ಕಾಂಗ್ರೆಸ್ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಸಿಎಂ ಅನುದಾನ ಕಡಿತ- ಶಾಸಕ ಬಿ ಶಿವಣ್ಣ
ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾಗಿದ್ದ ಅನುದಾನ ಏಕಾಏಕಿ ಕಡಿತಗೊಳಿಸುವ ಮೂಲಕ ಸಿಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆನೇಕಲ್ ಶಾಸಕ ಬಿ ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಆನೇಕಲ್ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ಅನುದಾನ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಆನೇಕಲ್ ಕ್ಷೇತ್ರದ ಅಭಿವೃದ್ಧಿಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 50 ಕೋಟಿ ಅನುದಾನ ಅನುಮೋದನೆಗೊಂಡಿತ್ತು. ಬಳಿಕ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರಕ್ಕೆ ನೀಡಿದ್ದ ಅನುದಾನ ಕಡಿತಗೊಳಿಸಿದ್ದಾರೆ. ಸಮಾಜ ಕಲ್ಯಾಣ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ನಿಗದಿ ಮಾಡಲಾಗಿದ್ದ ಅನುದಾನ ಕಡಿತಗೊಳಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಸಿಎಂರನ್ನು ಪ್ರಶ್ನಿಸಿದಾಗ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದು, ಇಲ್ಲಿಯವರೆಗೆ ಅನುದಾನ ಬಿಡುಗಡೆಯಾಗಿಲ್ಲ.
ಕೊಟ್ಟ ಮಾತು ತಪ್ಪಿದ ಸಿಎಂ:- ದ್ವೇಷದ ರಾಜಕಾರಣ ಮಾಡುವುದಿಲ್ಲ ನಾನು ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಅಂತಾರೆ. ಆದ್ರೆ ಆನೇಕಲ್ ಕ್ಷೇತ್ರ ಸಹ ಕರ್ನಾಟಕ ರಾಜ್ಯದಲ್ಲಿಯೆ ಇದೆ. ಆನೇಕಲ್ ಕ್ಷೇತ್ರದಲ್ಲಿ ಐದಾರು ಕೈಗಾರಿಕಾ ಪ್ರದೇಶಗಳಿವೆ . ವರ್ಷಕ್ಕೆ 15 ಸಾವಿರ ಕೋಟಿ ಟ್ಯಾಕ್ಸ್ ಪಾವತಿ ಮಾಡಲಾಗುತ್ತಿದೆ. ಆದ್ರು ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ. ಹಾಗಾದ್ರೆ ಕ್ಷೇತ್ರ ಅಭಿವೃದ್ಧಿಯಾಗುವುದು ಹೇಗೆ ಎಂದು ಪ್ರಶ್ನೆಸಿದ ಅವರು ಕೇವಲ ಮಾತಿನಲ್ಲಿ ರಾಜ್ಯದ ಅಭಿವೃದ್ಧಿ ಅಭಿವೃದ್ಧಿ ಎಂದರೆ ಸಾಲದು. ಜೆಡಿಎಸ್ ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನಕ್ಕೆ ಕತ್ತರಿ ಹಾಕುವುದು ಬೇಡ ಅನುದಾನ ನೀಡುವಂತೆ ಸಿಎಂರಲ್ಲಿ ಮನವಿ ಮಾಡುತ್ತೆನೆ. ಇಲ್ಲವಾದರೆ ಹೋರಾಟ ಮಾಡುವುದಾಗಿ ಆನೇಕಲ್ ಶಾಸಕ ಬಿ ಶಿವಣ್ಣ ಸಿಎಂ ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.