FACT CHECK | ಹಿಂದೂಗಳ ತೆರಿಗೆ ಹಣವನ್ನು ಮುಸ್ಲಿಮರಿಗೆ ಖರ್ಚು ಮಾಡುತ್ತಿದೆಯೇ ಸಿದ್ದರಾಮಯ್ಯ ಸರ್ಕಾರ?
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು ಹಿಂದೂಗಳ ತೆರಿಗೆ ಹಣ ಮುಸಲ್ಮಾನರ ಮನೆಗೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. “ವಕ್ಫ್ ಬೋರ್ಡ್ಗೆ 100 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 393 ಕೋಟಿ. ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ” ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. 2024 ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ಮುಸಲ್ಮಾನರಿಗೆ ನೀಡಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಕೆ ಮಾಡಲು ಹಿಂದೂಗಳ ತೆರಿಗೆಯನ್ನು ಮುಸ್ಲಿಮರಿಗೆ ವ್ಯಯ ಮಾಡುತ್ತಿದೆ ಎಂಬಂತೆ ಬಿಂಬಿಸಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ, ಒಂದು ಸಿದ್ದಾಂತದ, ಒಂದು ರಾಜಕೀಯ ಪಕ್ಷದ ಪ್ರೇರಿತವಾಗಿ ಕಂಡುಬಂದ ಹಿನ್ನಲೆಯಲ್ಲಿ 2024ರ ಬಜೆಟ್ ಮಂಡನೆಯಾದ ದಿನದಿಂದಲೂ ಇಂತಹ ಪ್ರತಿಪಾದನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಾಮಾನ್ಯವಾಗಿವೆ. ಹಾಗಾಗಿ ಇಂತಹ ಪೋಸ್ಟ್ಗಳಿಗೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸರ್ಚ್ ಮಾಡಿದಾಗ ಅವರ ಹೇಳಿಕೆ ಲಭ್ಯವಾಗಿದೆ.
2024ರಲ್ಲಿ ರಾಜ್ಯದ ಒಟ್ಟು ಬಜೆಟ್ ಗಾತ್ರ 3,71,000 ಕೋಟಿ ರೂಗಳಾಗಿದ್ದು, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14 ಪರ್ಸೆಂಟ್ ಇದೆ. ಆದರೆ, ನಾನು ಮುಸ್ಲಿಂ ಸಮುದಾಯಕ್ಕೆ ಶೇ.0.8 ಪರ್ಸೆಂಟ್ ಅನುದಾನವನ್ನು ಮಾತ್ರ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಕರ್ನಾಟಕದಲ್ಲಿ ಕೇವಲ ಒಂದು ಸಮುದಾಯದಿಂದ ಮಾತ್ರವಲ್ಲ, ಎಲ್ಲಾ ಸಮುದಾಯಗಳಿಂದಲೂ ತೆರಿಗೆ ಸಂಗ್ರಹಿಸಲಾಗುತ್ತಿದೆ ಮತ್ತು ಎಲ್ಲಾ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್ನಲ್ಲಿ ಅನುದಾನವನ್ನು ಹಂಚಲಾಗುತ್ತದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ ಕೂಡ ಮಾರ್ಚ್ 2023ರ ಬಜೆಟ್ ನಲ್ಲಿ 123 ಕೋಟಿ ರೂ ಅನುದಾನವನ್ನು ಮುಸ್ಲಿಂ ಸಮುದಾಯಕ್ಕೆ ಘೋಷಿಸಿತ್ತು.
ಅದರಲ್ಲಿ 31 ಅಲ್ಪಸಂಖ್ಯಾತ ವಸತಿ ಶಾಲೆಗಳ ಅಭಿವೃದ್ಧಿಗೆ 96 ಕೋಟಿ ರೂ. ಅನುದಾನ, ರಾಜ್ಯದ 29 ಅಲ್ಪಸಂಖ್ಯಾತ ವಸತಿ ನಿಲಯಗಳ ನಿರ್ವಹಣೆಗೆ 25 ಕೋಟಿ ರೂ, ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಆತ್ಮ ರಕ್ಷಣೆಯ ತರಬೇತಿಗೆ 2 ಕೋಟಿ ರೂ. ಅನುದಾನ ಸೇರಿದಂತೆ ಇನ್ನೂ ಹಲವು ಸವಲತ್ತುಗಳನ್ನು ನೀಡಲಾಗಿತ್ತು. ಹಿಂದೆ H.D. ಕುಮಾರಸ್ವಾಮಿ ಬಿಜೆಪಿಯ ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ಸರ್ಕಾರಗಳು ಸೇರಿದಂತೆ, ದೇಶದ ಇತರೆ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ಕೂಡ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಅನುದಾನವನ್ನು ಘೋಷಿಸಿವೆ.
ಒಂದು ರಾಜ್ಯ ಅಥವಾ ದೇಶದ ಅಭಿವೃದ್ದಿ ಎಂದರೆ ಅಲ್ಲಿ ನೆಲೆಸಿರುವ ಎಲ್ಲ ಸುಮುದಾಯದ ಏಳಿಗೆಗಾಗಿ ಸರ್ಕಾರಗಳು ಕಾರ್ಯಕ್ರಮವನ್ನು ರೂಪಿಸಬೇಕು, ಆಗ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ. ಅದನ್ನೆ ಕರ್ನಾಟಕ ಸರ್ಕಾರ ಮಾಡುತ್ತಿದೆ. ಆದರೆ ಇದನ್ನು ತಿರುಚಿ ಹಿಂದೂಗಳ ತೆರಿಗೆ ಸಾಬ್ರ ಮನೆಗೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಜ್ಯ ಸರ್ಕಾರ ಮಾಡಿರುವ ಸಾಲದ ಕುರಿತು BJP ಹೇಳುತ್ತಿರುವ ಅಂಕಿ ಅಂಶಗಳು ಎಷ್ಟು ನಿಜ? ಎಷ್ಟು ಸುಳ್ಳು?