುತ್ತ ಯಾರೂ ಇರಲಿಲ್ಲ. ಜನರೂ ಕೂಡ ಹೆಚ್ಚಾಗಿ ತಿರುಗಾಡುತ್ತರಲಿಲ್ಲ. ಅಷ್ಟರಲ್ಲಿ ಹಿಂದಿನಿಂದ ಬಂದ ಮೋಹಿತ್ ಸೈನಿ, ನನ್ನನ್ನು ಬಲವಾಗಿ ತಬ್ಬಿಕೊಂಡಿದ್ದ. ಇದರಿಂದ ನನಗೆ ಬಹಳ ಆತಂಕವಾಗಿತ್ತು. ನನ್ನನ್ನು ಹಿಡಿದದ್ದು ಯಾರು ಎನ್ನುವುದು ಮೊದಲಿಗೆ ಗೊತ್ತಾಗಿರಲಿಲ್ಲ. ಆಕೆ ಕೂಗಲು ಆರಂಭಿಸಿದಾಗ ಆತ, ನನ್ನ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಎಂದು ಯುವತಿ ಹೇಳಿದ್ದಾಳೆ. ಇದಾದ ಬಳಿಕ ನನ್ನನ್ನು ಗದ್ದೆಗೆ ಎಳೆದೊಯ್ದ ಆತ ಮೈಮೇಲಿನ ಬಟ್ಟೆಯನ್ನು ಹರಿದು ಹಾಕತೊಡಗಿದ್ದ ಎಂದು ದೈನಿಕ್ ಭಾಸ್ಕರ್ಗೆ ತಿಳಿಸಿದ್ದಾರೆ.
ಸಂತ್ರಸ್ಥೆಯ ಹೇಳಿಕೆಯ ಪ್ರಕಾರ ನನ್ನನ್ನು ರಕ್ಷಿಸಿಕೊಳ್ಳುವುದೇ ನನಗೆ ಮುಖ್ಯವಾಗಿತ್ತು. ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೆ ಎಂದು ಪೊಲೀಸರಿಗೆ ಯುವತಿ ತಿಳಿಸಿದ್ದಾಳೆ. ಇದ್ದಕ್ಕಿದ್ದಂತೆ ಯುವಕ ಆಕೆಯನ್ನು ಬಲವಂತವಾಗಿ ಚುಂಬಿಸಲು ಆರಂಭ ಮಾಡಿದ್ದ. ಇದರಿಂದ ಕೋಪ ಹಾಗೂ ಗಾಬರಿಯಲ್ಲಿದ್ದ ನಾನು, ರಕ್ಷಿಸಿಕೊಳ್ಳುವ ಸಲುವಾಗಿ ಆತನ ತುಟಿಯನ್ನು ಹಲ್ಲಿನ ಸಹಾಯದಿಂದ ಬಹಳ ಗಟ್ಟಿಯಾಗಿ ಕಚ್ಚಿದೆ. ನಾನು ಕಚ್ಚಿದ್ದು ಎಚ್ಡು ಗಟ್ಟಿಯಾಗಿತ್ತೆಂದರೆ, ಆತನ ತುಟಿ ತುಂಡಾಗಿ ನೆಲದ ಮೇಲೆ ಬಿದ್ದಿತ್ತು. ತುಟಿ ನೆಲಕ್ಕೆ ಬಿದ್ದ ಬೆನ್ನಲ್ಲಿಯೇ ಆತ ನೋವಿನಿಂದ ಕಿರುಚಾಡಲು ಆರಂಭ ಮಾಡಿದ್ದ. ಅಷ್ಟರಲ್ಲಿ ನಾನೂ ಕೂಡ ಇನ್ನಷ್ಟು ಗಟ್ಟಿಯಾಗಿ ಕೂಗಲು ಆರಂಭಿಸಿದೆ ಎಂದು ಯುವತಿ ಹೇಳಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಆರೋಪಿ ಮೋಹಿತ್ ಸೈನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ದೌರಾಲಾ ಸಂಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿಚಾರಣೆ ವೇಳೆ ತನ್ನ ಹೆಸರನ್ನು ಮೋಹಿತ್ ಸೈನಿ ಎಂದು ಹೇಳಿದ್ದು, ಆತ ಲಾವಾಡದ ಮೊಹಲ್ಲಾ ಸೈಯಾನ್ ಪ್ರದೇಶದ ನಿವಾಸಿ. ಅವನು ಯಾವ ಉದ್ದೇಶಕ್ಕಾಗಿ ಗ್ರಾಮವನ್ನು ತಲುಪಿದ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಸಂತ್ರಸ್ತೆ ಬಗ್ಗೆ ಆತನಿಗೆ ಮೊದಲೇ ಗೊತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಆರೋಪಿಯ ಹೆಸರು ಮೋಹಿತ್ ಸೈನಿ ಮತ್ತು ಅವನು ಹಿಂದೂ ಸಮುದಾಯಕ್ಕೆ ಸೇರಿದವನು ಎಂದು ಬೂಮ್ಗೆ ಮಾಹಿತಿ ನೀಡಿರುವ ಇನ್ಸ್ಪೆಕ್ಟರ್, ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ವದಂತಿ ಸುಳ್ಳು ಎಂದು ಇನ್ಸ್ಪೆಕ್ಟರ್ ಬೂಮ್ಗೆ ಖಚಿತಪಡಿಸಿದ್ದಾರೆ . ಫೆಬ್ರವರಿ 4 ರಂದು ಈ ಘಟನೆ ನಡೆದಿದ್ದು, ಆರೋಪಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದಾಗ ಆಕೆ ತುಟಿ ಕಚ್ಚಿದ್ದಾರೆ. ಈ ಘಟನೆ ಸಂಬಂಧ 323, 504, 506 ಸೇರಿದಂತೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮೀರತ್ ಲಾವಾಡ ಪ್ರದೇಶದಲ್ಲಿ ನಡೆದಿರುವ ಘಟನೆಯಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿ ಸಂತ್ರಸ್ಥೆಯಿಂದ ತನ್ನ ತುಟಿಯನ್ನು ಕತ್ತರಿಸಿಕೊಂಡ ವ್ಯಕ್ತಿಯ ಹೆಸರು ಮೋಹಿತ್ ಸೈನಿ, ಹಿಂದೂ ಸಮುದಾಯಕ್ಕೆ ಸೇರಿದ್ದಾನೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯನ್ನು ಸುಳ್ಳು ಮತ್ತು ಕೋಮು ದ್ವೇಷದ ಪ್ರತಿಪಾದನೆಯೊಂದಿಗೆ ಆರೋಪಿ ಮುಸ್ಲಿಂ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಇಂತಹ ಆರೋಪದಲ್ಲಿ ಭಾಗಿಯಾದವರನ್ನು ಧರ್ಮದ ಆಧಾರದಲ್ಲಿ ನೋಡದೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂಬುದು ಎಲ್ಲರ ಒತ್ತಾಯವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಫೆಬ್ರವರಿ 14 ಪ್ರೇಮಿಗಳ ದಿನದಂದೇ ‘ಭಗತ್ ಸಿಂಗ್ ಮತ್ತು ಸಂಗಡಿಗರನ್ನು’ ಗಲ್ಲಿಗೇರಿಸಲಾಗಿತ್ತೆ?