ಫ್ಯಾಕ್ಟ್ಚೆಕ್ : 2020ರ ಕೋವಿಡ್ ಸಂದರ್ಭದ ದೃಶ್ಯಗಳನ್ನು ಅಯೋಧ್ಯೆಗೆ ಆಗಮಿಸಿದ ‘ವಾನರ ಸೇನೆ’ ಎಂದು ತಪ್ಪಾಗಿ ಹಂಚಿಕೆ
ರಾವಣನ ಲಂಕೆಗೆ ಹೋಗಲು, ಯುದ್ಧದಲ್ಲಿ ರಾವಣನನ್ನು ಸೋಲಿಸಲು ರಾಮನಿಗೆ ಸಹಾಯ ಮಾಡಿದ್ದು ಹನುಮಂತ ಹಾಗೂ ಆತನ ವಾನರ ಸೇನೆ ಎಂದು ರಾಮಾಯಣದ ಬರುವ ಕಥೆಯಲ್ಲಿ ಕೇಳಿದ್ದೇವೆ. ಈಗ ರಾಮ ಮಂದಿರದ ಉದ್ಗಾಟನೆ ಸಂದರ್ಭದಲ್ಲಿ ವಾನರ ಸೇನೆ ಅಯೋಧ್ಯೆಗೆ ಆಗಮಿಸಿವೆ ಎಂಬ ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಅಯೋಧ್ಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ವಾನರ (ಕೋತಿಗಳ) ಗುಂಪು ಆಗಮಿಸಿದೆ ಎಂದು ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
“ಎಲ್ಲಿ ರಾಮನೋ ಅಲ್ಲಿ ಹನುಮನು ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸಾಗುತ್ತಿದೆ ಭಗವಾನ್ ಶ್ರೀ ರಾಮಚಂದ್ರನ ವಾನರ ಸೇನೆ, ಜೈ ಶ್ರೀರಾಮ್” ಎಂಬ ಹೇಳಿಕೆಯೊಂದಿಗೆ ಇಂದ್ರಪ್ರಸ್ಥ ಎಂಬ ಫೇಸ್ಬುಕ್ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 11, 2020 ರಂದು ಥಾಯ್ಲೆಂಡ್ನ ನೇಷನ್ ಟಿವಿ ಮಾಡಿರುವ ವರದಿ ಲಭ್ಯವಾಗಿದೆ. ವರದಿ ಪ್ರಕಾರ, “ಫಾರಾ ಕನ್ ದೇಗುಲ ಮತ್ತು ಫರಾ ಪ್ರಾಂಗ್ ಸಾಮ್ ಯೋಟ್ ನಲ್ಲಿ ಸಾಗುತ್ತಿದ್ದ ವಾಹನ ಚಾಲಕರಿಗೆ ಅಚ್ಚರಿ ಕಾದಿತ್ತು. ಈ ದೇಗುಲ ಸುತ್ತ ಇದ್ದ ದೊಡ್ಡ ಸಂಖ್ಯೆಯ ಮಂಗಗಳು ರಸ್ತೆಗೆ ಬಂದಿದ್ದು , ನೋಡಲು ಭಯ ಹುಟ್ಟಿಸುವಂತಿತ್ತು ಎಂದು ವರದಿಯಾಗಿದೆ.
ಮಾರ್ಚ್ 11, 2020ರ ಖಾಸೋದ್ ವರದಿಯ ಪ್ರಕಾರ, “ಚಾವೊ ಚೀಲೋಪಬರಿ ಎಂಬಲ್ಲಿ ಸಾವಿರಾರು ಕೋತಿಗಳು ನಡು ರಸ್ತೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿವೆ ಎಂದು ವರದಿಯಾಗಿದೆ.
ಈ ವಿಡಿಯೋಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ, ಮಾರ್ಚ್ 13, 2020 ರಂದು ಗಾರ್ಡಿಯನ್ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವರದಿಯೊಂದು ಲಭ್ಯವಾಗಿದೆ.
ಗಾರ್ಡಿಯನ್ ನ್ಯೂಸ್ ಯೂಟ್ಯೂಬ್ ವರದಿಯ ಪ್ರಕಾರ, ಥೈಲ್ಯಾಂಡ್ನ ಚಿಲೋಪಬರಿ ಎಂಬ ಸ್ಥಳದಲ್ಲಿ ಈ ಕೋತಿಗಳು ಕಾಣಿಸಿಕೊಂಡಿವೆ ಎಂದು ಹೇಳಿದೆ. ಈ ಸ್ಥಳ ಸದಾ ಪ್ರವಾಸಿಗರಿಂದ ತುಂಬಿರುತ್ತದೆ, ಅವರು ನೀಡುತ್ತಿದ್ದ ಆಹಾರದಿಂದ ಕೋತಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.
ಆದರೆ ಕೋವಿಡ್ ಕಾರಣಕ್ಕೆ ಪ್ರವಾಸಿಗರು ಆಗಮಿಸದೆ ಕಪಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಕೋತಿಗಳು ನಡು ರಸ್ತೆಗೆ ಬಂದು ಪರಸ್ಪರ ಕಾದಾಡುವಾಗ ಅಲ್ಲೇ ಇದ್ದ ಸ್ಥಳೀಯರೊಬ್ಬರು ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಈ ದೃಶ್ಯಗಳು ಅಯೋಧ್ಯಗೆ ಸಂಬಂಧಿಸಿದ್ದಲ್ಲ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ..
ಒಟ್ಟಾರೆಯಾಗಿ ಹೇಳುವುದಾದರೆ, 2020ರ ಕೋವಿಡ್ ಸಂದರ್ಭದಲ್ಲಿ ಥೈಲೆಂಡ್ನಲ್ಲಿ ಆಹಾರ ಹರಸಿಕೊಂಡು ನೂರಾರು ಕೋತಿಗಳು ನಡು ರಸ್ತೆಗೆ ಆಗಮಿಸಿ ಪರಸ್ಪರ ಕಾದಾಡಿದ ದೃಶ್ಯಗಳನ್ನು, ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ‘ವಾನರ ಸೇನೆ’ ಆಗಮಿಸಿವೆ ಎಂದು ತಪ್ಪಾಗಿ ಹಂಚಿಕೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಕೇರಳದ ಬಾಲ ಗಾಯಕ ಆದಿತ್ಯ ಸುರೇಶ್ನನ್ನು ಎಸ್ಪಿಬಿ ಮೊಮ್ಮಗ ಎಂದು ತಪ್ಪಾಗಿ ಹಂಚಿಕೆ